ಹುಬ್ಬಳ್ಳಿ:

ರೈತರಿಗೆ ಕಬ್ಬಿನ ಬಾಕಿ ನೀಡದ ಕಾರ್ಖಾನೆಗಳ ಗೋದಾಮುಗಳನ್ನು ಜಿಲ್ಲಾಧಿಕಾರಿ ಜಪ್ತಿ ಮಾಡಬೇಕು. ಅದರಲ್ಲಿರುವ ಸಕ್ಕರೆ ಮಾರಾಟ ಮಾಡಿ ರೈತರಿಗೆ ಹಣ ನೀಡಬೇಕೆಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ಸಕ್ಕರೆ ಕಾರ್ಖಾನೆಗಳು ಇಂದಿಗೂ ರೈತರ ಕಬ್ಬಿನ ಬಾಕಿ ಉಳಿಸಿಕೊಂಡಿದ್ದು, ಈ ಕುರಿತು ಹಲವು ಬಾರಿ ಮನವಿ ಮಾಡಿ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಇದೇ ನೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.

ಸರ್ಪೈಸಿ ಕಾಯ್ದೆ ರದ್ದು ಮಾಡಿ:

ಖಾಸಗಿ ಫೈನಾನ್ಸ್‌, ಬ್ಯಾಂಕ್‌ಗಳು ರೈತರ ಸಾಲ ವಸೂಲಾತಿಗಾಗಿ ತಂದಿರುವ ಸರ್ಪೈಸಿ (SARFAESI) ಕಾಯ್ದೆ ರೈತರಿಗೆ ಮಾರಕವಾಗಿದೆ. ಇದು ರೈತರು ಮರುಪಾವತಿಸದ ಆಸ್ತಿಗಳನ್ನು ನ್ಯಾಯಾಲಯದ ಮಧ್ಯಸ್ಥಿಕೆಯಿಲ್ಲದೆ ವಶಪಡಿಸಿಕೊಂಡು ಹರಾಜು ಹಾಕುವ ಮೂಲಕ ಸಾಲ ವಸೂಲಿ ಮಾಡಲು ಅಧಿಕಾರ ಹೊಂದಿದೆ. ಇದರಿಂದಾಗಿ ರೈತರಿಗೆ ತೀವ್ರ ಸಂಕಷ್ಟ ಎದುರಾಗಲಿದ್ದು ಸರ್ಕಾರ ಈ ಕಾಯ್ದೆ ರದ್ದುಗೊಳಿಸಬೇಕು ಎಂದ ಅವರು, ರೈತರಿಗೆ ಸಾಲ ಹಾಗೂ ಗೋಲ್ಡ್ ಲೋನ್‌ ನೀಡುವಾಗ ಸಿಬಿಲ್ ಸ್ಕೋರ್ ನೋಡಿ ಸಾಲ ನೀಡುವ ನಿಯಮ ರದ್ದುಗೊಳಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.


ಎಥೆನಾಲ್ ಉತ್ಪಾದನೆ:

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಸಿಲಿಂಡರ್‌ ಅಭಾವ ಸೃಷ್ಟಿಯಾಗಿದೆ. ಇಂತಹ ಸಮಸ್ಯೆ ತಪ್ಪಿಸಲು ಹಾನಿಕಾರಕವಲ್ಲದ ಪರಿಸರ ಸ್ನೇಹಿ ಕಬ್ಬಿನಿಂದ ಹಾಗೂ ಇತರೆ ಧಾನ್ಯಗಳಿಂದ ಎಥೆನಾಲ್ ಉತ್ಪಾದನೆ ಹಾಗೂ ಅದರ ಬಳಕೆ ಕುರಿತು ರೈತರಿಗೆ ಜಾಗೃತಿ ಮೂಡಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಆಗ್ರಹಿಸಿದರು.

ಮಹಾರಾಷ್ಟ್ರದ ಬಾರಾಮತಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಎಐ ತಂತ್ರಜ್ಞಾನ ಅಳವಡಿಸಿಕೊಂಡು ಕಡಿಮೆ ಖರ್ಚಿನಲ್ಲಿ ಕಬ್ಬು ಬೆಳೆ ಬೆಳೆದು ಹೆಚ್ಚು ಇಳುವರಿ ಪಡೆದಿದ್ದಾರೆ. ಈ ಕುರಿತು ಮಾಹಿತಿ ಅರಿಯಲು ಬುಧವಾರ ರಾಜ್ಯದ ರೈತರ ತಂಡವೊಂದು ಅಲ್ಲಿಗೆ ತೆರಳಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಬೆಳಗಾಂವ್ಕರ, ರಾಜ್ಯ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ, ಪರಶುರಾಮ ಎತ್ತಿನಗುಡ್ಡ, ಬಲೂರ ರವಿಕುಮಾರ, ರಮೇಶ ಹೂಗಾರ, ಅತ್ತಹಳ್ಳಿ ದೇವರಾಜ್, ಬಸವರಾಜ ಪಾಟೀಲ, ಸುರೇಶ ಪಾಟೀಲ, ಎಂ.ವಿ. ಗಾಡಿ, ಲಕ್ಷ್ಮೀದೇವಿ, ಉಳುವಪ್ಪ ಬಳಗೇರ ಸೇರಿದಂತೆ ಹಲವರಿದ್ದರು.