ಅರಣ್ಯ ಹಕ್ಕು ಹೋರಾಟ ಸಮಿತಿಗಳ ರಾಜ್ಯ ಒಕ್ಕೂಟದ ಕಾರ್ಯಕಾರಿ ಸಮಿತಿಯು ರಾಜ್ಯ ಸಂಚಾಲಕ ಚಂದ್ರಕಾಂತ ಕೊಚರೇಕರ ಅಧ್ಯಕ್ಷತೆಯಲ್ಲಿ ಗುರುವಾರ ಇಲ್ಲಿನ ಟೀಡ್ ಟ್ರಸ್ಟಿನ ಸಭಾಂಗಣದಲ್ಲಿ ಸಭೆ ಸೇರಿ ಅರಣ್ಯ ಹಕ್ಕು ಮಾನ್ಯತೆ ಕಾಯ್ದೆಯ ಅನುಷ್ಠಾನದಲ್ಲಿನ ರಾಜ್ಯದ ವೈಫಲ್ಯತೆಗೆ ಕಳವಳ ವ್ಯಕ್ತಪಡಿಸಿದೆ.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಅರಣ್ಯ ಹಕ್ಕು ಹೋರಾಟ ಸಮಿತಿಗಳ ರಾಜ್ಯ ಒಕ್ಕೂಟದ ಕಾರ್ಯಕಾರಿ ಸಮಿತಿಯು ರಾಜ್ಯ ಸಂಚಾಲಕ ಚಂದ್ರಕಾಂತ ಕೊಚರೇಕರ ಅಧ್ಯಕ್ಷತೆಯಲ್ಲಿ ಗುರುವಾರ ಇಲ್ಲಿನ ಟೀಡ್ ಟ್ರಸ್ಟಿನ ಸಭಾಂಗಣದಲ್ಲಿ ಸಭೆ ಸೇರಿ ಅರಣ್ಯ ಹಕ್ಕು ಮಾನ್ಯತೆ ಕಾಯ್ದೆಯ ಅನುಷ್ಠಾನದಲ್ಲಿನ ರಾಜ್ಯದ ವೈಫಲ್ಯತೆಗೆ ಕಳವಳ ವ್ಯಕ್ತಪಡಿಸಿದೆ.

ವಸತಿ ಮತ್ತು ಜೀವನೋಪಾಯಕ್ಕೆ ಅರಣ್ಯ ಭೂಮಿಯನ್ನು ಅವಲಂಬಿಸಿರುವ ರಾಜ್ಯದ ಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಯ ಹಕ್ಕು ಸಹಿತ ಗರಿಷ್ಠ ಸೌಲಭ್ಯ ದೊರಕಿಸಿಕೊಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ, ನೀತಿ ನಿರೂಪಕರು ಮತ್ತು ಜನಪ್ರತಿನಿಧಿಗಳು ಅಗತ್ಯ ಚಿಂತನೆ ನಡೆಸಬೇಕು, ಅಗತ್ಯವಿದ್ದರೆ ಅರಣ್ಯ ಹಕ್ಕುಕಾಯ್ದೆಯ ಇತರ ಪಾರಂಪರಿಕ ಅರಣ್ಯವಾಸಿ ವ್ಯಾಖ್ಯೆಯ ಮೂರು ತಲೆಮಾರಿನ ವಿವರಣೆಗೆ ಅಗತ್ಯ ತಿದ್ದುಪಡಿ ತರಬೇಕು ಎಂದು ಅದು ತನ್ನ ಸರ್ವಾನುಮತದ ನಿರ್ಣಯದಲ್ಲಿ ಆಗ್ರಹಪಡಿಸಿದೆ.

ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನದಲ್ಲಿ ಕರ್ನಾಟಕವು ದೇಶದಲ್ಲಿ ಕೊನೆಯ ಸ್ಥಾನದಲ್ಲಿದೆ. ಅರಣ್ಯ ಹಕ್ಕುಕಾಯ್ದೆಯ ಜಾರಿಯಲ್ಲಿ ರಾಜ್ಯದ ಪ್ರಗತಿಯು ಕೇವಲ ಶೇ. ೫.೫೪ ರಷ್ಟಾಗಿದೆ. ಕೇರಳದಲ್ಲಿ ಶೇ. ೬೪.೬೯, ತೆಲಂಗಾಣ ಶೇ. ೩೫.೩೨, ತಮಿಳುನಾಡು ಶೇ. ೨೯.೫೪, ಮಧ್ಯಪ್ರದೇಶ ಶೇ. ೪೬.೯೯, ಜಾರ್ಖಂಡ ಶೇ. ೫೫.೯೫, ಆಂಧ್ರಪ್ರದೇಶ ಶೇ. ೭೯.೨೧ ಪ್ರಗತಿ ಇದೆ. ದೇಶದ ೨೧ ರಾಜ್ಯಗಳ ಸರಾಸರಿ ಪ್ರಗತಿಯು ಒಟ್ಟಾರೆಯಾಗಿ ಶೇ. ೪೯.೦೮ರಷ್ಟು ಇದೆ ಎನ್ನುವುದನ್ನು ಒಕ್ಕೂಟ ತಿಳಿಸಿದೆ.

ಅರಣ್ಯ ಹಕ್ಕುಕಾಯ್ದೆಯು ಅರಣ್ಯವಾಸಿಗಳ ಪರವಾಗಿದ್ದರೂ ಸಹ ಅರಣ್ಯವಾಸಿಗಳಿಗೆ ಭೂಮಿಯ ಹಕ್ಕು ನೀಡಲು ರಾಜ್ಯಸರ್ಕಾರ ನಿರ್ಲಕ್ಷಿಸುವುದೇಕೆ? ಎಂದು ಪ್ರಶ್ನಿಸಿದ್ದಾರೆ.

ಒಕ್ಕೂಟದ ಕಾರ್ಯಕಾರಿ ಸದಸ್ಯರಾದ ದಾವಣಗೆರೆಯ ಕೆ.ವಿ. ರೂಪಾ ನಾಯ್ಕ, ಶ್ರೀಧರ ಮಲೆಕುಡಿಯ, ಟೀಡ್ ಟ್ರಸ್ಟಿನ ಮೋಹಿನಿ ಎಸ್. ಪೂಜಾರಿ, ರಾಮನಾಥ ಸಿದ್ಧಿ, ಲೋಕೇಶ ಗೌಡ, ಉಡುಪಿಯ ಅಶೋಕ ಶೆಟ್ಟಿ, ಮಂಜುನಾಥ ಸಿ.ಶಾಸ್ತ್ರಿ, ಗುತ್ತೇವ್ವಾ ಮಣ್ಣೂರು, ಕಾಮಾಕ್ಷಿ ರಾಯ್ಕರ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.