ಕುದೂರು: ಜಾತ್ರೆ, ಉತ್ಸವಗಳು ಜನರಲ್ಲಿನ ದ್ವೇಷ ಅಸೂಯೆಗಳನ್ನು ಅಂತ್ಯಗೊಳಿಸಿ ಐಕ್ಯತೆಯಿಂದ ಬೆರೆತು ಸಂಭ್ರಮಿಸುವ ಮನೋಭಾವ ಬೆಳೆಸಲು ಪೂರಕ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು

ಕುದೂರು: ಜಾತ್ರೆ, ಉತ್ಸವಗಳು ಜನರಲ್ಲಿನ ದ್ವೇಷ ಅಸೂಯೆಗಳನ್ನು ಅಂತ್ಯಗೊಳಿಸಿ ಐಕ್ಯತೆಯಿಂದ ಬೆರೆತು ಸಂಭ್ರಮಿಸುವ ಮನೋಭಾವ ಬೆಳೆಸಲು ಪೂರಕ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.

ಗ್ರಾಮದ ತುಮಕೂರು ರಸ್ತೆಯಲ್ಲಿರುವ ಶ್ರೀರಾಮಲಿಂಗ ಚೌಡೇಶ್ವರಿ ಅಮ್ಮನವರ ದೇವಾಲಯದ ವಾರ್ಷಿಕೋತ್ಸವ ಸಮಾರಂಭದ ಪ್ರಯುಕ್ತ ಏರ್ಪಡಿಸಿದ್ದ ಆನೆಯ ಮೇಲೆ ಅಂಬಾರಿಯಲ್ಲಿ ದೇವಿಯನ್ನು ಕೂರಿಸಿ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕುದೂರಿಗೆ ಸಾಂಸ್ಕೃತಿಕ ಪಟ್ಟಣ ಎಂಬ ಖ್ಯಾತಿ ಇದೆ. ಇಂತಹ ಗ್ರಾಮದಲ್ಲಿ ಯಾವುದೇ ಕಾರ್‍ಯಕ್ರಮಗಳನ್ನು ಜನರು ಒಟ್ಟಾಗಿ ಮಾಡುವುದು ಇಲ್ಲಿನ ಜನರ ಸೌಹಾರ್ದತೆಯನ್ನು ಬಿಂಬಿಸುತ್ತದೆ ಎಂದರು.

ಗ್ರಾಮದ ಹಿರಿಯ ಮುಖಂಡ ಜಯಚಂದ್ರಬಾಬು ಮಾತನಾಡಿ, ಧಾರ್ಮಿಕ ಕಾರ್‍ಯಕ್ರಮಗಳು ಗ್ರಾಮಗಳಲ್ಲಿ ನಿರಂತರ ನಡೆಯುತ್ತಾ ಬರುತ್ತಿದೆ. ಆ ಊರಿಗೆ ಯಾವುದೇ ರೀತಿಯಲ್ಲಿ ತೊಂದರೆಗಳು ಬರುವುದಿಲ್ಲ. ಹಾಗೊಂದು ವೇಳೆ ತೊಂದರೆಗಳು ಬಂದರೂ ಅದನ್ನು ಪರಿಹರಿಸಿಕೊಳ್ಳುವಂತಹ ಶಕ್ತಿ ಅವ್ಯಕ್ತ ರೂಪದಲ್ಲಿ ಪ್ರತಿಯೊಬ್ಬರಲ್ಲೂ ಮಿಳಿತವಾಗಿರುತ್ತದೆ ಎಂದು ತಿಳಿಸಿದರು.

ಪ್ರಧಾನ ಅರ್ಚಕ ಶಿವರಾಂ ಮಾತನಾಡಿ, ಆನೆ ಮೇಲೆ ಅಂಬಾರಿಯಲ್ಲಿ ದೇವಿಯನ್ನು ಕೂರಿಸಿ ಮಂಗಳವಾದ್ಯಗಳೊಂದಿಗೆ ಪೂರ್ಣಕುಂಭದ ಮೂಲಕ ಗ್ರಾಮ ಬೀದಿಗಳಲ್ಲಿ ಮೆರವಣಿಗೆ ಹೋಗುತ್ತಿದ್ದರೆ, ಜನರಲ್ಲಿನ ಉತ್ಸಾಹ ಮತ್ತು ಅಭಿಮಾನದಿಂದ ಅವರ ಒತ್ತಡ ಒಂದಿಷ್ಟು ಕಡಿಮೆಯಾಗಿ ಮನಸ್ಸು ಹೂವಂತೆ ಅರಳುತ್ತಿರುವುದನ್ನು ಕಂಡಾಗ ಇಂತಹ ಧಾರ್ಮಿಕ ಕಾರ್‍ಯಕ್ರಮಗಳ ಆಚರಣೆ ನಿಜಕ್ಕೂ ಸಾರ್ಥಕ ಭಾವ ಮೂಡಿಸುತ್ತದೆ ಎಂದರು.

ದೇವಾಲಯ ಸಮಿತಿಯ ಮುಖ್ಯಸ್ಥ ಕೆ.ಬಿ.ಬಾಲರಾಜ್ ಮಾತನಾಡಿ, ಜನರ ಸಹಕಾರ ಮತ್ತು ಪ್ರೀತಿ ಒಳ್ಳೆಯ ಕೆಲಸಗಳಿಗೆ ಪ್ರೇರೇಪಣೆ ನೀಡುತ್ತದೆ. ಅದಕ್ಕೆ ಸಾಕ್ಷಿಯಾಗಿ ಸದ್ಯದಲ್ಲಿಯೇ ದೇವಾಂಗ ಸಮುದಾಯ ಭವನ ನಿರ್ಮಾಣ ಮಾಡುವ ಕಾರ್‍ಯಕ್ಕೆ ಚಾಲನೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ್, ಕೆ.ಬಿ.ಚಂದ್ರಶೇಖರ್, ಯತೀಶ್, ಮಂಜೇಶ್, ಗೋವಿಂದರಾಜ್, ಮುರಳೀಧರ್, ಶಿವಕುಮಾರ್, ಮತ್ತಿತರರು ಹಾಜರಿದ್ದರು.

1ಕೆಆರ್ ಎಂಎನ್ 3,4.ಜೆಪಿಜಿ

3.ಕುದೂರು ಗ್ರಾಮದಲ್ಲಿ ಶ್ರೀರಾಮಲಿಂಗ ಚೌಡೇಶ್ವರಿ ಅಮ್ಮನವರ ದೇವಾಲಯದ ವಾರ್ಷಿಕೋತ್ಸವದ ಪ್ರಯುಕ್ತ ಆನೆ ಮೇಲೆ ಅಂಬಾರಿಯಲ್ಲಿ ದೇವಿಯ ಮೆರವಣಿಗೆ ಮಾಡಲಾಯಿತು.

4.ಶ್ರೀರಾಮಲಿಂಗ ಚೌಡೇಶ್ವರಿ ಅಮ್ಮನವರ ದೇವಾಲಯದ ವಾರ್ಷಿಕೋತ್ಸವದಲ್ಲಿ ಸುಂದರವಾಗಿ ಚೌಡೇಶ್ವರಿ ಅಮ್ಮನವರಿಗೆ ಅಲಂಕಾರ ಮಾಡಲಾಗಿತ್ತು.