ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಸಹಕುಟುಂಬ ಪರಿವಾರ ಸಮೇತರಾಗಿ ಜಾತ್ರೆ, ಉತ್ಸವ ಹಾಗೂ ಮತ್ತಿತರ ಧಾರ್ಮಿಕ ಸಮಾರಂಭಗಳಲ್ಲಿ ಪಾಲಕರು ತಮ್ಮ ಮಕ್ಕಳೊಂದಿಗೆ ಭಾಗವಹಿಸಬೇಕು.
ಮುಂಡರಗಿ: ನಮ್ಮ ಪೂರ್ವಜರು ಆಚರಿಸುತ್ತಾ ಬಂದಿರುವ ಜಾತ್ರೆ, ಹಬ್ಬ, ಹರಿದಿನಗಳಿಗೆ ತುಂಬಾ ವಿಶಾಲವಾದ ಅರ್ಥವಿದೆ. ಇತ್ತೀಚೆಗೆ ಜಾತ್ರೆಗಳು ಕೇವಲ ಮೋಜು, ಮಸ್ತಿಗೆ ಮೀಸಲಾಗುತ್ತಿರುವುದು ದುರ್ದೈವದ ಸಂಗತಿ ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ವಿಷಾದಿಸಿದರು.
ತಾಲೂಕಿನ ಕಲಕೇರಿ- ವಿರುಪಾಪುರದ ಮುದುಕೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಸಹಕುಟುಂಬ ಪರಿವಾರ ಸಮೇತರಾಗಿ ಜಾತ್ರೆ, ಉತ್ಸವ ಹಾಗೂ ಮತ್ತಿತರ ಧಾರ್ಮಿಕ ಸಮಾರಂಭಗಳಲ್ಲಿ ಪಾಲಕರು ತಮ್ಮ ಮಕ್ಕಳೊಂದಿಗೆ ಭಾಗವಹಿಸಬೇಕು ಎಂದರು.ಬನ್ನಿಕೊಪ್ಪದ ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಕಲ ವಿದ್ಯಾ ಪಾರಂಗತರಾಗಿರುವ ಹಾಗೂ ಸಕಲ ಸದ್ಗುಣ ಸಂಪನ್ನರಾಗಿರುವ ಶಿವಕುಮಾರ ದೇವರು ಮುದುಕೇಶ್ವರ ಮಠದ ಉತ್ತರಾಧಿಕಾರಿಯಾಗಿರುವುದು ಎಲ್ಲರಲ್ಲಿ ಹರ್ಷ ಮೂಡಿಸಿದೆ. ಇಂತಹ ಸರಳ ವ್ಯಕ್ತಿಯನ್ನು ಶ್ರೀಮಠಕ್ಕೆ ನಿಯೋಜಿಸುವ ಮೂಲಕ ಶ್ರೀಗುರು ಮುದುಕೇಶ್ವರ ಶಿವಾಚಾರ್ಯ ಸ್ವಾಮಿಗಳು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.
ಮುಂಡರಗಿ ಬಿಆರ್ಸಿ ಸಂಪನ್ಮೂಲ ವ್ಯಕ್ತಿ ಹನುಮರಡ್ಡಿ ಇಟಗಿ ಮಾತನಾಡಿದರು. ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ದಾಸೋಹ ಸೇವೆ ವಹಿಸಿಕೊಂಡಿದ್ದ ಶಿದ್ದನಗೌಡ ಪಾಟೀಲ ಹಾಗೂ ಪ್ರಭುಗೌಡ ತಲೆಗೌಡರ ಕುಟುಂಬ ವರ್ಗದವರನ್ನು ಹಾಗೂ ರಥಾಲಂಕಾರ ಸೇವೆ ಮಾಡಿದ ಈಶ್ವರಗೌಡ ಪಾಟೀಲ, ಕುಮಾರಸ್ವಾಮಿ ಹಿರೇಮಠ ಸೇರಿದಂತೆ ಅನೇಕರನ್ನು ಸನ್ಮಾನಿಸಲಾಯಿತು.ಶ್ರೀಮಠದ ನಿಯೋಜಿತ ಪೀಠಾಧಿಪತಿ ಶಿವಕುಮಾರ ದೇವರು, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಸತ್ಯಣ್ಣ ದೇಸಾಯಿ, ಎಸ್.ಎನ್. ಡೊಣಿ, ಶಿದ್ದನಗೌಡ ಪಾಟೀಲ, ಪಿ.ಎಂ. ಪಾಟೀಲ, ಮಹೇಶ ದ್ರಾಕ್ಷಿ, ಬಸವರಾಜ ಕೊಪ್ಪಣ್ಣವರ, ಮುತ್ತನಗೌಡ ಪಾಟೀಲ, ಬಿ.ಎಸ್. ರಡ್ಡೇರ, ಎಸ್.ಎನ್. ದೇವರಗೂಳಿ, ಪ್ರಕಾಶ ತಿಪ್ಪಾಪುರ, ಯಂಕಪ್ಪ ಹುಳಕಣ್ಣವರ ಉಪಸ್ಥಿತರಿದ್ದರು. ಧನಂಜಯ ದ್ರಾಕ್ಷಿ ಸ್ವಾಗತಿಸಿದರು. ಯಂಕಪ್ಪ ಯಕ್ಲಾಸಪುರ ನಿರೂಪಿಸಿದರು.