ಸಾರಾಂಶ
ಹಾನಗಲ್ಲ: ಸಮಾಜದಲ್ಲಿ ಸಾಮರಸ್ಯ ಮೂಡಲಿ ಎನ್ನುವ ಸದುದ್ದೇಶದಿಂದ ನಮ್ಮ ಹಿರಿಯರು ಜಾತ್ರೆ, ಉತ್ಸವ, ಉರುಸು ಆಚರಿಸುತ್ತಾ ಬಂದಿದ್ದು, ಇಂಥ ಆಚರಣೆಗಳ ನೆಪದಲ್ಲಿ ನಾವೆಲ್ಲರೂ ಒಂದೆಡೆ ಸೇರಿ, ಪರಸ್ಪರ ಬೆರೆಯುವುದರಿಂದ ಬಾಂಧವ್ಯ ಬೆಳೆಯಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಹಾನಗಲ್ಲಿನ ದರ್ಗಾದಲ್ಲಿರುವ ಸೈಯ್ಯದ್ ಮೌಲಾ ಅಲಿ ಮರ್ದಾನ ಏ ಗೈಬ್ ವಲಿ ಅವರ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಚಾದರ ಅರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಾತನಾಡಿದ ಅವರು, ಇಂದಿಗೂ ಕೂಡ ಗ್ರಾಮೀಣ ಪ್ರದೇಶಗಳಲ್ಲಿ ಹಿಂದೂಗಳ ಹಬ್ಬ ಹರಿದಿನಗಳಲ್ಲಿ ಮುಸ್ಲಿಮರು, ಮುಸ್ಲಿಮರ ಉರುಸು, ಮೊಹರಂ ಸೇರಿದಂತೆ ಇತರ ಆಚರಣೆಗಳಲ್ಲಿ ಹಿಂದೂಗಳು ಸಹ ಪಾಲ್ಗೊಂಡು ಸೌಹಾರ್ದತೆ ಮೆರೆಯುತ್ತಿರುವುದನ್ನು ಕಾಣುತ್ತೇವೆ. ಆಧುನಿಕತೆ ಎಷ್ಟೇ ಬೆಳೆದರೂ ಪದ್ಧತಿಗಳು ಮಾತ್ರ ಅಳಿದು ಹೋಗಿಲ್ಲ. ಎಲ್ಲರೂ ಒಂದಾಗಿ ಮಾನವೀಯ ಮೌಲ್ಯಗಳೊಂದಿಗೆ ಮುನ್ನಡೆಯಬೇಕಿದೆ. ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಮೇಲು, ಕೀಳು ಭಾವನೆ ಮೂಡದಂತೆ ಒಮ್ಮನಸಿನಿಂದ ಜೊತೆಗೂಡಿ ಸಾಗಬೇಕಿದೆ. ಅಂದಾಗ ಮಾತ್ರ ಸರ್ವಜನಾಂಗದ ಶಾಂತಿಯ ತೋಟದಲ್ಲಿ ಸಾಮಾಜಿಕ ನೆಮ್ಮದಿ ಮೂಡಲಿದೆ ಎಂದು ತಿಳಿಸಿದರು. ಪ್ರಮುಖರಾದ ಮತೀನ್ ಶಿರಬಡಗಿ, ಖುರ್ಷಿದ್ಅಹ್ಮದ್ ಹುಲ್ಲತ್ತಿ, ಮರ್ದಾನಸಾಬ ಬಡಗಿ, ಮುಕ್ತಿಯಾರ್ ಖೇಣಿ, ಸಿಕಂದರ್ ವಾಲಿಕಾರ, ಇಲಿಯಾಸ್ ಮಿಠಾಯಿಗಾರ, ನಿಯಾಜ್ಅಹ್ಮದ್ ಸರ್ವಿಕೇರಿ, ದುದ್ದುಸಾಬ ಅಕ್ಕಿವಳ್ಳಿ, ಗೌಸ್ಮೋದೀನ್ ತಾಂಡೂರ, ಜಾಫರ್ ಬಾಳೂರ, ಖಾಲಿದ್ ಶೇಷಗಿರಿ, ಫೈರೋಜ್ ಶಿರಬಡಗಿ, ನಿಸಾರ್ ಖಾಜಿ, ನಿಸಾರ ಬಡಗಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.