ಮೇಳದ ಸಂಯೋಜಕ ಗಣೇಶ್ ಮಾತನಾಡಿ, ಕಳೆದ ಐದು ವರ್ಷಗಳಿಂದ ವಿವಿಧ ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ರಾಜ್ಯದ ವಿವಿಧೆಡೆ ಗೃಹೋಪಯೋಗಿ ಹಾಗೂ ಆಹಾರ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಸ್ವದೇಶಿ ಉತ್ಪನ್ನಗಳ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸುವುದು ಹಾಗೂ ಸಣ್ಣ ಕೈಗಾರಿಕೆಗಳ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಕಲ್ಪಿಸುವುದು ಮೇಳದ ಪ್ರಮುಖ ಉದ್ದೇಶವಾಗಿದೆ ಎಂದರು.

ಕನ್ನಡಪ್ರಭವಾರ್ತೆ ಅರಸೀಕೆರೆ

ಸ್ಥಳೀಯವಾಗಿ ತಯಾರಾಗುವ ಸ್ವದೇಶಿ ಉತ್ಪನ್ನ ಹಾಗೂ ಗ್ರಾಮೀಣ ಭಾಗದ ಸಣ್ಣ ಕೈಗಾರಿಕೆಗಳ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ಮೂಲಕ ಉತ್ಪಾದಕರಿಗೆ ಆರ್ಥಿಕವಾಗಿ ನೆರವಾಗುವ ಅಗತ್ಯವಿದೆ ಎಂದು ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ ಹೇಳಿದರು.

ನಗರದ ಸೇವಾಲಾಲ್ ಭವನದಲ್ಲಿ ಇನ್ನರ್‌ ವ್ಹೀಲ್‌ ಕ್ಲಬ್, ರೋಟರಿ ಕ್ಲಬ್, ರೋಟರಿ ಶಾಲೆ ಹಾಗೂ ಕುಂದಾಪುರ ಬೆನಕ ಇವೆಂಟ್ಸ್ ಸಹಯೋಗದಲ್ಲಿ ಆಯೋಜಿಸಿರುವ ಗೃಹೋಪಯೋಗಿ ಹಾಗೂ ಆಹಾರ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಇಂದಿನ ಆಧುನಿಕ ಜೀವನಶೈಲಿ ನಡುವೆಯೂ ದೇಶೀಯವಾಗಿ ತಯಾರಾಗುವ ವಸ್ತುಗಳ ಬಳಕೆಗೆ ಸಾರ್ವಜನಿಕರು ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ಗ್ರಾಮೀಣ ಪ್ರದೇಶಗಳ ಗುಡಿ ಕೈಗಾರಿಕೆಗಳು, ಕರಕುಶಲ ಕಲೆ ಹಾಗೂ ಸಣ್ಣ ಉದ್ಯಮಗಳಿಗೆ ಉತ್ತೇಜನ ದೊರೆಯುವುದರ ಜೊತೆಗೆ ಸ್ಥಳೀಯ ಉತ್ಪಾದಕರ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದು ತಿಳಿಸಿದರು.

ಮೇಳದ ಸಂಯೋಜಕ ಗಣೇಶ್ ಮಾತನಾಡಿ, ಕಳೆದ ಐದು ವರ್ಷಗಳಿಂದ ವಿವಿಧ ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ರಾಜ್ಯದ ವಿವಿಧೆಡೆ ಗೃಹೋಪಯೋಗಿ ಹಾಗೂ ಆಹಾರ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಸ್ವದೇಶಿ ಉತ್ಪನ್ನಗಳ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸುವುದು ಹಾಗೂ ಸಣ್ಣ ಕೈಗಾರಿಕೆಗಳ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಕಲ್ಪಿಸುವುದು ಮೇಳದ ಪ್ರಮುಖ ಉದ್ದೇಶವಾಗಿದೆ ಎಂದರು.

ಮೇಳದಲ್ಲಿ ರಾಸಾಯನಿಕ ಮುಕ್ತ ಆಹಾರ ಪದಾರ್ಥಗಳು, ವಿವಿಧ ತಳಿಯ ಹಣ್ಣು ಹಾಗೂ ಹೂವಿನ ಗಿಡಗಳು, ಆಯುರ್ವೇದ ಆಧಾರಿತ ಗೃಹೋಪಯೋಗಿ ಉತ್ಪನ್ನಗಳು ಸೇರಿದಂತೆ ವಿವಿಧ ವಸ್ತುಗಳ ಮಳಿಗೆಗಳನ್ನು ತೆರೆಯಲಾಗಿದೆ. ಸ್ಥಳೀಯ ಉತ್ಪಾದಕರು ಹಾಗೂ ಸಣ್ಣ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಸುರೇಶ್, ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಕೆ.ಪಿ.ಎಸ್. ವಿಶ್ವನಾಥ್, ಇನ್ನರ್‌ವ್ಹೀಲ್ ಕ್ಲಬ್ ಕಾರ್ಯದರ್ಶಿ ಆರತಿ ಸಂತೋಷ್, ಖಜಾಂಚಿ ರೇಖಾ ಜಿತೇಂದ್ರ, ಗೀತಾ, ಸವಿತಾ, ಕುಸುಮ, ಸುಧಾ ಕಲ್ಯಾಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.