ಸಾರಾಂಶ
ಈ ವಿಷಯವನ್ನು ಕೇಂದ್ರ ಕೃಷಿ ಮಂತ್ರಾಲಯದ ಅಧೀನದ ಕಲ್ಲಿಕೋಟೆಯಲ್ಲಿರುವ ಅಡಕೆ ನಿರ್ದೇಶನಾಲಯದ ನಿರ್ದೇಶಕ ಡಾ. ಹೋಮಿ ಚೆರಿಯಾನ್ ಅವರ ಗಮನಕ್ಕೆ ತರಲಾಗಿದೆ ಎಂದು ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮಾರುಕಟ್ಟೆಗೆ ಲಗ್ಗೆಯಿಟ್ಟ ನಕಲಿ ಅಡಕೆಅಡಕೆ ಮಾರುಕಟ್ಟೆಗೆ ನಕಲಿ ಅಡಕೆ ದಾಳಿ ಇಟ್ಟಿದ್ದು, ಇದರ ಬಗ್ಗೆ ಜಾಗರೂಕರಾಗಿರುವಂತೆ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಬೆಳೆಗಾರರಿಗೆ ಎಚ್ಚರಿಕೆ ನೀಡಿದೆ.
ಕೆಲವು ತಿಂಗಳ ಹಿಂದೆ ಪಶ್ಚಿಮ ಬಂಗಾಳದ ಕಸ್ಟಮ್ಸ್ ಕಚೇರಿಯಿಂದ ಅಡಿಕೆಯ ಮಾದರಿಯನ್ನು ಅದರ ವಿಶ್ಲೇಷಣೆಗಾಗಿ ಅಧಿಕಾರಿಗಳು ಮಂಗಳೂರಿನ ಕ್ಯಾಂಪ್ಕೋದ ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನಕ್ಕೆ ಕಳುಹಿಸಿಕೊಟ್ಟಿದ್ದರು. ಕಸ್ಟಮ್ಸ್ ಹೇಳಿಕೆಯ ಪ್ರಕಾರ ಅವರು ೯೦೦ ಕೆಜಿಯಷ್ಟು ಅಂತಹ ಮಾಲನ್ನು ತಡೆಹಿಡಿದ್ದಿದ್ದರು. ತಡೆಹಿಡಿದ ಮಾಲಿನ ಒಟ್ಟು ಮೌಲ್ಯ ೪,೫೦,೦೦೦ ರು.ಎಂದು ತಿಳಿಸಲಾಗಿತ್ತು.ಆ ಮಾಲು ಹೊರಗಿನಿಂದ ನೋಡಲು ಕೆಂಪು ಅಡಕೆ (ಬೆಟ್ಟೆ) ಯನ್ನು ಹೋಲುತ್ತಿತ್ತು. ಆದರೆ ಅವುಗಳನ್ನು ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಡಾ. ಕೇಶವ ಭಟ್ ಅವರು ವಿಶ್ಲೇಷಿಸಿದಾಗ ಅವುಗಳು ಯಾವುದೂ ಅಡಕೆಯೇ ಆಗಿರಲಿಲ್ಲ. ಬದಲಾಗಿ ಯಾವುದೋ ಬೇರೆ ಕಾಯಿಯನ್ನು ತುಂಡರಿಸಿ ಅದಕ್ಕೆ ಅಡಕೆ ಚೊಗರನ್ನು ಲೇಪಿಸಿದಂತೆ ಕಂಡುಬಂದಿತ್ತು. ಒಳಗಡೆಯ ರಚನೆ ಅಡಕೆಯ ರಚನೆಯಂತೆ ಇರದೆ ಬರೀ ಬಿಳಿ ಬಣ್ಣದಿಂದ ಕೂಡಿತ್ತು ಎಂಬುದನ್ನು ಪತ್ತೆ ಮಾಡಿದ್ದರು.
ಈ ರೀತಿಯಲ್ಲಿ ನಕಲಿ ಅಡಕೆಯನ್ನು ಮಾರುಕಟ್ಟೆಗೆ ಬಿಡುಗಡೆಮಾಡುವ ಗುಂಪು ಕೂಡಾ ಇರುವುದು ಅಡಕೆ ಬೆಳೆಗಾರರಲ್ಲಿ ಆತಂಕವನ್ನು ಉಂಟುಮಾಡಿದೆ. ಅಡಕೆ ವರ್ತಕರು ಅದರಲ್ಲೂ ಕೆಂಪಡಕೆ ವ್ಯವಹಾರ ಮಾಡುವವರು, ಈ ದಿಶೆಯಲ್ಲಿ ಅತ್ಯಂತ ಜಾಗರೂಕರಾಗಿರುವುದು ತುಂಬಾ ಅವಶ್ಯ. ಈ ವಿಷಯವನ್ನು ಕೇಂದ್ರ ಕೃಷಿ ಮಂತ್ರಾಲಯದ ಅಧೀನದ ಕಲ್ಲಿಕೋಟೆಯಲ್ಲಿರುವ ಅಡಕೆ ನಿರ್ದೇಶನಾಲಯದ ನಿರ್ದೇಶಕ ಡಾ. ಹೋಮಿ ಚೆರಿಯಾನ್ ಅವರ ಗಮನಕ್ಕೆ ತರಲಾಗಿದೆ ಎಂದು ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.