ಸಾರಾಂಶ
ಪ್ರಧಾನ ಮಂತ್ರಿ ಕಾರ್ಯಾಲಯದ ಸಂಸದೀಯ ಪ್ರಧಾನ ಕಾರ್ಯದರ್ಶಿಯ ಸೋಗಿನಲ್ಲಿ ಶ್ರೀಕೃಷ್ಣ ಮಠಕ್ಕೆ ಕರೆ ಮಾಡಿ, ದೇವರ ವಿಶೇಷ ದರ್ಶನದ ಸೌಲಭ್ಯ ಪಡೆದ ವ್ಯಕ್ತಿಯ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಪ್ರಧಾನ ಮಂತ್ರಿ ಕಾರ್ಯಾಲಯದ ಸಂಸದೀಯ ಪ್ರಧಾನ ಕಾರ್ಯದರ್ಶಿಯ ಸೋಗಿನಲ್ಲಿ ಶ್ರೀಕೃಷ್ಣ ಮಠಕ್ಕೆ ಕರೆ ಮಾಡಿ, ದೇವರ ವಿಶೇಷ ದರ್ಶನದ ಸೌಲಭ್ಯ ಪಡೆದ ವ್ಯಕ್ತಿಯ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಅ.9ರಂದು ಉದಯ್ ಎಂಬಾತ, ಶ್ರೀ ಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠದ ದಿವಾನ ನಾಗರಾಜ್ ಆಚಾರ್ಯ ಅವರಿಗೆ ಕರೆ ಮಾಡಿ ತಾನು ಪ್ರಧಾನಮಂತ್ರಿ ಕಾರ್ಯಾಲಯದ ಸಂಸದೀಯ ಪ್ರಧಾನ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡು, ಕುಟುಂಬ ಸಮೇತರಾಗಿ ಮಠಕ್ಕೆ ಆಗಮಿಸುತ್ತಿದ್ದು, ದೇವರ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದ್ದಾರೆ. ಅದರಂತೆ ಅ.9ರಂದು ಭಾರತ ಸರ್ಕಾರ ಎಂದು ಬರೆದ ಇನ್ನೋವಾ ಕಾರಿನಲ್ಲಿ ಆಗಮಿಸಿದ ಡಾ.ಉದಯ್ ಹಾಗೂ ಕುಟುಂಬಸ್ಥರಿಗೆ ಮಠದ ಅಧಿಕಾರಿಗಳು ಸ್ವಾಗತಿಸಿ, ಉಳಿದುಕೊಳ್ಳುವುದಕ್ಕೆ ಸೂಕ್ತ ವಸತಿ ವ್ಯವಸ್ಥೆಯನ್ನು ಕಲ್ಪಿಸಿದ್ದರು ಮತ್ತು ಅ.10ರಂದು ಬೆಳಗ್ಗೆ ವಿಶೇಷ ದರ್ಶನ ಮಾಡಿಸಿದ್ದರು.ಆದರೆ ಅವರ ಚಲನವಲನದಿಂದ ಅನುಮಾನಗೊಂಡು ವಿಚಾರಿಸಿದಾಗ ಬಂದಾತ ಸೂಕ್ತ ಉತ್ತರವನ್ನು ನೀಡದೇ ಹಿಂತೆರಳಿದ್ದಾರೆ. ನಂತರ ಪ್ರಧಾನಮಂತ್ರಿಗಳ ವೆಬ್ ಸೈಟ್ ಪರಿಶೀಲಿಸಿದಾಗ, ಉದಯ ಎಂಬ ಅಧಿಕಾರಿಯ ಬಗ್ಗೆ ಮಾಹಿತಿ ದೊರೆತಿಲ್ಲ.
ಈ ಹಿನ್ನೆಲೆಯಲ್ಲಿ ಮಠದ ವ್ಯವಸ್ಥಾಪಕರಾದ ನಂದನ್ ಅವರು ಕೇಂದ್ರ ಸರ್ಕಾರದ ಅಧಿಕಾರಿ ಎಂದು ಹೇಳಿಕೊಂಡು, ಮಠಕ್ಕೆ ಆಗಮಿಸಿ, ನಂಬಿಸಿ, ಮೋಸ ಮಾಡಿದ್ದಾರೆ ಉಡುಪಿ ನಗರ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.