ನಕಲಿ ಇಡಿ ಅಧಿಕಾರಿಗಳ ತಂಡ ದಾಳಿ: 30 ಲಕ್ಷ ರು. ಲೂಟಿ

| Published : Jan 05 2025, 01:31 AM IST

ಸಾರಾಂಶ

ಶುಕ್ರವಾರ ರಾತ್ರಿ 8.10ರ ಸುಮಾರಿಗೆ ತಮಿಳುನಾಡು ನೋಂದಣಿಯ ಕಾರಿನಲ್ಲಿ 6 ಜನ ಅಪರಿಚಿತ ವ್ಯಕ್ತಿಗಳು ಸುಲೈಮಾನ್‌ ಅವರ ಮನೆಗೆ ಆಗಮಿಸಿ, ತಮ್ಮನ್ನು ಇ.ಡಿ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಇಡಿ ಅಧಿಕಾರಿಗಳು ಎಂದು ನಂಬಿಸಿದ ನಕಲಿ ಅಧಿಕಾರಿಗಳು ದಾಳಿ ನಡೆಸಿ ಬರೋಬ್ಬರಿ 30 ಲಕ್ಷ ರುಪಾಯಿ ಲೂಟಿ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದ ಬೋಳಂತೂರು ಎಂಬಲ್ಲಿ ನಡೆದಿದೆ. ಸಿಂಗಾರಿ ಬೀಡಿ ಸಂಸ್ಥೆಯ ಮಾಲಕ ಬೋಳಂತೂರು ಸಮೀಪದ ನಾರ್ಶ ನಿವಾಸಿ ಸುಲೈಮಾನ್ ಹಾಜಿ ಎಂಬವರ ಮನೆಯಲ್ಲಿ ಕೃತ್ಯ ನಡೆದಿದ್ದು, ಘಟನೆ ಕುರಿತಾಗಿ‌ ಅವರ ಪುತ್ರ ಮಹಮ್ಮದ್ ಇಕ್ಬಾಲ್ ವಿಟ್ಲ ಠಾಣೆಗೆ ದೂರು‌ ನೀಡಿದ್ದಾರೆ.

ಘಟನೆ ವಿವರ: ಶುಕ್ರವಾರ ರಾತ್ರಿ 8.10ರ ಸುಮಾರಿಗೆ ತಮಿಳುನಾಡು ನೋಂದಣಿಯ ಕಾರಿನಲ್ಲಿ 6 ಜನ ಅಪರಿಚಿತ ವ್ಯಕ್ತಿಗಳು ಸುಲೈಮಾನ್‌ ಅವರ ಮನೆಗೆ ಆಗಮಿಸಿ, ತಮ್ಮನ್ನು ಇ.ಡಿ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಮನೆಯನ್ನು ಪರಿಶೀಲನೆ ನಡೆಸಲು ಆದೇಶ ಇರುವುದಾಗಿ ತಿಳಿಸಿ ಮನೆಯೊಳಗೆ ಪ್ರವೇಶಿಸಿದ ತಂಡ, ಮನೆ ಮಂದಿಯ 5 ಮೊಬೈಲ್‌ಗಳನ್ನು ಪಡೆದುಕೊಂಡು ಬಳಿಕ ಮನೆಯನ್ನು ಹುಡುಕಾಡಿದ್ದಾರೆ. ಈ ವೇಳೆ ಸುಲೈಮಾನ್‌ ಅವರ ಕೋಣೆಯ ಕಪಾಟಿನಲ್ಲಿ ವ್ಯವಹಾರಕ್ಕಾಗಿ ಇಟ್ಟಿದ್ದ ಸುಮಾರು 25 ರಿಂದ 30 ಲಕ್ಷ ಹಣವನ್ನು ಪಡೆದುಕೊಂಡು, ‘ಇಷ್ಟು ಹಣವನ್ನು ನಿಮ್ಮಲ್ಲಿ ಇಟ್ಟುಕೊಳ್ಳಲು ಅವಕಾಶವಿಲ್ಲ, ನಿಮ್ಮನ್ನು ಅರೆಸ್ಟ್ ಮಾಡುತ್ತೇನೆ ಮತ್ತು ಕಸ್ಟಡಿ ತೆಗೆದುಕೊಳ್ಳುತ್ತೇನೆ’ ಎಂಬುದಾಗಿ ಹೇಳಿದ್ದಾರೆ. ರಾತ್ರಿ ಸುಮಾರು 10.30ಕ್ಕೆ ಆರೋಪಿಗಳು ಮನೆಯಿಂದ ಹೊರಬಂದು, ವಶಕ್ಕೆ ಪಡೆದಿರುವ ಹಣಕ್ಕೆ ಸೂಕ್ತ ದಾಖಲೆಗಳನ್ನು ನೀಡಿ, ಹಣವನ್ನು ಬೆಂಗಳೂರಿನಲ್ಲಿರುವ ಆಫೀಸಿನಿಂದ ಪಡೆದುಕೊಳ್ಳುವಂತೆ ತಿಳಿಸಿ ಹೋಗಿದ್ದಾರೆ. ಈ ಬಗ್ಗೆ ಸುಲೈಮಾನ್‌ ಅವರ ಮಗ ಮಹಮ್ಮದ್‌ ಇಕ್ಬಾಲ್‌ ತಮ್ಮ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದಾಗ ಅಪರಿಚಿತ ವ್ಯಕ್ತಿಗಳು ಇ.ಡಿ ಅಧಿಕಾರಿಗಳಂತೆ ನಟಿಸಿ ಲೂಟಿ ಮಾಡಿರುವುದು ಅರಿವಿಗೆ ಬಂದಿದೆ. ಮಹಮ್ಮದ್‌ ಇಕ್ಬಾಲ್‌ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 02/2025 ಕಲಂ: 319(2), 318(4) ಬಿಎನ್ಎಸ್‌ 2023ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಸದರಿ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಎನ್., ಐ.ಪಿ.ಎಸ್ ಭೇಟಿ ನೀಡಿ ಪರಿಶೀಲಿಸಿ, ಆರೋಪಿಗಳ ಪತ್ತೆಗಾಗಿ ಸೂಚನೆ ನೀಡಿದರು. ಸಿನಿಮಾ ಮಾದರಿಯಲ್ಲಿ ನಡೆದ ಕೃತ್ಯ..!ಅಕ್ಷಯ್ ಕುಮಾರ್ ನಟನೆಯ ಸ್ಪೆಷಲ್-26 ಸಿನಿಮಾ ಸ್ಟೈಲ್‌ನಲ್ಲಿ ಗ್ರಾಮೀಣ ಪ್ರದೇಶದ ಮನೆಯಲ್ಲಿ ನಡೆದಿರುವ ಈ ಕೃತ್ಯ ಸ್ಥಳೀಯವಾಗಿ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ. ಹಿಂದಿ ಇಂಗ್ಲಿಷ್ ಹಾಗೂ ಕನ್ನಡ ಮಾತನಾಡುತ್ತಿದ್ದ ಆರೋಪಿಗಳು ತಮಿಳುನಾಡು ನೋಂದಣಿಯ ಕಾರಿನಲ್ಲಿ ಬಂದಿದ್ದರು ಎನ್ನಲಾಗಿದ್ದು ಹಾಜಿ ಕುಟುಂಬದ ಬಗ್ಗೆ ತಿಳಿದಿದ್ದವರೇ ಈ‌ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ದ.ಕ. ಜಿಲ್ಲೆಯಲ್ಲಿ ಬೀಡಿ ಉದ್ಯಮದಲ್ಲಿ ಸಾಕಷ್ಟು ಹೆಸರು ಗಳಿಸಿರುವ ಸುಲೈಮಾನ್ ಹಾಜಿಯವರು, ದಾಳಿ ನಡೆಸಿದ ತಂಡಕ್ಕೆ ‘ನನ್ನ ಲೆಕ್ಕ ಪರಿಶೋಧಕರು ಇದ್ದಾರೆ, ನಾಳೆ ಮಾತನಾಡುವ'''''''' ಎಂದು‌ ಹೇಳಿದರೂ, ಅದೆಲ್ಲ ಬೇಡ, ಹಣ ಮತ್ತು ಚಿನ್ನಾಭರಣ ಎಷ್ಟಿದೆ ಎಂದು ತೋರಿಸಿ ಎಂದು ಹೇಳಿದ ತಂಡ ಮುಂದಿನ ಮತ್ತು ಹಿಂದಿನ ಬಾಗಿಲು ಬಂದ್ ಮಾಡಿ ಶೋಧ ಆರಂಭಿಸಿದ್ದಾರೆ.

ಚಿನ್ನಾಭರಣಗಳನ್ನು ಅಲ್ಲೇ ಬಿಟ್ಟು ಹಣ ಹಾಗೂ ಮೊಬೈಲುಗಳನ್ನು ಪಡೆದು ಹೊರಟ ತಂಡ, ನಮ್ಮ ಜೊತೆ ಹಿಂದಿನಿಂದ ಬನ್ನಿ, ತನಿಖೆ ಬಳಿಕ ಮೊಬೈಲು ಕೊಡುತ್ತೇವೆಂದು ನಂಬಿಸಿ ತೆರಳಿದ್ದಾರೆ. ಅವರ ಮಾತು ನಂಬಿದ ಸುಲೈಮಾನ್‌ ಕಾರಿನಲ್ಲಿ ಹಾಗೂ ಅವರ ಪುತ್ರ ಸ್ಕೂಟರಲ್ಲಿ ತಂಡವನ್ನು ಹಿಂಬಾಲಿಸಿದ್ದಾರೆ. ನಾರ್ಶದಿಂದ ಬೋಳಂತೂರು ರಸ್ತೆ ಮೂಲಕ ಕಲ್ಲಡ್ಕದ ಕಡೆಗೆ ಎರ್ಟಿಗಾ ಸಂಚರಿಸಿದೆ. ಬೋಳಂತೂರು ತುಳಸೀವನ ಭಜನಾ ಮಂದಿರ ತಲುಪುತ್ತಿದ್ದಂತೆ ಕಾರು ಕಾಣೆ ಆಗಿದೆ. ಕಾರು ಕಾಣದೇ ಇದ್ದಾಗ ಸುಲೈಮಾನ್‌ ಅವರ ಪುತ್ರ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್‌ ಆಫ್‌ ಬಂದಿದ್ದು, ಸಂಶಯಗೊಂಡು ಕಲ್ಲಡ್ಕದ ತನಕ ಹೋಗಿ ಹುಡುಕಾಡಿದರೂ ಕಾರು ಪತ್ತೆಯಾಗಿಲ್ಲ. ಆರು ಜನರ ಕೃತ್ಯ: ಇಡಿ ಅಧಿಕಾರಿಗಳ ಹೆಸರಿನಲ್ಲಿ ನಕಲಿ ದಾಳಿ‌ ನಡೆಸಿದ ತಂಡದಲ್ಲಿ ಆರು ಜನರು ಇದ್ದರೆಂದು ಹೇಳಲಾಗಿದೆ. ಸುಲೈಮಾನ್ ಹಾಜಿ ಮನೆಯವರನ್ನು ನಿರಂತರ ಎರಡು ಗಂಟೆಗಳ ವಿಚಾರಣೆ ನಡೆಸಿ ಬೀಡಿ ಉದ್ಯಮ ಹಾಗೂ ಹಣಕಾಸು ವಹಿವಾಟಿನ ಬಗ್ಗೆ ಹತ್ತಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಥೇಟ್ ಇಡಿ ಅಧಿಕಾರಿಗಳಂತೆಯೇ ಸುಲೈಮಾನ್ ಹಾಜಿ ಹಾಗೂ ಮನೆಯವರನ್ನು ತಂಡ ವಿಚಾರಣೆ ನಡೆಸಿದರು. ದಾಳಿ ಸಂದರ್ಭ ಸುಲೈಮಾನ್, ಪತ್ನಿ, ಅವರ ಪುತ್ರ ಹಾಗೂ ಸೊಸೆ ಮನೆಯಲ್ಲಿದ್ದರು.

ಮನೆಯಲ್ಲಿ ಯಾವುದೇ ಸಿಸಿ ಟಿವಿ ಕ್ಯಾಮರಾ ಇಲ್ಲದ ಕಾರಣ ಆರೋಪಿಗಳ ಪತ್ತೆ ಕಾರ್ಯ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

--------------------

ದರೋಡೆ ಪ್ರಕರಣ- ಎಸ್ಪಿ ಹೇಳಿಕೆಘಟನೆ ರಾತ್ರಿ 8 ಗಂಟೆಯಿಂದ 10 ಗಂಟೆ ಒಳಗೆ ನಡೆದಿದೆ. ಈ ಬಗ್ಗೆ ನಾಲ್ಕು ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ. ಸುಮಾರು 30 ಲಕ್ಷ ರು. ನಗದು ಕೊಂಡು ಹೋಗಿರುವುದಾಗಿ ದೂರುದಾರರು ತಿಳಿಸಿದ್ದಾರೆ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.- ಯತೀಶ್, ಎಸ್‌.ಪಿ., ದ.ಕ.