ಮೀಡಿಯಾ ಹೆಸರಿನಲ್ಲಿ ರಕ್ಷಣೆ ಪಡೆಯುವ ನಕಲಿ ಪತ್ರಕರ್ತರನ್ನು ಮುಲಾಜಿಲ್ಲದೇ ಸಂಘದಿಂದ ಹೊರಹಾಕಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಗುಡುಗಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಮೀಡಿಯಾ ಹೆಸರಿನಲ್ಲಿ ರಕ್ಷಣೆ ಪಡೆಯುವ ನಕಲಿ ಪತ್ರಕರ್ತರನ್ನು ಮುಲಾಜಿಲ್ಲದೇ ಸಂಘದಿಂದ ಹೊರಹಾಕಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಗುಡುಗಿದರು.

ನಗರದ ರೋಟರಿ ಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು ಡಿ.ವಿ. ಗುಂಡಪ್ಪನವರು ಕಟ್ಟಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ೧೦ ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ತನ್ನದೇ ಆದ ವೈಷಿಷ್ಟ್ಯ ಹೊಂದಿದೆ, ಇಲ್ಲಿ ಸದಸ್ಯರಾಗುವುದೇ ಹೆಮ್ಮೆಯ ವಿಷಯ, ತುಮಕೂರು ಹೊರತುಪಡಿಸಿದರೆ ಜಿಲ್ಲೆಯ ಬಹುತೇಕ ಕಡೆ ಅವಿರೋಧವಾಗಿ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. ಆದರೆ ಗೆದ್ದವರು ಹಿಗ್ಗಬಾರದು, ಸೋತವರು ಕುಗ್ಗಬಾರದು ಮತ್ತು ಗೆದ್ದವರ ಕಾಲೆಳೆಯಬಾರದು. ಸಮಾಜ ನಿಮ್ಮನ್ನು ಆಸೆ ಕಣ್ಣಿನಿಂದ ನೋಡುತ್ತೆ, ತಪ್ಪು ಸರಿಪಡಿಸುವ ಶಕ್ತಿ ನಿಮ್ಮಲ್ಲಿದೆ ಎಂದು ಭಾವಿಸಿದ್ದಾರೆ. ಆದರೆ ಇದೇ ಶಕ್ತಿ ಆಡಳಿತಾತ್ಮಕ ಸಮಸ್ಯೆ ಸೃಷ್ಟಿಸಬಾರದು. ಮೀಡಿಯಾ ಹೆಸರಿನಲ್ಲಿ ರಕ್ಷಣೆ ಪಡೆಯುವ ಸಾವಿರಾರು ನಕಲಿ ಪತ್ರಕರ್ತರು ನಮ್ಮ, ನಿಮ್ಮ, ನಡುವೆ ಬ್ಲಾಕ್ ಮೇಲ್‌ನಲ್ಲಿ ತೊಡಗಿದ್ದಾರೆ. ಅಂತಹವರನ್ನು ಮುಲಾಜಿಲ್ಲದೇ ಸಂಘದಿಂದ ಹೊರಹಾಕಿ. ಸಮಾಜ ವಿಶ್ವಾಸಾರ್ಹ ಪತ್ರಕರ್ತರನ್ನು ಮಾತ್ರ ಬಯಸುತ್ತೆ. ನೀವು ಬಳಸುವ ಶಬ್ದ ಬಳಕೆ ಇನ್ನೊಬ್ಬರಿಗೆ ಅಥವಾ ಸಮಾಜಕ್ಕೆ ಹಾನಿ ಉಂಟುಮಾಡಿದರಲಿ. ನಿಮ್ಮ ಬರವಣಿಗೆ ಸಮಾಜ ಮತ್ತು ಹೃದಯಗಳನ್ನು ಒಡೆಯಬಾರದು, ವ್ಯಕ್ತಿತ್ವ ಹಣದಿಂದ ಬರಲ್ಲ. ಇದು ನಿಮ್ಮ ನಡೆ, ನುಡಿಯಲ್ಲಿರಬೇಕು ಎಂದರು. ಪ್ರಮಾಣವಚನ ಬೋಧಿಸಿ ಮಾತನಾಡಿದ ರಾಜ್ಯಘಟಕದ ಉಪಾಧ್ಯಕ್ಷ್ಷ ಮದನಗೌಡ, ಬಹುತೇಕ ಪತ್ರಕರ್ತರು ಹಮ್ಮು, ಬಿಮ್ಮು ತೋರುತ್ತಾರೆ. ಆದರೆ ಸಂಕಷ್ಟಕ್ಕೆ ಒಳಗಾದಾಗ ಎಷ್ಟು ಮಂದಿ ಇವರ ನೆರವಿಗೆ ಬರುತ್ತಾರೆ ಎಂಬುದು ಮುಖ್ಯ. ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿ ಪತ್ರಕರ್ತರ ನೆರವಿಗೆ ಬಂದಿದ್ದಾರೆ. ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಷಡಕ್ಷರಿ ಮಾತನಾಡಿ, ಪತ್ರಕರ್ತರ ಭವನದ ಸಮಸ್ಯೆ ಎಂದೋ ಬಗೆಹರಿಸಬೇಕಾಗಿತ್ತು. ಈಗಲೂ ಕಾಲ ಮಿಂಚಿಲ್ಲ. ಸಮಾಜ ಸೇವೆಗಾಗಿ, ಮತ್ತು ಸಮಾಜವನ್ನು ಎಚ್ಚರಿಸುವ ನಿಟ್ಟಿನಲ್ಲಿ ಕಾರ‍್ಯ ನಿರ್ವಹಿಸುವ ಪರ್ತಕರ್ತರ ಬಗ್ಗೆ ಮಾತ್ರ ನನಗೆ ಗೌರವ ಇದೆ. ಸದ್ಯಕ್ಕೆ ಸಂಘಕ್ಕೆ ತಾತ್ಕಾಲಿಕ ಕಚೇರಿಗೆ ವ್ಯವಸ್ಥೆ ಮಾಡಲಾಗುವುದು, ಮುಂದಿನ ದಿನಗಳಲ್ಲಿ ಪರ್ತಕರ್ತರ ಭವನಕ್ಕೆ ನಿವೇಶನ ಮತ್ತು ಅನುದಾನವನ್ನು ನಾನೂ ವ್ಯವಸ್ಥೆ ಮಾಡುತ್ತೇನೆ. ಸಂಘದಲ್ಲಿ ಬಣಗಳು ಇರಬಾರದು ಎಂಬುದು ನನ್ನ ಉದ್ದೇಶ ಎಂದರು. ಸಮಾರಂಭದಲ್ಲಿ ಲೋಕೇಶ್ವರ್, ಕೆ.ಟಿ.ಶಾಂತಕುಮಾರ್, ನವಿಲೆ ಪರಮೇಶ್. ಜಿಲ್ಲಾಧ್ಯಕ್ಷ ಎಲ್.ಯೋಗೇಶ್. ಉಪಾಧ್ಯಕ್ಷ ಪ್ರಸನ್ನ, ಪ್ರಧಾನ ಕಾರ‍್ಯದರ್ಶಿ ರಘುರಾಂ. ನಿರ್ದೇಶಕರಾದ ಸುರೇಶ್ ಶ್ರೀವತ್ಸ, ಸುಪ್ರತೀಕ್, ತಾಲೂಕು ನೂತನ ಅಧ್ಯಕ್ಷ ಟಿಎಸ್. ದಯಾನಂದ್, ಪ್ರಧಾನ ಕಾರ್ಯದರ್ಶಿ ಸಿದ್ದೇಶ್. ಸೇರಿದಂತೆ ಉಪಾಧ್ಯಕ್ಷರು, ಕಾರ‍್ಯದರ್ಶಿಗಳು, ಮತ್ತು ನಿರ್ದೇಶಕರು, ಇದ್ದರು. ಸಾಧನೆ ಮಾಡಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.