ಸಾರಾಂಶ
ದೈಹಿಕ ಆಕರ್ಷಣೆಯಿಂದ ವಿದ್ಯಾರ್ಥಿಗಳು ವಿಚಲಿತರಾಗದೇ ಅನ್ಯ ವಿಚಾರಗಳಿಂದ ದೂರವಿದ್ದು ಮುಂಬರುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯಲು ಶ್ರಮವಹಿಸಬೇಕು ಎಂದು ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲಾ ವ್ಯವಸ್ಥಾಪಕ ಫಾ.ಕಿರಣ್ ಮೆಲ್ವಿನ್ ಹೇಳಿದರು. ವಿದ್ಯಾರ್ಥಿ ಜೀವನದಲ್ಲಿ ಅಂಕಗಳು ಕಲಿಕೆಯ ಮಾನದಂಡವಾದ್ದರಿಂದ ಕಲಿಕೆಯಲ್ಲಿ ಏರುಪೇರಾದರೆ ಯಾವುದೇ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಉತ್ತಮ ಕಲಿಕೆಗೆ ನಿಸ್ವಾರ್ಥ ಸೇವೆ ಸಲ್ಲಿಸಿದ ಶಿಕ್ಷಕರನ್ನು, ಶಾಲೆಯನ್ನು ಹಾಗೂ ತಂದೆ ತಾಯಿಯರನ್ನು ಗೌರವಿಸಬೇಕಾಗಿರುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯ. ಮಾನವ ಧರ್ಮದ ತತ್ವದ ಆಧಾರದ ಮೇಲೆ ನಾವೆಲ್ಲ ಬದುಕಿ ಬಾಳಬೇಕು ಎಂದರು.
ಕನ್ನಡಪ್ರಭ ವಾರ್ತೆ ಬೇಲೂರು
ದೈಹಿಕ ಆಕರ್ಷಣೆಯಿಂದ ವಿದ್ಯಾರ್ಥಿಗಳು ವಿಚಲಿತರಾಗದೇ ಅನ್ಯ ವಿಚಾರಗಳಿಂದ ದೂರವಿದ್ದು ಮುಂಬರುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯಲು ಶ್ರಮವಹಿಸಬೇಕು ಎಂದು ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲಾ ವ್ಯವಸ್ಥಾಪಕ ಫಾ.ಕಿರಣ್ ಮೆಲ್ವಿನ್ ಹೇಳಿದರು.ತಾಲೂಕಿನ ಅರೇಹಳ್ಳಿಯ ಅಂಬೇಡ್ಕರ್ ನಗರದಲ್ಲಿರುವ ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ೨೦೨೪-೨೫ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜನೆ ಮಾಡಲಾಗಿದ್ದ ಬೀಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಅಂಕಗಳು ಕಲಿಕೆಯ ಮಾನದಂಡವಾದ್ದರಿಂದ ಕಲಿಕೆಯಲ್ಲಿ ಏರುಪೇರಾದರೆ ಯಾವುದೇ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಉತ್ತಮ ಕಲಿಕೆಗೆ ನಿಸ್ವಾರ್ಥ ಸೇವೆ ಸಲ್ಲಿಸಿದ ಶಿಕ್ಷಕರನ್ನು, ಶಾಲೆಯನ್ನು ಹಾಗೂ ತಂದೆ ತಾಯಿಯರನ್ನು ಗೌರವಿಸಬೇಕಾಗಿರುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯ. ಮಾನವ ಧರ್ಮದ ತತ್ವದ ಆಧಾರದ ಮೇಲೆ ನಾವೆಲ್ಲ ಬದುಕಿ ಬಾಳಬೇಕು ಎಂದರು.ವಿದ್ಯಾರ್ಥಿಗಳು ಪ್ರೌಢಾವಸ್ಥೆಯಿಂದ ಯೌವನಾವಸ್ಥೆಗೆ ಕಾಲಿಡುವ ಘಟ್ಟದಲ್ಲಿ ಹಲವು ದೈಹಿಕ ಹಾಗೂ ಮಾನಸಿಕ ತೊಳಲಾಟಕ್ಕೆ ಸಿಲುಕುವುದು ಸಾಮಾನ್ಯವಾಗಿದ್ದು ಅದನ್ನು ಮೆಟ್ಟಿನಿಂತು ಗುರಿ ತಲುಪುವುದು ಮುಖ್ಯ. ಧಾರ್ಮಿಕ ಮತಾಂಧತೆಯ ಪರಿಣಾಮ ಇಡೀ ಸಮಾಜ ಇಬ್ಭಾಗವಾಗುವುದರಿಂದ ಧಾರ್ಮಿಕ ಸಹಿಷ್ಣತೆಯನ್ನು ನಾವೆಲ್ಲರೂ ಪಾಲಿಸಬೇಕು ಎಂದು ನುಡಿದರು. ಈ ವೇಳೆ ಮುಖ್ಯ ಶಿಕ್ಷಕ ರಂಜಿತ್ ಕುಮಾರ್ ಕೆ.ಎಸ್, ಶಿಕ್ಷಕರಾದ ಸುಮಿತ ಕೀರ್ತಿ, ಚಂದ್ರು, ನಿರ್ಮಲ, ಗ್ರೇಷಿಯನ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.