ಹಾಸನ: ಕರ್ನಾಟಕ ರಾಜ್ಯ ಮಿನರಲ್ ಕಾರ್ಪೊರೇಷನ್ ನ ದುಮ್ಮಗೆರೆ ಶಿಲಾ ಗಣಿಯ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ವಯೋನಿವೃತ್ತಿ ಹೊಂದಿದ ಪರಮೇಶ್ವರ ಜಿ.ಬಣಕಾರ ಅವರಿಗೆ ಶಾಂತಿಗ್ರಾಮ ಗ್ರಾಮಸ್ಥರು ಮತ್ತು ಇಲಾಖೆಯ ಸಿಬ್ಬಂದಿ ಆತ್ಮೀಯ ಬೀಳ್ಕೊಡುಗೆ ನೀಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಹಾಸನ ಜಿಲ್ಲೆ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಜಿ.ಎಲ್. ನಾಗರಾಜ ವಹಿಸಿ, ಬಣಕಾರ ಅವರ ದೀರ್ಘಾವಧಿ ಸೇವೆಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದು, ಅವರ ಸೇವಾ ಮನೋಭಾವ, ಪ್ರಾಮಾಣಿಕತೆ ಮತ್ತು ಜನ ಸ್ನೇಹಿ ಕಾರ್ಯಶೈಲಿ ಎಲ್ಲರಿಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಮುಂದುವರಿದು ಮಾತನಾಡಿದ ಅವರು , ಬಣಕಾರರು ಶಾಂತಿಗ್ರಾಮದ ಶ್ರೀ ಆದಿ ಹನುಮಂತರಾಯ ಹಾಗೂ ಗರುಡುಗಂಬ ಪ್ರತಿಷ್ಠಾಪಿಸಿ ಶಾಂತಿಗ್ರಾಮ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.ವಯೋನಿವೃತ್ತಿ ಹೊಂದಿದ ಪರಮೇಶ್ವರ ಜಿ. ಬಣಕಾರ ಅವರನ್ನು ಶಾಲು ಹೊದಿಸಿ, ಸ್ಮರಣೆಕೆ ನೀಡಿ, ಹೂಗುಚ್ಚ ನೀಡಿ ಸನ್ಮಾನಿಸಲಾಯಿತು.