ಕನ್ನಡಪ್ರಭ ವಾರ್ತೆ ಸಕಲೇಶಪುರ

ಜನರ ಪ್ರೀತಿಯ ಮುಂದೆ ಎಲ್ಲ ಪ್ರಶಸ್ತಿಗಳು ಗೌಣ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪ ಹೇಳಿದರು.

ಶುಕ್ರವಾರ ತಾಲೂಕಿನ ಕ್ಯಾಮನಹಳ್ಳಿ ಗ್ರಾಮದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕಿ ತೀರ್ಥವತಿ ಅವರಿಗೆ ಗ್ರಾಮಸ್ಥರು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ, ತೀರ್ಥವತಿ ಅವರ ೩೨ ವರ್ಷದ ಸೇವೆಯನ್ನು ಕ್ಯಾಮನಹಳ್ಳಿ ಗ್ರಾಮದಲ್ಲೆ ೨೪ ವರ್ಷ ಪೊರೈಸಿರುವುದು ಗ್ರಾಮಸ್ಥರೊಂದಿಗೆ ಇವರಿಗೆ ಇದ್ದ ಆತ್ಮೀಯತೆಯನ್ನು ಎತ್ತಿ ಹಿಡಿಯುತ್ತಿದೆ. ಎಷ್ಟೇ ಪ್ರಮಾಣಿಕವಾಗಿ ಸೇವೆ ಸಲ್ಲಿಸಿದರೂ ಶಿಕ್ಷಕರು ಆರೋಪಮುಕ್ತವಾಗುವುದು ಕಷ್ಟಕರ ಇಂತಹ ಸನ್ನಿವೇಶದಲ್ಲಿ ಎರಡು ದಶಕಗಳ ಕಾಲ ಒಂದೆ ಶಾಲೆಯಲ್ಲಿ ಸೇವೆ ಸಲ್ಲಿಸಿರುವುದು ಗ್ರಾಮಸ್ಥರೊಂದಿಗೆ ಇವರಿಗಿರುವ ಆತ್ಮಿಯತೆಯನ್ನು ಎತ್ತಿಹಿಡಿಯುತ್ತಿದೆ. ತೀರ್ಥವತಿ ಅವರನ್ನು ಇತರ ಶಿಕ್ಷಕರು ಮಾದರಿ ಮಾಡಿಕೊಂಡಾಗ ಶಿಕ್ಷಕರ ಮೇಲಿನ ಆರೋಪ ತಪ್ಪಲಿದೆ ಎಂದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರೆಲ್ಲ ವಂತಿಗೆ ಸಂಗ್ರಹಿಸಿ ಶಾಲಾ ಆವರಣದಲ್ಲಿ ಸಿಹಿಊಟ ಸಿದ್ಧಪಡಿಸುವ ಮೂಲಕ ಹಬ್ಬದ ವಾತಾವಾರಣ ಸೃಷ್ಟಿಸಿದ್ದರು. ನಿವೃತ್ತ ಶಿಕ್ಷಕಿಗೆ ಹಾರ, ತುರಾಯಿ ಹಾಕಿ ಗೌರವಿಸಿದ್ದಲ್ಲದೆ, ಬೆಳ್ಳಿ ವಿಗ್ರಹ ಹಾಗೂ ಸೇವೆ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಮುನ್ನೂರಕ್ಕೂ ಅಧಿಕ ಗ್ರಾಮಸ್ಥರು ಪಾಲ್ಗೊಂಡಿದ್ದರು.