ಮೂರು ಎಕರೆಯಲ್ಲಿ ಬೆಳೆದಿದ್ದ ಸೌತೆ, ಬದನೆ
ಬಂಡವಾಳವೂ ಸಿಗದ ಬೆಲೆಗೆ ಬೇಸತ್ತು ನಾಶಬೆಳೆದ ಮಂಗಳೂರು ಸೌತೆ, ಬದನೆ ಮೇಕೆಗೆ
ಹಠಾತ್ ಬೆಲೆ ಕುಸಿತಕ್ಕೆ ಬೆಳೆಗಾರ ಕಂಗಾಲುಮಳೆಯಿಂದ ಚೇತರಿಸಿಕೊಳ್ಳುವಾಗ ಮತ್ತೆ ಬರೆ
---
ಕನ್ನಡಪ್ರಭ ವಾರ್ತೆ ಹನೂರು
ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸುರಿದಿದ್ದ ಭಾರಿ ಮಳೆಯಿಂದ ಮಣ್ಣುಪಾಲಾಗಿ ಅಪಾರ ನಷ್ಟದಿಂದ ಹೊರಬರುವ ಮುನ್ನವೇ ರೈತರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಂಗಳೂರು ಸೌತೆಕಾಯಿ ಮತ್ತು ಬದನೆಕಾಯಿ ಫಸಲು ಕೈಗೆ ಬಂದಾಗ ಬೆಲೆಯು ಪಾತಾಳ ಸೇರಿದೆ. ಪರಿಣಾಮ ಹನೂರು ತಾಲೂಕಿನ ಹುಲ್ಲೇಪುರ ಗ್ರಾಮದಲ್ಲಿ ರೈತನೋರ್ವ ಬೆಳೆಯನ್ನು ಮೇಕೆಗಳಿಗೆ ಮೇಯಲು ಹಾಕಿರುವ ಘಟನೆ ಗುರುವಾರ ನಡೆದಿದೆ.ತರಕಾರಿ ಬೆಲೆಯಲ್ಲಿ ದಿಢೀರ್ ಕುಸಿತವಾದ್ದರಿಂದ ರೈತನೋರ್ವ ಕಷ್ಟಪಟ್ಟು ಬೆಳೆದಿದ್ದ ಮಂಗಳೂರು ಸೌತೆಕಾಯಿ, ಬದನೆಕಾಯಿ ಸಮೇತ ಉಳುಮೆ ಮಾಡಿದ ಘಟನೆ ಹನೂರು ತಾಲೂಕಿನ ಹುಲ್ಲೇಪುರದಲ್ಲಿ ನಡೆದಿದೆ.
ಹುಲ್ಲೇಪುರ ಗ್ರಾಮದ ವಿನೇಶ್ ಕುಮಾರ್ ಎಂಬ ಯುವ ರೈತ ಒಂದೂವರೆ ಎಕರೆಯಲ್ಲಿ ಮಂಗಳೂರು ಸೌತೆಕಾಯಿ, ಒಂದೂವರೆ ಎಕರೆಯಲ್ಲಿ ಬದನೆಕಾಯಿ ಬೆಳೆದಿದ್ದರು. ಆದರೆ, ಮಂಗಳೂರು ಸೌತೆಕಾಯಿ ಕೆಜಿಗೆ 3-4 ರು, ಬದನೆಕಾಯಿಗೆ 4 ರು. ದರ ಇರುವ ಹಿನ್ನೆಲೆ ಸಾಗಾಟ ವೆಚ್ಚವೂ ಬಾರದ ಸ್ಥಿತಿ ಬಂದೊದಗಿದ್ದರಿಂದ ಜಮೀನನ್ನು ಉಳುಮೆ ಮಾಡಿದ್ದಾರೆ.ಅಂದಾಜು 25-30 ಟನ್ ಮಂಗಳೂರು ಸೌತೆಕಾಯಿ, 1 ಟನ್ ಬದನೆಕಾಯಿನ್ನು ಉಳುಮೆ ಮಾಡಿ ಕುರಿ, ಮೇಕೆಗಳನ್ನು ಮೇಯಲು ಬಿಟ್ಟಿದ್ದಾರೆ.ಕನಿಷ್ಠ 10 ರು. ಆದರೂ ಕೆಜಿಗೆ ಬೆಲೆ ಬಂದರೆ ಹಾಕಿದ ಬಂಡವಾಳವಾದರೂ ಬರಲಿದೆ. ಆದರೆ, 4-5 ರು. ಬಂದರೆ ತೀರ ನಷ್ಟ ಉಂಟಾಗಲಿದೆ. ಬೇರೆ ಮಾರ್ಗವಿಲ್ಲದೇ ಬೆಳೆ ನಾಶ ಮಾಡಿರುವುದಾಗಿ ವಿನೇಶ್ ಅಳಲು ತೋಡಿಕೊಂಡಿದ್ದಾರೆ.
---