ಬ್ಯಾಂಕ್‌ ಸಾಲ ಮುಕ್ತಾಯಗೊಂಡಿದ್ದರೂ ರೈತರೊಬ್ಬರ ಖಾತೆಯಿಂದ ನಿರಂತರವಾಗಿ 1.10 ಲಕ್ಷ ರು.ಗಳನ್ನು ಕಡಿತಗೊಳಿಸಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಅಧಿಕಾರಿಗಳ ವಿರುದ್ಧ ರಾಜ್ಯ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕೊಳ್ಳೇಗಾಲ ರೈತನ ಖಾತೆಯಿಂದ ಅಕ್ರಮವಾಗಿ ₹1.10 ಲಕ್ಷ ಕಟ್‌

ಬ್ಯಾಂಕ್‌ ಸಿಬ್ಬಂದಿ ಉಡಾಫೆ ಉತ್ತರ । ಬ್ಯಾಂಕ್‌ ಎದುರು ಹೋರಾಟ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಬ್ಯಾಂಕ್‌ ಸಾಲ ಮುಕ್ತಾಯಗೊಂಡಿದ್ದರೂ ರೈತರೊಬ್ಬರ ಖಾತೆಯಿಂದ ನಿರಂತರವಾಗಿ 1.10 ಲಕ್ಷ ರು.ಗಳನ್ನು ಕಡಿತಗೊಳಿಸಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಅಧಿಕಾರಿಗಳ ವಿರುದ್ಧ ರಾಜ್ಯ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿ ಜಮಾಯಿಸಿದ್ದ ರೈತರು ಬೈಕ್ ಮೂಲಕ ಬಸ್ ನಿಲ್ದಾಣದ ಬಳಿಯ ಅಚ್ಗಾಲ್‌ ಸರ್ಕಲ್ ಎಸ್‌ಬಿಐ ಮುಂಭಾಗ ಆಗಮಿಸಿ ಬ್ಯಾಂಕ್‌ ವ್ಯವಸ್ಥಾಪಕರ ವಿರುದ್ಧ ಧಿಕ್ಕಾರ ಘೋಷಣೆ ಕೂಗುವ ಮೂಲಕ ಪ್ರತಿಭಟಿಸಿದರು.ರೈತ ವಿರೋದಿ ಬ್ಯಾಂಕ್ ಅಧಿಕಾರಿಗಳ ವರ್ತನೆಗೆ ರೈತರು ತೀವ್ರವಾಗಿ ಖಂಡಿಸಿದರಲ್ಲದೆ ಧಿಕ್ಕಾರ ಕೂಗುವ ಮೂಲಕ ನ್ಯಾಯಕ್ಕಾಗಿ ಆಗ್ರಹಿಸಿ ಕೆಲಕಾಲ ಪ್ರತಿಭಟಿಸಿದರು.ರೈತ ಮುಖಂಡ ದೊರೆಸ್ವಾಮಿ ಅವರು 10 ವರ್ಷಗಳ ಹಿಂದೆ 50,000 ರು. ಬೇಳೆ ಸಾಲ ಪಡೆದಿದ್ದು, ಪಾವತಿ ಮಾಡಿ ಬ್ಯಾಂಕ್ ಅಧಿಕಾರಿಗಳಿಂದ ದೃಢೀಕೃತ ದಾಖಲೆ (ಮರುಪಾವತಿ ಪತ್ರ) ಪಡೆದಿದ್ದರೂ 1.10 ಲಕ್ಷ ರು. ಕಡಿತಗೊಳಿಸಿದ್ದಾರೆ. ಹೀಗಾಗಿ ರೈತರು ಆಕ್ರೋಶ ವ್ಯಕ್ತಪಡಿಸಿ ತರಾಟೆ ತೆಗೆದುಕೊಂಡ ಘಟನೆ ಇದೇ ವೇಳೆ ಜರುಗಿತು.

ಈ ಸಂದರ್ಭದಲ್ಲಿ ರೈತ ಮುಖಂಡ, ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ರೈತ ದೊರೆಸ್ವಾಮಿ ಅವರು ಈ ಹಿಂದೆ ಪಡೆದಿದ್ದ ಸಾಲವನ್ನು ಮರುಪಾವತಿ ಮಾಡಿ ದೃಢೀಕೃತ ದಾಖಲೆ ಪಡೆದಿದ್ದಾರೆ. ಹೀಗಿದ್ದರೂ ಅವರ ಖಾತೆಯಿಂದ ಹಲವು ಬಾರಿ ಒಟ್ಟಾರೆ 1.10 ಲಕ್ಷ ರು.ಗಳನ್ನು ಕಡಿತ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ವಿಚಾರಿಸಿದರೆ ಬ್ಯಾಂಕ್‌ ವ್ಯವಸ್ಥಾಪಕರು ಉಡಾಫೆಯಿಂದ ಮಾತನಾಡುತ್ತಾರೆ. ಸಾಲ ತೀರಿದ್ದರೂ ಕಡಿತಗೊಳಿಸಿದ ಕ್ರಮ ಎಷ್ಟು ಸರಿ ಎಂದು ಪ್ರಶ್ನಿಸಿದರು.ಈ ವೇಳೆ ಬ್ಯಾಂಕ್ ಅಧಿಕಾರಿಗಳು ಇನ್ನೆರಡು ದಿನದಲ್ಲಿ ಪರಿಶೀಲಿಸಿ ಕಡಿತಗೊಂಡಿರುವ 1.10 ಲಕ್ಷ ರು.ಗಳನ್ನು ರೈತರ ಖಾತೆಗೆ ಜಮಾ ಮಾಡುವ ಲಿಖಿತ ಭರವಸೆ ನೀಡಿದ ಹಿನ್ನೆಲೆ ರೈತರು ಪ್ರತಿಭಟನೆ ಹಿಂಪಡೆದರು.ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಶಿವಮಲ್ಲು, ರಾಜ್ಯ ಖಾಯಂ ಸದಸ್ಯ ಹೆಬ್ಬಸೂರು ಬಸವಣ್ಣ, ಚಾಮರಾಜನಗರ ತಾಲೂಕು ಉಪಾಧ್ಯಕ್ಷ ಆಲೂರು ಸಂತೋಷ್, ಜಿಲ್ಲಾ ಕಾಯಂ ಸದಸ್ಯ ರವಿ ನಾಯ್ಡು, ನಿಕೋಲಸ್‌ ಜಾಗೇರಿ, ಅಶೋಕ್, ಹನೂರು ಅಧ್ಯಕ್ಷ ಅಮ್ಜಾದ್ ಖಾನ್, ಅರೇಪಾಳ್ಯ ನಾಗರಾಜು ಇನ್ನಿತರಿದ್ದರು.---16ಕೆಜಿಎಲ್20