ರೈತ ಸಾಕಿದ್ದ ಹಳ್ಳಿಕಾರ್ ಎತ್ತುಗಳು 9.01 ಲಕ್ಷ ರು.ಗೆ ಮಾರಾಟ

| Published : Oct 26 2025, 02:00 AM IST

ಸಾರಾಂಶ

ಮಳವಳ್ಳಿ ತಾಲೂಕಿನ ಬೊಪ್ಪೇಗೌಡನಪುರ (ಬಿಜಿಪುರ) ಹೋಬಳಿಯ ಕಗ್ಗಲೀಪುರ ಗ್ರಾಮದಲ್ಲಿ ರೈತರೊಬ್ಬರ ಹಳ್ಳಿಕಾರ್ ಎತ್ತುಗಳು ಬರೋಬರಿ 9.01 ಲಕ್ಷಕ್ಕೆ ಮಾರಾಟವಾಗಿ ಗಮನ ಸೆಳೆದಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ಬೊಪ್ಪೇಗೌಡನಪುರ (ಬಿಜಿಪುರ) ಹೋಬಳಿಯ ಕಗ್ಗಲೀಪುರ ಗ್ರಾಮದಲ್ಲಿ ರೈತರೊಬ್ಬರ ಹಳ್ಳಿಕಾರ್ ಎತ್ತುಗಳು ಬರೋಬರಿ 9.01 ಲಕ್ಷಕ್ಕೆ ಮಾರಾಟವಾಗಿ ಗಮನ ಸೆಳೆದಿದೆ.

ಗ್ರಾಮದ ಯುವ ರೈತ ಮನು ಅವರು ನಾಗಮಂಗಲದ ಹೂವಿನಹಳ್ಳಿಯ ಜಿಪಂ ಮಾಜಿ ಸದಸ್ಯ ಚಂದ್ರಣ್ಣ ಅವರಿಗೆ 9.01 ಲಕ್ಷ ರು.ಗೆ ಒಂದು ಜೊತೆ ಹಳ್ಳಿಕಾರ್ ಎತ್ತುಗಳನ್ನು ಮಾರಾಟ ಮಾಡಿದ್ದಾರೆ.

ಮನು ಕಳೆದ ಐದು ತಿಂಗಳ ಹಿಂದೆ ಕನಕಪುರದ ಹಾರೋಹಳ್ಳಿ ತಾಲೂಕಿನ ಸೋಮನಹಳ್ಳಿ ಶ್ರೀನಿವಾಸ್ ಅವರಿಂದ 5.90 ಲಕ್ಷ ರು.ಗೆ ಖರೀದಿಸಿದ್ದರು. ಹಳ್ಳಿಕಾರ್ ರಾಸುಗಳ ಸಾಕಾಣಿಕೆಯನ್ನು ರೂಢಿಸಿಕೊಂಡಿದ್ದ ಮನು ಅವರು ಎತ್ತುಗಳನ್ನು ಹೂವಿನಹಳ್ಳಿ ಚಂದ್ರಣ್ಣರಿಗೆ 9.01 ಲಕ್ಷ ರು.ಗೆ ಮಾರಾಟ ಮಾಡಿದ್ದಾರೆ.

ಸುತ್ತಮುತ್ತಲಿನ ಗ್ರಾಮಗಳಲ್ಲೇ ಅತಿಹೆಚ್ಚು ಬೆಲೆಗೆ ಮಾರಾಟವಾದ ಹಳ್ಳಿಕಾರ್ ಎತ್ತುಗಳಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ ಮನು ಕುಟುಂಬಸ್ಥರು ನಂತರ ಚಂದ್ರಣ್ಣ ಅವರಿಗೆ ಹಸ್ತಾಂತರ ಮಾಡಿದರು. ಬಳಿಕ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

ರೈತ ಮನು ಮಾತನಾಡಿ, ಸಂಪೂರ್ಣ ದೇಶಿ ತಳಿ ಈ ಹಳ್ಳಿಕಾರ್ ಎತ್ತುಗಳು ರೈತರ ಪಾಲಿಗೆ ದೇವರ ಸಮಾನವಾಗಿವೆ. ಈ ಎತ್ತುಗಳನ್ನು ಖರೀದಿಸಿದ ಮೇಲೆ ಸಾಕಷ್ಟು ಅಭಿವೃದ್ಧಿ ಹೊಂದಿದ್ದೇವೆ. ಚಂದ್ರಣ್ಣರಿಗೆ ಸಾಕುವ ಉದ್ದೇಶದಿಂದ ನೀಡುತ್ತಿದ್ದೇವೆ ಎಂದರು.

ನಾಗಮಂಗಲದ ಚಂದ್ರಣ್ಣ ಮಾತನಾಡಿ, ಹಳ್ಳಿಕಾರ್ ಎತ್ತುಗಳು ಸಾಕಾಣಿಕೆಯಲ್ಲಿ ನಮ್ಮ ಕುಟುಂಬ ಹಿಂದಿನಿಂದಲೂ ತೊಡಗಿಸಿಕೊಂಡಿದೆ. ಮಗಳ ಮದುವೆ ಸಂದರ್ಭದಲ್ಲಿ ಮನೆಯಲ್ಲಿ ಹಳ್ಳಿಕಾರ್ ಎತ್ತುಗಳನ್ನು ಕಟ್ಟಬೇಕು ಎನ್ನುವ ದೃಷ್ಟಿಯಿಂದ ಖರೀದಿಸಿದ್ದೇವೆ. ರೈತರ ಪ್ರಗತಿಗೆ ಹಳ್ಳಿಕಾರ್ ತಳಿ ಸಹಕಾರಿಯಾಗಿದೆ ಎಂದರು.

ಈ ವೇಳೆ ಮುಖಂಡರಾದ ಕಿರಣ್, ಪ್ರತಾಪ್, ಅಭಿ, ಆನಂದ್, ಕಾಂತ, ಬಿ.ಎಂ.ಶ್ರೀನಿವಾಸ್, ಮಂಜುನಾಥ, ಕಿಟ್ಟಿ, ಅಭಿಗೌಡ, ಕೆ.ವಿ.ಬಸವಣ್ಣ, ರೇವಣ್ಣ, ಕೆ.ಎನ್.ರಾಜಶೇಖರಮೂರ್ತಿ, ಕೆ.ಎಂ.ವಿರೂಪಾಕ್ಷ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಜನರು ನೆರದಿದ್ದರು.