ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಸರ್ಕಾರದ ನಿಗದಿಗಿಂತ ದುಪ್ಪಟ್ಟು ಬೆಲೆಗೆ ಯೂರಿಯಾವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಮೂಲಕ ರಸಗೊಬ್ಬರ ಮಾರಾಟಗಾರರು ಸರ್ಕಾರಕ್ಕೆ ಹಾಗೂ ರೈತರಿಗೆ ವಂಚನೆ ಮಾಡಲು ಹೊರಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ತಾಲೂಕಿನ ಕಾಮಸಮುದ್ರ ಹೋಬಳಿಯ ತೊಪ್ಪನಹಳ್ಳಿ ಗ್ರಾಮದಲ್ಲಿ ಆಂಧ್ರ ಮೂಲದ ಮಾಲೀಕರು ಶ್ರೀ ಲಕ್ಷ್ಮೀ ವೆಂಕಟೇಶ್ವರ ಫರ್ಟಿಲೈಸರ್ ಮಳಿಗೆಯಲ್ಲಿ 45 ಕೆಜಿ ತೂಕದ ಯೂರಿಯಾ ಗೊಬ್ಬರವನ್ನು 450 ರು.ಗಳಿಗೆ ಮಾರಾಟ ಮಾಡುತ್ತಿದ್ದು, ರೈತರು ತಗಾದೆ ತೆಗೆದಿದ್ದಾರೆ.
ತಾಲೂಕಿನ ಗ್ರಾಮೀಣ ಭಾಗದಲ್ಲಿ ಬೇಸಿಗೆ ತಳಿಯ ರಾಗಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದಾರೆ. ಜೊತೆಗೆ ಹೈನುಗಾರಿಕೆಗೆ ಜೋಳ ಮತ್ತು ಫಾರಂ ಹುಲ್ಲು ಸಹ ಬೆಳೆದಿದ್ದು ಈ ಬೆಳೆಗಳಿಗೆ ಸಾಮಾನ್ಯವಾಗಿ ರೈತರು ಯೂರಿಯಾವನ್ನು ಬಳಕೆ ಮಾಡುತ್ತಾರೆ. ಸರ್ಕಾರದ ನಿರ್ದೇಶನದಂತೆ ಮೂಟೆ ಯೂರಿಯಾವನ್ನು ಕನಿಷ್ಟ 266 ರು.ಗಳಿಗೆ ಮಾರಾಟ ಮಾಡಬೇಕು. ಸಾಗಾಣಿಕೆ ವೆಚ್ಚ ಸೇರಿದಂತೆ ಇತರೆ ವೆಚ್ಚಗಳನ್ನು ಸೇರಿಸಿ ಗರಿಷ್ಟ 300 ರು.ಗಳಿಗೆ ಮಾರಾಟ ಮಾಡಬೇಕು ಎಂಬ ನಿಯಮವಿದೆ. ಸದ್ಯದ ಮಟ್ಟಿಗೆ ತಾಲೂಕಿನಲ್ಲಿ ಯೂರಿಯಾ ಪೂರೈಕೆ ಅಲ್ಪಮಟ್ಟಿಗೆ ಇದ್ದು, ರೈತರ ಬೇಡಿಕೆಯನ್ನು ಬಂಡವಾಳವನ್ನಾಗಿಸಿಕೊಂಡ ಅಂಗಡಿ ಮಾಲೀಕರು ಹೆಚ್ಚಿನ ಬೆಲೆಗೆ ಯೂರಿಯಾವನ್ನು ಮಾರಾಟ ಮಾಡುವ ಮೂಲಕ ದುಪ್ಪಟ್ಟು ಆದಾಯ ಗಳಿಸುತ್ತಿರುವುದಾಗಿ ರೈತರು ಆರೋಪ ಮಾಡಿದ್ದಾರೆ.ಕಾಮಸಮುದ್ರ ಗ್ರಾಮದಲ್ಲಿ ಗೊಬ್ಬರ ಅಂಗಡಿ ಮಾಲೀಕರು ರಾಸುಗಳಿಗೆ ಬೂಸವನ್ನು ತೆಗೆದುಕೊಂಡರೆ ಮಾತ್ರ ಯೂರಿಯಾವನ್ನು ನೀಡುತ್ತೇವೆ ಎಂಬ ನಿಯಮ ಮಾಡಿರುವ ಕಾರಣ, ಯೂರಿಯಾ ಜೊತೆಗೆ ಬೇಡದ ಬೂಸವನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ. ಕಾಮಸಮುದ್ರ ಹೋಬಳಿಯು ತಮಿಳುನಾಡು ಮತ್ತು ಆಂಧ್ರದ ಗಡಿಗೆ ಹೊಂದಿಕೊಂಡಿದ್ದು, ತಮಿಳುನಾಡಿನಲ್ಲಿ 350 ರು.ಗಳಿಗೆ ಯೂರಿಯವನ್ನು ಮಾರಾಟ ಮಾಡಲಾಗುತ್ತಿದ್ದು, ತಾಲೂಕಿನಲ್ಲಿ ಹೆಚ್ಚಿನ ಬೆಲೆಗೆ ಯೂರಿಯಾ ಮಾರಾಟ ಮಾಡುತ್ತಿರುವ ಪರಿಣಾಮ ವಿಧಿಯಿಲ್ಲದೆ ಗಡಿ ಭಾಗದ ರೈತರು ತಮಿಳುನಾಡಿನಿಂದ ಗೊಬ್ಬರವನ್ನು ತಂದು ಬೆಳೆಗೆ ಹಾಕುತ್ತಿದ್ದಾರೆ.ಯೂರಿಯಾವನ್ನು ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆ ಮಾರಾಟ ಮಾಡುತ್ತಿದ್ದರೂ ಸಹ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಇದರಿಂದ ರೈತರಿಗೆ ಯಾರಿಯಾ ನೆಪದಲ್ಲಿ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಆದ್ದರಿಂದ ಕೃಷಿ ಅಧಿಕಾರಿಗಳು ಯೂರಿಯಾ ಮಾರಾಟ ಮಾಡುತ್ತಿರುವ ಅಂಗಡಿಗಳಿಗೆ ಭೇಟಿ ನೀಡಿ ಸರ್ಕಾರ ನಿಗದಿ ಮಾಡಿರುವ ಧರಕ್ಕೆ ಮಾತ್ರ ಯೂರಿಯಾವನ್ನು ಮಾರಾಟ ಮಾಡಲು ನಿರ್ದೇಶನ ನೀಡಬೇಕು. ಅದನ್ನು ಮೀರಿ ಹೆಚ್ಚಿನ ಬೆಲೆ ಮಾರಾಟ ಮಾಡಿದರೆ ಅಂತಹವರ ಪರವಾನಗಿಯನ್ನು ರದ್ದು ಮಾಡಬೇಕೆಂದು ರೈತರು ಒತ್ತಾಯ ಮಾಡಿದ್ದಾರೆ.
ಕೋಟ್.....ರಸಗೊಬ್ಬರ ಅಂಗಡಿಗಳಿಗೆ ಯೂರಿಯಾ ಕಂಪನಿಯವರು ಕಾಂಪ್ಲೆಕ್ಸ್ ಪಡೆದರೆ ಮಾತ್ರ ಯೂರಿಯಾವನ್ನು ಪೂರೈಕೆ ಮಾಡುವುದಾಗಿ ಹೇಳಿ, ಮೊದಲೇ ಹಣವನ್ನು ಪಡೆದು ಯೂರಿಯಾವನ್ನು ಪೂರೈಕೆ ಮಾಡಿದ್ದಾರೆ. ಇದರಿಂದ ರೈತರಿಗೆ ಯೂರಿಯಾ ಮೂಟೆ ಜೊತೆಗೆ 5 ಕೆಜಿ ಕಾಂಪ್ಲೆಕ್ಸ್ ನೀಡುತ್ತಿರುವ ಕಾರಣ 450 ರು.ಗಳನ್ನು ಪಡೆಯುತ್ತಿರುವುದಾಗಿ ಅಂಗಡಿ ಮಾಲೀಕರು ಮಾಹಿತಿ ನೀಡಿದ್ದಾರೆ. ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.ವಿಜಯಕುಮಾರ್, ಕೃಷಿ ಅಧಿಕಾರಿ
೧೧ ಬಂಗಾರಪೇಟೆ: ತಾಲ್ಲೂಕಿನ ತೊಪ್ಪನಹಳ್ಳಿ ಗ್ರಾಮದ ಶ್ರೀ ಲಕ್ಷಿö್ಮ ವೆಂಕಟೆಶ್ವರ ಫರ್ಟಿಲೈಸರ್ ಅಂಗಡಿಯಲ್ಲಿ ಯೂರಿಯಾ ಖರೀದಿಗೆ ರೈತರು ನಿಂತಿರುವುದು.