ರಾಮನಗರ: ರೈತರ ಹೋರಾಟವನ್ನು ಕಂಡು ಭಯಗೊಂಡ ರಾಜ್ಯ ಸರ್ಕಾರ ಪಾದಯಾತ್ರೆಯನ್ನು ತಡೆದು ಹತ್ತಿಕ್ಕುವ ಕೆಲಸ ಮಾಡಿದೆ. ಟೌನ್ಶಿಪ್ ಯೋಜನೆ ಕೈಬಿಡುವವರೆಗೆ ರೈತರ ಹೋರಾಟ ನಿಲ್ಲುವುದಿಲ್ಲ ಎಂದು ರೈತಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ತುಂಬೇನಹಳ್ಳಿ ಶಿವಕುಮಾರ್ ಎಚ್ಚರಿಕೆ ನೀಡಿದರು.
ಬಿಡದಿ ಟೌನ್ಶಿಪ್ ಯೋಜನೆ ವಿರುದ್ಧ 3 ದಿನಗಳ ಜೆಡಿಎಸ್ ಪಾದಯಾತ್ರೆಯನ್ನು ಪೊಲೀಸರು ತಡೆದು 2ನೇ ದಿನಕ್ಕೆ ಮೊಟಕುಗೊಳಿಸಿದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ರೈತರು ಬಂದಿದ್ದು ಅಭೂತಪೂರ್ವ ಯಶಸ್ಸು ಸಿಕ್ಕಿರುವುದನ್ನು ಗಮನಿಸಿದ ರಾಜ್ಯ ಸರ್ಕಾರ ಶಾಂತಿಯುತ ಪಾದಯಾತ್ರೆಯನ್ನು ಹತ್ತಿಕ್ಕಿದೆ. ಮುಂದಿನ ದಿನಗಳಲ್ಲಿ ಇದರ ಪ್ರತಿಫಲವನ್ನು ಸರ್ಕಾರ ನಡೆಸುವವರು ಅನುಭವಿಸುತ್ತಾರೆ ಎಂದು ಹರಿಹಾಯ್ದರು.ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷ ಅವರಗೆರೆ ರವಿಕುಮಾರ್ ಮಾತನಾಡಿ, ಜೆಡಿಎಸ್ ಪಕ್ಷಕ್ಕೆ ರೈತರ ಮೇಲಿರುವ ಜವಾಬ್ದಾರಿಯಿಂದ ಅವರ ಉಳಿವಿಗಾಗಿ ಪಾದಯಾತ್ರೆ ನಡೆಸುತ್ತಿತ್ತು. ಪ್ರತಿಭಟನೆ ಮಾಡುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು ಎಂದು ನೆನ್ನೆಯಷ್ಟೇ ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಆದರೆ ಇಂದು ಪಾದಯಾತ್ರೆ ತಡೆಯುವ ಮುಖೇನ ಮಾತಿಗೆ ತಪ್ಪಿದ್ದಾರೆ. ಶಾಂತಿಯುತ ಪಾದಯಾತ್ರೆಗೂ ಅವಕಾಶ ಕೊಡುವುದಿಲ್ಲ ಎಂದರೆ ಇದು ತುಘಲಕ್ ಸರ್ಕಾರವೇ ಎಂದು ಪ್ರಶ್ನಿಸಿದರು.
ಬಿಡದಿ ಟೌನ್ಶಿಪ್ ಯೋಜನೆ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ರಿಯಲ್ ಎಸ್ಟೇಟ್ ದಂಧೆ ಮಾಡಲು ಹೊರಟಿದೆ. ಹಣ ಲೂಟಿ ಮಾಡುವುದು ಬಿಟ್ಟು ಬೇರೇನೂ ಮಾಡುತ್ತಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ರಿಯಲ್ ಎಸ್ಟೇಟ್ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಠಮಾರಿ ಧೋರಣೆ ರೈತರನ್ನು ಬೀದಿಯಲ್ಲಿ ನಿಲ್ಲಿಸಿದೆ. ಅನ್ನದಾತರು ಹೋರಾಟ ನಡೆಸುತ್ತಿದ್ದರೂ ಅವರಿಗೆ ಸ್ವಲ್ಪವೂ ಕನಿಕರ ಅಥವಾ ಕರುಣೆ ಬಂದಿಲ್ಲ. ಮುಖ್ಯಮಂತ್ರಿಯಾದವರು ನಾಡಿನ ಪ್ರತಿಯೊಬ್ಬ ಪ್ರಜೆಯ ಹಿತವನ್ನು ಬಯಸಬೇಕು. ಆದರೆ, ಡಿಕೆಶಿ ಹಠ ಸಾಧನೆ ಮಾಡುವ ಮೂಲಕ ರೈತರನ್ನು ಒಕ್ಕಲೆಬ್ಬಿಸಲು ಹೊರಟಿದ್ದಾರೆ. ಯಾವುದೇ ಕಾರಣಕ್ಕೂ ನಾವು ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಅವರಗೆರೆ ರವಿಕುಮಾರ್ ಕಿಡಿಕಾರಿದರು.
ರೈತಸಂಘ ಮತ್ತು ಹಸಿರುಸೇನೆ ಕಾನೂನು ಸಲಹೆಗಾರ ವಿಜಯ್ಕುಮಾರ್, ಪದಾಧಿಕಾರಿಗಳಾದ ಜುಟ್ಟನಪಾಳ್ಯ ಸುಬ್ಬಣ್ಣ, ರವಿ, ಬಸವರಾಜಪ್ಪ ಮತ್ತಿತರರು ಹಾಜರಿದ್ದರು.
10ಕೆಆರ್ ಎಂಎನ್ 14.ಜೆಪಿಜಿ
ರೈತಸಂಘದ ರಾಜ್ಯಾಧ್ಯಕ್ಷ ತುಂಬೇನಹಳ್ಳಿ ಶಿವಕುಮಾರ್ ಮಾತನಾಡಿದರು.