ಕನ್ನಡಪ್ರಭ ವಾರ್ತೆ ಮೈಸೂರು

ಕೃಷಿಯೊಂದಿಗೆ ಪೂರಕ ಚಟುವಟಿಕೆಯಾಗಿ ಜೇನು ಕೃಷಿಯನ್ನು ಅಳವಡಿಸಿಕೊಳ್ಳುವುದರಿಂದ ರೈತರು ಹೆಚ್ಚುವರಿ ಆದಾಯ ಗಳಿಸಬಹುದು ಹಾಗೂ ಬೆಳೆಗಳ ಪರಾಗ ಸ್ಪರ್ಶದಲ್ಲಿ ಜೇನುನೊಣಗಳ ಪಾತ್ರ ಮಹತ್ತರವಾಗಿದ್ದು, ಬೆಳೆಗಳ ಉತ್ಪಾದನೆ ಹೆಚ್ಚಳವಾಗುವಲ್ಲಿ ಜೇನು ಕೃಷಿ ಸಹಕಾರಿಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಎಚ್.ರವಿ ತಿಳಿಸಿದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರಾಜ್ಯ ವಲಯ ಯೋಜನೆಯಡಿ ಜಿಲ್ಲೆಯ ರೈತ/ರೈತ ಮಹಿಳೆಯರಿಗೆ ಜೇನು ಸಾಕಾಣಿಕೆ-ತಂತ್ರಜ್ಞಾನ, ಕೃಷಿಯಲ್ಲಿ ಪ್ರಾಮುಖ್ಯತೆ, ಜೇನು ಉತ್ಪಾದನೆ, ಸಂಸ್ಕರಣೆ ಮತ್ತು ಮಾರುಕಟ್ಟೆ ಅವಕಾಶಗಳು ಕುರಿತು ಏರ್ಪಡಿಸಿದ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಕೃಷಿಯಲ್ಲಿ ಅತಿಯಾದ ರಾಸಾಯನಿಕಗಳ ಬಳಕೆಯಿಂದ ಜೇನುನೊಣಗಳ ನೈಸರ್ಗಿಕ ವಾಸಸ್ಥಾನಕ್ಕೆ ಧಕ್ಕೆ ಉಂಟಾಗುವುದರಿಂದ ಸ್ವಾಭಾವಿಕ ಜೇನುನೊಣಗಳ ಸಂತತಿ ಕಡಿಮೆಯಾಗುತ್ತಿದೆ. ಆದ್ದರಿಂದ ರೈತರು ಸಾವಯವ ಕೃಷಿಗೆ ಹೆಚ್ಚು ಪ್ರಾಮುಖ್ಯತೆ ನೀಡುವಂತೆ ಸಲಹೆ ನೀಡಿದರು.

ಉಪ ಕೃಷಿ ನಿರ್ದೇಶಕ ಕೆ. ನಾಗರಾಜು ಅವರು, ಕೃಷಿಯಲ್ಲಿ ಮಿತ್ರ ಕೀಟಗಳ ಮಹತ್ವ ಮತ್ತು ಸಸ್ಯ ಸಂರಕ್ಷಣೆಯಲ್ಲಿ ಮಿತ್ರ ಕೀಟಗಳ ಪಾತ್ರ ಬಗ್ಗೆ ಮಾಹಿತಿ ನೀಡಿದರು.


ವಿಸ್ತರಣಾ ಶಿಕ್ಷಣ ಘಟಕದ ಸಹಾಯಕ ಪ್ರಾಧ್ಯಾಪಕಿ ಡಾ. ಮೌಲ್ಯ ಅವರು, ಜೇನು ಹುಳುವಿನ ಪ್ರಭೇದಗಳ ಕಿರು ಪರಿಚಯ ಹಾಗೂ ಕೀಟನಾಶಕಗಳ ಬಳಕೆಯಿಂದ ಜೇನುಹುಳುವಿನ ಮೇಲಾಗುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.

ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಡಿ.ಟಿ. ವೆಂಕಟೇಶ್ ಅವರು, ರೈತರಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸುವುದು ಹಾಗೂ ಬ್ಯಾಂಕ್ ವ್ಯವಹಾರಗಳ ಕುರಿತು ಮಾಹಿತಿ ತಿಳಿಸಿದರು.

ನಿವೃತ್ತ ಬ್ಯಾಂಕ್ ಅಧಿಕಾರಿ ಎಚ್.ಎಸ್. ಕೃಷ್ಣಮೂರ್ತಿ ಅವರು, ಆಧುನಿಕ ಜೀವನ ಶೈಲಿಯಲ್ಲಿ ಒತ್ತಡ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ವಿವರಿಸಿದರು.

ಜೇನು ಕೃಷಿಕರಾದ ಆರ್. ನಂದಿನಿ ಅವರು, ಜೇನು ಸಾಕಾಣಿಕೆಯಲ್ಲಿ ಆದಾಯ ಉತ್ಪನ್ನ ಚಟುವಟಿಕೆಗಳು, ಪ್ರಾತ್ಯಕ್ಷಿಕೆ, ಜೇನುಗೂಡು, ಜೇನು ನೊಣ ಸಾಕಾಣಿಕೆ, ಎಚ್ಚರಿಕೆ ಹಾಗೂ ನಿರ್ವಹಣಾ ಕ್ರಮಗಳು ಮತ್ತು ಕ್ಷೇತ್ರ ಮಟ್ಟದಲ್ಲಿ ಜೇನಿನ ಪ್ರಭೇದಗಳನ್ನು ಗುರುತಿಸುವುದು ಜೇನು ಪೆಟ್ಟಿಗೆ ನಿರ್ವಹಣೆ ಮತ್ತು ಜೇನು ತುಪ್ಪ ಕೊಯ್ಲು ಮಾಡುವುದರ ಬಗ್ಗೆ ಮಾಹಿತಿ ನೀಡಿದರು.

ಔಟ್‌ ರೀಚ್‌ ಸಂಸ್ಥೆಯ ಶಾಲಿನಿ ಅವರು, ಹಾವಿನ ಪ್ರಭೇದಗಳ ಕಿರು ಪರಿಚಯ, ಹಾವು ಕಡಿತ ಸಂದರ್ಭದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮ ತಿಳಿಸಿದರು.

ಹೆಬ್ಬಾಳು ಕೈಗಾರಿಕಾ ವಲಯದಲ್ಲಿರುವ ಮ್ಯಾಕ್ ಬೀ9 ಎಲಿಗೆನ್ಸಿ ಸಂಸ್ಥೆಗೆ ಕ್ಷೇತ್ರ ಭೇಟಿ ನೀಡಲಾಯಿತು. ಸಂಸ್ಥೆಯ ಮುಖ್ಯಸ್ಥ ಟಿ.ಜಿ. ಪ್ರಸಾದ್ ಅವರು, ತಮ್ಮ ಸಂಸ್ಥೆಯಿಂದ ದೊರೆಯುವ ಸೌಲಭ್ಯಗಳ ಕುರಿತು ವಿವರಿಸಿದರು.

‌ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಪ್ರೊ.ಎಂ. ಶಂಕರ ರೆಡ್ಡಿ, ಉಪ ಕೃಷಿ ನಿರ್ದೇಶಕ ಕೆ. ನಾಗರಾಜು, ಸಹಾಯಕ ಕೃಷಿ ನಿರ್ದೇಶಕಿ ಎಚ್.ಬಿ. ಮಧುಲತಾ, ತರಬೇತಿ ಸಂಯೋಜಕರಾದ ಗೌರವ್ವ ಅಗಸೀಬಾಗಿಲ ಇದ್ದರು.