ಸಾರಾಂಶ
ದೇವಸಮುದ್ರ ಗ್ರಾಮದ ವಿತರಣಾ ನಾಲೆಯ ಸಣಾಪುರ ಡಿಸ್ಟ್ರಿಬ್ಯೂಟರ್ ನ 16 ಕಿ.ಮೀ. ಕಾಲುವೆ ಸಂಪೂರ್ಣ ಹೂಳು ತುಂಬಿಕೊಂಡು ಜಂಗಲ್ ಬೆಳೆದುಕೊಂಡಿದೆ.
ಕಂಪ್ಲಿ: ತಾಲೂಕಿನ ದೇವಸಮುದ್ರ ಗ್ರಾಮದ ಬಳಿಯ ವಿತರಣಾ ನಾಲೆಯಲ್ಲಿ ಹೂಳು ತುಂಬಿದೆ. ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ರೈತರು ಸ್ವಂತ ಹಣ ವ್ಯಯಿಸಿ ಹೂಳು ಎತ್ತುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಈ ವೇಳೆ ರೈತ ಸುರೇಂದ್ರ ಮಾತನಾಡಿ, ದೇವಸಮುದ್ರ ಗ್ರಾಮದ ವಿತರಣಾ ನಾಲೆಯ ಸಣಾಪುರ ಡಿಸ್ಟ್ರಿಬ್ಯೂಟರ್ ನ 16 ಕಿ.ಮೀ. ಕಾಲುವೆ ಸಂಪೂರ್ಣ ಹೂಳು ತುಂಬಿಕೊಂಡು ಜಂಗಲ್ ಬೆಳೆದುಕೊಂಡಿದೆ. ಇದರಿಂದಾಗಿ ರೈತರ ಸಾವಿರಾರು ಎಕರೆ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಹೀಗಾದರೆ ಕಾಲುವೆ ನೀರು ನಂಬಿಕೊಂಡು ಬೆಳೆ ಬೆಳೆದ ರೈತರ ಪಾಡೇನು? ಈ ಕುರಿತು ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಕಾಲುವೆಯಲ್ಲಿನ ಹೂಳು ತೆಗೆಸಿ ಹಾಗೂ ಜಂಗಲ್ ಕಟಿಂಗ್ ಮಾಡಿಸಿ ರೈತರಿಗೆ ಅನುಕೂಲ ಕಲ್ಪಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೆಲ ರೈತರು ಸೇರಿಕೊಂಡು ಇಂತಿಷ್ಟು ಹಣ ಸಂಗ್ರಹಿಸಿ ನಾಲೆಯ 1 ಕಿ.ಮೀ.ನಷ್ಟು ಹೂಳು ಎತ್ತುವ ಹಾಗೂ ಜಂಗಲ್ ಕಟಿಂಗ್ ಕಾರ್ಯ ಮಾಡುತ್ತಿದ್ದೇವೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕಾಲುವೆ ಹೂಳೆತ್ತುವ ಹಾಗೂ ಜಂಗಲ್ ಕಟಿಂಗ್ ಕಾರ್ಯವನ್ನು ಕೈಗೆತ್ತಿಕೊಂಡು ರೈತರಿಗೆ ಅನುಕೂಲ ಕಲ್ಪಿಸಿ ಕೊಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ರೈತರಾದ ವೆಂಕಟನಾಯ್ಡು, ರಂಗಯ್ಯ, ಗಂಗಣ್ಣ, ಕೃಷ್ಣಂ ರಾಜು, ನರಸಿಂಹಲು, ಪುಲ್ಲಯ್ಯ, ಹರಿ ಬಾಬು ಇದ್ದರು.