ಜಿಲ್ಲೆಗೆ ರಾಮನ ಹೆಸರೇ ಇರಲಿ: ರೈತರ ಆಗ್ರಹ

| Published : May 25 2025, 02:17 AM IST / Updated: May 25 2025, 02:18 AM IST

ಸಾರಾಂಶ

ಕನಕಪುರ: ರಾಮನ ಹೆಸರಿನೊಂದಿಗೆ ಬೆರೆತಿರುವ ಜಿಲ್ಲೆಯ ಹೆಸರನ್ನು ಮರುನಾಮಕರಣ ಮಾಡಿ ದೊಡ್ಡ ಸಾಧನೆ ಮಾಡಿರುವುದಾಗಿ ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾತನೂರು ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರ ಮಾಡುವ ಕಡೆಗೆ ಮೊದಲು ಗಮನ ಹರಿಸಲಿ ಎಂದು ರಾಜ್ಯ ರೈತ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಕನಕಪುರ: ರಾಮನ ಹೆಸರಿನೊಂದಿಗೆ ಬೆರೆತಿರುವ ಜಿಲ್ಲೆಯ ಹೆಸರನ್ನು ಮರುನಾಮಕರಣ ಮಾಡಿ ದೊಡ್ಡ ಸಾಧನೆ ಮಾಡಿರುವುದಾಗಿ ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾತನೂರು ಹೋಬಳಿ ಕೇಂದ್ರ ವನ್ನು ತಾಲೂಕು ಕೇಂದ್ರ ಮಾಡುವ ಕಡೆಗೆ ಮೊದಲು ಗಮನ ಹರಿಸಲಿ ಎಂದು ರಾಜ್ಯ ರೈತ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಪದಾಧಿಕಾರಿಗಳು, ನಮಗೆ ಬೆಂಗಳೂರು ದಕ್ಷಿಣ ಮರುನಾಮಕರಣದ ಅವಶ್ಯಕತೆ ಇಲ್ಲ. ರಾಮನಗರವಾಗೇ ಉಳಿಯಬೇಕು. ರಾಜಕಾರಣ ಹಾಗೂ ಒಬ್ಬರ ಮೇಲಿನ ಹಠಕ್ಕಾಗಿ ಹೆಸರು ಬದಲಾವಣೆಯಿಂದ ಯಾರಿಗೂ ಉಪಯೋಗವಿಲ್ಲ. ಉಪಮುಖ್ಯಮಂತ್ರಿಗಳೇ ಮೊದಲು ತಮಗೆ ಜನ್ಮ ನೀಡಿ ರಾಜಕೀಯ ಶಕ್ತಿ ಕೊಟ್ಟ ಸಾತನೂರನ್ನು ತಾಲೂಕು ಕೇಂದ್ರವನ್ನಾಗಿ ಮಾಡಿ ಋಣ ತೀರಿಸಿ, ಅದನ್ನು ಬಿಟ್ಟು ಬೆಂಗಳೂರು ದಕ್ಷಿಣ ಮಾಡುತ್ತವೆ ಎಂದು ಹೊರಟಿರುವುದು ಕೇವಲ ನಿಮಗೆ ಹಾಗೂ ನಿಮ್ಮ ಹಿಂಬಾಲಕರಿಗೆ ರಿಯಲ್ ಎಸ್ಟೇಟ್ ಮಾಫಿಯಾ ದಂಧೆ ಮಾಡಿಕೊಳ್ಳುವ ಏಕೈಕ ಉದ್ದೇಶ ಎಂದು ಆರೋಪಿಸಿದರು.

ನಿಮ್ಮ ಸರ್ಕಾರದ ಜನ ವಿರೋಧಿ ನೀತಿಗಳು ಇದೇ ರೀತಿ ಮುಂದುವರಿದರೆ ರೈತ ಸಂಘ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ಬರಲಿದೆ. ಮೊದಲು ಸಾತನೂರನ್ನು ತಾಲೂಕು ಮಾಡಿ ಅಭಿವೃದ್ಧಿಗೆ ಆದ್ಯತೆ ನೀಡಿ ಆನಂತರ ದಕ್ಷಿಣ, ಪೂರ್ವ ಜಿಲ್ಲೆ ಎಂದು ದಿಕ್ಕಿಗೆ ಒಂದೊಂದು ಮಾಡಿ, ಮೊದಲು ನಿಮಗೆ ಜನ್ಮನೀಡಿದ ಸಾತನೂರು ಭಾಗವನ್ನು ಅಭಿವೃದ್ಧಿ ಮಾಡಿ ಇಲ್ಲದಿದ್ದರೇ ನಿಮಗೆ ಮುಂದಿನ ಪಂಚಾಯತಿ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ರೈತ ಸಂಘದ ಅಭ್ಯರ್ಥಿಗಳನ್ನು ಹಾಕುವ ಮೂಲಕ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು.

ರೈತಸಂಘದ ಜಿಲ್ಲಾ ಅಧ್ಯಕ್ಷ ಕಾಡಹಳ್ಳಿ ಅನುಕುಮಾರ್, ಉಪಾಧ್ಯಕ್ಷ ಶಿವಗೂಳಿಗೌಡ, ತಾಲೂಕು ಅಧ್ಯಕ್ಷ ಶಿವಸ್ವಾಮಿ, ಉಪಾಧ್ಯಕ್ಷ ರವಿಚಂದ್ರು, ಪ್ರ.ಕಾರ್ಯದರ್ಶಿ ಲೋಕೇಶ್, ಸಾತನೂರು ಹೋಬಳಿ ಅಧ್ಯಕ್ಷ ರಾಜೇಶ್, ಪ್ರಧಾನ ಕಾರ್ಯದರ್ಶಿ ಕಿರಣ್ ಇತರರಿದ್ದರು.

ಕೆ ಕೆ ಪಿ ಸುದ್ದಿ 01:

ಬೆಂಗಳೂರು ದಕ್ಷಿಣ ಜಿಲ್ಲೆ ಮರುನಾಮಕರಣ ವಿರೋಧಿಸಿ ಕನಕಪುರ ತಾಲೂಕು ರೈತ ಸಂಘದ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.