ರಾಮನಗರ: ಕೆಆರ್ ಎಸ್ ಜಲಾಶಯದಿಂದ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿನಿತ್ಯ 3500 ಕ್ಯುಸೆಕ್ ನೀರು ಹರಿಸಲು ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ಆದೇಶ ಹೊರಡಿಸಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತಸಂಘ ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು ನಗರದಲ್ಲಿ ಬುಧವಾರ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ಸೇರಿದ ರೈತರು, ರಕ್ತ ಕೊಟ್ಟರು ನೀರು ಕೊಡುವುದಿಲ್ಲ, ಬರಗಾಲದಲ್ಲಿ ರೈತರಿಗೆ ಬರೆ ಎಳೆದ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ವಿರುದ್ಧ ಘೋಷಣೆ ಕೂಗುತ್ತಾ ಮಾನವ ಸರಪಳಿ ರಚಿಸಿದರು. ಇದರಿಂದ ಹಳೇ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತು. ಐಜೂರು ವೃತ್ತದಲ್ಲಿ ನಾಲ್ಕು ದಿಕ್ಕುಗಳಲ್ಲಿಯೂ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಿದ ಬಳಿಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಈ ವೇಳೆ ಮಾತನಾಡಿದ ರೈತ ಮುಖಂಡ ಕುಮಾರಸ್ವಾಮಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮಿಳುನಾಡಿಗೆ ಒಂದಿಂಚು ನೀರನ್ನು ಬಿಡಬಾರದು. ಒಂದು ವೇಳೆ ರಾಜ್ಯಸರ್ಕಾರ ನೀರು ಹರಿಸಿದರೆ ಆಗಸ್ಟ್ 3ರಂದು ಬೆಂಗಳೂರಿನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳ ಸಭೆ ನಡೆಯಲು ಬಿಡುವುದಿಲ್ಲ. ಅಲ್ಲಿ ಆಗುವ ಅನಾಹುತಕ್ಕೆ ಸರ್ಕಾರವೇ ಹೊಣೆ ಆಗಬೇಕಾಗುತ್ತದೆ ಎಚ್ಚರಿಕೆ ನೀಡಿದರು.
ಈಗಾಗಲೇ ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ದಕ್ಷಿಣ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದೆ. ಕೆರೆಗಳು, ಕೊಳವೆ ಬಾವಿಗಳು ಬತ್ತಿದ್ದು, ರೈತರ ಬೆಳೆಗಳು ಒಣಗುತ್ತಿವೆ. ಕೆಆರ್ ಎಸ್ ಜಲಾಶಯದ ಸಂಗ್ರಹವೂ ಅಪಾಯ ಮಟ್ಟದಲ್ಲಿದ್ದು, ಒಂದು ಬೆಳೆಗೂ ನೀರು ಸಾಕಾಗುವುದಿಲ್ಲ. ಇಂತಹ ಸಂದರ್ದಲ್ಲಿ 4 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಆದೇಶಿಸಿರುವುದು ರೈತರ ಬದುಕಿನೊಂದಿಗೆ ಚೆಲ್ಲಾಟವಾಡಿದಂತಾಗಿದೆ ಎಂದು ಟೀಕಿಸಿದರು.ತಮಿಳುನಾಡು ಕಾವೇರಿ ನೀರನ್ನು ಕೇವಲ ಕೃಷಿಗಷ್ಟೇ ಅಲ್ಲ ಉದ್ಯಮಕ್ಕೂ ಬಳಸಿಕೊಂಡು ಕರ್ನಾಟಕದ ಪಾಲನ್ನು ಲೂಟಿ ಮಾಡುತ್ತಿದೆ. ಸಿಡಬ್ಲುಆರ್ ಸಿ ಆದೇಶದಲ್ಲಿ ಕರ್ನಾಟಕದ ಕುಡಿಯುವ ನೀರು, ಜಾನುವಾರುಗಲ ನೀರು, ಪರಿಸರದ ಅಗತ್ಯವನ್ನು ಪರಿಗಣಿಸಿಯೇ ಇಲ್ಲ. ನ್ಯಾಯಧೀಕರಣದ ತೀರ್ಪಿನಲ್ಲಿ ಕರ್ನಾಟಕದ ಮೊದಲು ಕುಡಿಯುವ ನೀರು ಎಂಬ ಸ್ಪಷ್ಟ ನಿಬಂಧನೆ ಇದ್ದರೂ ಅದನ್ನು ಗಾಳಿಗೆ ತೂರಲಾಗಿದೆ ಎಂದು ಕುಮಾರಸ್ವಾಮಿ ದೂರಿದರು.
ರೈತಸಂಘ ರಾಜ್ಯ ಉಪಾಧ್ಯಕ್ಷ ಮಲ್ಲಯ್ಯ ಮಾತನಾಡಿ, ಸಿಡಬ್ಲುಆರ್ ಸಿ ಅವೈಜ್ಞಾನಿಕ ಆದೇಶ ವಿರೋಧಿಸಿ ಕರ್ನಾಟಕ ಸರ್ಕಾರ ಕೂಡಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕು. ಯಾವುದೇ ಕಾರಣಕ್ಕೂ ಕೆಆರ್ ಎಸ್ ನಿಂದ ಒಂದು ಹನಿ ನೀರನ್ನು ತಮಿಳುನಾಡಿಗೆ ಬಿಡಬಾರದು. ಬರಗಾಲದ ಸಂದರ್ಭದಲ್ಲಿ ನೀರು ಬಿಟ್ಟದರೆ ಕರ್ನಾಟಕದ 40 ಲಕ್ಷ ರೈತರ ಬದುಕು ಬೀದಿಗೆ ಬೀಳುತ್ತದೆ ಎಂದು ಕಿಡಿಕಾರಿದರು.
ಕರ್ನಾಟಕ ಸರ್ಕಾರ ತಕ್ಷಣವೇ ಎಲ್ಲಾ ರಾಜಕೀಯ ಪಕ್ಷಗಳ ಸಭೆ ಕರೆದು ಏಕಾಭಿಪ್ರಾಯದ ನಿರ್ಣಯ ಮಾಡಬೇಕು. ಅಗತ್ಯ ಬಿದ್ದರೆ ಕಾವೇರಿ ಉಳಿಸಿ, ಕರ್ನಾಟಕ ಉಳಿಸಿ ಚಳವಳಿ ಮೂಲಕ ಬೃಹತ್ ಹೋರಾಟಕ್ಕೆ ರೈತಸಂಘ ಸಿದ್ಧವಿದೆ. ಸಿಡಬ್ಲ್ಯುಆರ್ ಸಿ ಮತ್ತು ಕೇಂದ್ರ ಸರ್ಕಾರ ಕರ್ನಾಟಕದ ರೈತರ ಕಣ್ಣೀರಿಗೆ ಬೆಲೆ ಕೊಡದಿದ್ದರೆ ಅದರ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತಸಂಘ ಸಂಚಾಲಕ ಚೀಲೂರು ಮುನಿರಾಜು, ಜಿಲ್ಲಾಧ್ಯಕ್ಷ ಕೃಷ್ಣಯ್ಯ, ಜಿಲ್ಲಾ ಗೌರವಾಧ್ಯಕ್ಷ ತಿಮ್ಮೇಗೌಡ, ಕಾರ್ಯದರ್ಶಿ ನಾಗರಾಜು, ಕಾರ್ಯಾಧ್ಯಕ್ಷ ಪುಟ್ಟಸ್ವಾಮಿ, ಮುಖಂಡರಾದ ಡಿ.ಕೆ.ಲೋಕೇಶ್ , ಪ್ರಶಾಂತ್ ಕುಮಾರ್ , ಮಾರುತಿ, ರಾಜೇಂದ್ರ, ಶಿವಲಿಂಗಯ್ಯ, ರಾಮಲಿಂಗಯ್ಯ ಮತ್ತಿತರರು ಭಾಗವಹಿಸಿದ್ದರು.ಕೋಟ್ ................
ಕರ್ನಾಟಕ ಸರ್ಕಾರದ ನೀರಾವರಿ ಸಚಿವರು ಹಾಗೂ ಅಡ್ವೋಕೇಟ್ ಜನರಲ್ ರವರು ಸಿಡಬ್ಯೂಆರ್ ಸಿ ಸಭೆಗೆ ಕೆಆರ್ ಎಸ್ ಅಣೆಕಟ್ಟೆಯಲ್ಲಿ ಸಂಗ್ರಹವಾಗಿರುವ ನೀರು ಮತ್ತು ಬರ ಪರಿಸ್ಥಿತಿ ತಿಳಿಸಲು ವಿಫಲರಾಗಿದ್ದಾರೆ. ಬೆಂಗಳೂರಿನ ಜನರಿಗೆ ಕುಡಿಯಲು ನೀರಿಲ್ಲ, ಮುಂಗಾರು ಕ್ಷೀಣಿಸಿದೆ. ಇಂತಹ ಪರಿಸ್ಥಿತಿಯಲ್ಲಿ 4 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲು ಹೇಗೆ ಸಾಧ್ಯ.-ಮಲ್ಲಯ್ಯ, ರಾಜ್ಯ ಉಪಾಧ್ಯಕ್ಷರು, ರೈತಸಂಘ.
ಕೋಟ್ ................ಮುಖ್ಯಮಂತ್ರಿಗಳು ಸಚಿವ ಸಂಪುಟ ರಚನೆ ಮಾಡುವ ದಾಹದಲ್ಲಿ ರಾಜ್ಯದ ಜನರ ಕುಡಿಯುವ ನೀಿನ ಸಮಸ್ಯೆಯನ್ನು ಮರೆತಿರುವುದು ಈ ನಾಡಿನ ದುರ್ದೈವ. ಕೂಡಲೇ ಸರ್ಕಾರ ಸಿಡಬ್ಲ್ಯೂಆರ್ ಸಿ ವರದಿಯ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು.
- ಕೃಷ್ಣಯ್ಯ, ಜಿಲ್ಲಾಧ್ಯಕ್ಷರು, ರೈತಸಂಘ29ಕೆಆರ್ ಎಂಎನ್ 3.ಜೆಪಿಜಿ
ರಾಮನಗರದ ಐಜೂರು ವೃತ್ತದಲ್ಲಿ ರೈತರು ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.