ಸರ್ಕಾರದ ಬೆಲೆ ಏರಿಕೆಯಿಂದ ರೈತರ ಜೀವಕ್ಕೆ ಕುತ್ತು

| Published : Sep 08 2025, 01:01 AM IST

ಸರ್ಕಾರದ ಬೆಲೆ ಏರಿಕೆಯಿಂದ ರೈತರ ಜೀವಕ್ಕೆ ಕುತ್ತು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆರಿಗೆ ಇಳಿಕೆ ಮಾಡುವುದರೊಂದಿಗೆ ಜಗತ್ತೆ ಹುಬ್ಬೆರಿಸುವಂತೆ ಮಾಡಿದೆ. ಬಿಜೆಪಿ ಜನಪರ ಸರ್ಕಾರ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಸುರಿದ ಬಾರಿ ಮಳೆಗೆ ಜಿಲ್ಲಾದ್ಯಂತ ರೈತರ ಬೆಳೆ ಸಂಪೂರ್ಣ ಹಾಳಾಗಿದ್ದು, ಸರ್ಕಾರ ಬೆಳೆ ಪರಿಹಾರ ನೀಡದೆ ಬೆಲೆ ಏರಿಕೆಯಲ್ಲಿ ನಿರತವಾಗಿ ರೈತರ ಜೀವಕ್ಕೆ ಕುತ್ತು ತಂದಿದೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಕಿಡಿಕಾರಿದರು.

ತಾಲೂಕಿನ‌ ಮುತಗಾ ಮತ್ತು ಮಾರಿಹಾಳ ಗ್ರಾಮದ ಬೆಳೆ ಹಾನಿಯಾದ ರೈತರ ಜಮೀನುಗಳಿಗೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು, ರೈತರು ದೇಶಕ್ಕೆ ದುಡಿದು ಅನ್ನ ನೀಡುವ ಮಹತ್ಕಾರ್ಯದಲ್ಲಿ ಇರುವವರು. ಅತಿವೃಷ್ಟಿಯಿಂದ ಬೆಳೆ ಹಾಳಾಗಿ ರೈತರು ಕಂಗಾಲಾಗಿದ್ದಾರೆ. ಅವರ ನೆರವಿಗೆ ಧಾವಿಸಬೇಕಾಗಿದ್ದ ರಾಜ್ಯ ಸರ್ಕಾರ ಕಾಲಹರಣ ಮಾಡುತಿದ್ದು ಕೆಲ ನೊಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತಿದ್ದಾರೆ. ರೈತರು ಯಾವುದೇ ಕಾರಣಕ್ಕು ಎದೆಗುಂದದೆ ಧೈರ್ಯವಾಗಿ ಇರಬೇಕು. ನಿಮ್ಮ ಬೆನ್ನಲುಬಾಗಿ ಬಿಜೆಪಿ ಸದಾ ಇರುತ್ತದೆ. ಅಮೂಲ್ಯವಾದ ಜೀವ ಕಳೆದುಕೊಳ್ಳಬಾರದು ಎಂದು ತಿಳಿಸಿದರು.

ರೈತರ ಸಂಕಷ್ಟಕ್ಕೆ ಸ್ಪಂದಿಸುವ ಬಿಜೆಪಿ ಈ ಹಿಂದೆ ಬಿ.ಎಸ್.ಯಡಿಯುರಪ್ಪನವರ ಸರ್ಕಾರದಲ್ಲಿ ಕೇಂದ್ರದಕಡೆ ಬೊಟ್ಟು ಮಾಡದೆ ಯಾವುದೇ ಎನ್‌ಡಿಆರ್‌ಎಫ್ ನಿಯಮ‌ ನೋಡದೆ ಬೆಳೆ ಹಾನಿಯಾದ ರೈತರ ಕುಟುಂಬಕ್ಕೆ ಪ್ರತಿ ಹೆಕ್ಟೇರ್‌ ಮಳೆ ಆಶ್ರಿತ ಬೆಳೆಗೆ ₹17,800, ನೀರಾವರಿ ಬೆಳೆಗೆ ₹23,500 ಹಾಗೂ ತೊಟಗಾರಿಕೆ ಬೆಳೆಗಳಿಗೆ ₹28,500 ನೀಡಿದೆ. ಮನೆಗೆ ನೀರು ನುಗ್ಗಿದರೆ ₹10 ಸಾವಿರ, ಮನೆ ಹಾನಿಯಾದರೆ ₹5 ಲಕ್ಷ ಪರಿಹಾರ ನೀಡಿದ್ದೇವೆ ಎಂದರು.

ಅನಾವೃಷ್ಟಿಯಿಂದಾಗಿ ಬೆಳೆಗಳಿಗೆ ಭಾರೀ ಹಾನಿ ಉಂಟಾದ ರೈತರೊಂದಿಗೆ ಚರ್ಚಿಸಿ, ಹೊಲಗಳಲ್ಲಿ ಬೆಳೆ ನಾಶವಾದ ಸ್ಥಿತಿ ಪರಿಶೀಲಿಸಿದರು. ಈ ವೇಳೆ ರೈತರು ತಮ್ಮ ಸಮಸ್ಯೆ ವಿವರಿಸಿ, ತಕ್ಷಣದ ಪರಿಹಾರ ಧನ ನೀಡುವಂತೆ ಸರ್ಕಾರವನ್ನು ಒತ್ತಾಯಿಸುವಂತೆ ಮನವಿ ಮಾಡಿದರು. ಬೆಳೆ ನಾಶವಾದ ಹಳ್ಳಿಗಳ ರೈತರು ತಮ್ಮ ಜೀವನೋಪಾಯವೇ ತೊಂದರೆಗೊಳಗಾದ್ದರಿಂದ ಸರ್ಕಾರದ ಪ್ರತಿನಿಧಿಗಳು ರೈತರಿಗೆ ಧೈರ್ಯ ನೀಡಿ ತಕ್ಷಣ ನೆರವು ನೀಡುವ ಅತ್ಯಗತ್ಯವಿದೆ ಎಂದರು.

ಈ ವೇಳೆ ಗ್ರಾಮೀಣ ಮತಕ್ಷೇತ್ರದ ಮಂಡಲ ಅಧ್ಯಕ್ಷ ಯುವರಾಜ ಜಾಧವ, ಉಮೇಶ ಪೂರಿ, ಲಕ್ಷ್ಮಣ ದೇವರೋಜಿ, ಅಡಿವೇಶ ಅಂಗಡಿ, ಸಿದ್ದಯ್ಯ ಪೂಜಾರ, ಮಲ್ಲಯ್ಯ ಪೂಜಾರ, ಉಪ್ಪಿನ, ಸುಭಾಷ ಚೌಗಲೆ, ರಾಜು ಕನಬುರ್ಗಿ, ಪ್ರಮೋದ ಪಾಟೀಲ, ಭೀಮರಾಂ ಬಡೋಚಿ, ಪರುಶರಾಮ ಕೇದಾರ ಸೇರಿದಂತೆ ಅನೇಕ ರೈತರು ಕಾರ್ಯಕರ್ತರು ಇದ್ದರು.

ಕಾಂಗ್ರೆಸ್ ಸರ್ಕಾರ್ ಬಿಡಿಗಾಸು ನೀಡದಿರುವುದು ಆತಂಕದಲ್ಲಿರುವ ರೈತರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದೆ. ಅಲ್ಲದೆ ಈ ಸರ್ಕಾರ ಬೆಲೆ ಹೆಚ್ಚು ಮಾಡುವುದರೊಂದಿಗೆ ರೈತರ, ಕೂಲಿ ಕಾರ್ಮಿಕರ ಹಾಗೂ ಜನಸಾಮಾನ್ಯರ ಮೇಲೆ‌ ಬರೆ ಹಾಕುತ್ತಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆರಿಗೆ ಇಳಿಕೆ ಮಾಡುವುದರೊಂದಿಗೆ ಜಗತ್ತೆ ಹುಬ್ಬೆರಿಸುವಂತೆ ಮಾಡಿದೆ. ಬಿಜೆಪಿ ಜನಪರ ಸರ್ಕಾರ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಸಂಜಯ ಪಾಟೀಲ ತಿಳಿಸಿದರು.