ಕನ್ನಡಪ್ರಭ ವಾರ್ತೆ ಮೈಸೂರು

ದೊಡ್ಡ ನಗರಗಳ ಸುತ್ತಾ ಶಾಸಕರು, ಜನಪ್ರತಿನಿಧಿಗಳು, ಭೂ ಮಾಫಿಯಾ ಹಾವಳಿಯಿಂದ ರೈತರು ಭೂಮಿ ಕಳೆದುಕೊಂಡು ಬೀದಿ ಪಾಲಾಗುತ್ತಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕಳವಳ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಟಿ. ಕಾಟೂರು ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಜಾಗೃತರಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದು ಕರೆ ನೀಡಿದರು.

ವಿದ್ಯುತ್ ಕಂಪನಿಯನ್ನ ಖಾಸಗಿ ಟಾಟಾ ಕಂಪನಿ ಮಾಲೀಕತ್ವಕ್ಕೆ ವಹಿಸಿದರೆ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನಿಲ್ಲುತ್ತದೆ. ರಾಜ್ಯದ 40 ಲಕ್ಷ ಕೃಷಿ ಪಂಪ್ ಸೆಟ್ ರೈತರು ತಮ್ಮ ತಮ್ಮ ಭಾಗದಲ್ಲಿ ಪ್ರತಿಭಟಿಸಿ ವಿರೋಧಿಸಬೇಕು. ರೈತರ ಹೋರಾಟ ಅಂದರೆ ರಾಜಕೀಯ ಪಕ್ಷದ ಹಂಗಿನಲ್ಲಿ ನಡೆಯಬಾರದು, ಇದರಿಂದ ಹೋರಾಟಗಳು ವಿಫಲವಾಗುತ್ತಿವೆ ಎಂದು ಅವರು ಎಚ್ಚರಿಸಿದರು.

ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿ ಮುಖ್ಯಮಂತ್ರಿ ಆಗಿರುವ ಡಿ.ಕೆ. ಶಿವಕುಮಾರ್ ಅವರು ಯೋಜನೆಗೆ ಅಡಿಗಲು ಹಾಕಿ, ಈ ಭಾಗದ ಜನರ ರೈತರ ಹಿತ ಕಾಪಾಡಬೇಕು. ಸುಪ್ರಿಂಕೋರ್ಟ್ ತೀರ್ಪು ನೀಡಿರುವ ಹೆಚ್ಚುವರಿ ನೀರನ್ನು ಬಳಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.


ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಲಕ್ಷ್ಮೀಪುರ ವೆಂಕಟೇಶ್, ವರಕೋಡು ನಾಗೇಶ್, ಮಾರ್ಬಳ್ಳಿ ನೀಲಕಂಠಪ್ಪ, ದೇವನೂರು ವಿಜಯೇಂದ್ರ, ವಾಜಮಂಗಲ ಮಹಾದೇವ, ಕಾಟುರು ಮಹದೇವಸ್ವಾಮಿ, ಕಾಟೂರು ನಾಗೇಶ್, ಕೂರ್ಗಳ್ಳಿ ರವಿಕುಮಾರ್, ಗಿರೀಶ್, ನಾಗೇಂದ್ರ, ರಂಗರಾಜು, ನಂಜುಂಡಿ, ಅಂಬಳೆ ಮಂಜುನಾಥ್, ಸಿದ್ಧರಾಮ, ಮಾರ್ಬಳ್ಳಿ ಶಿವಣ್ಣ, ಬಸವರಾಜು, ಬರಡನಪುರ ಮಹೇಶ್, ಶ್ರೀಕಂಠ, ಸತೀಶ್, ಬಾಲು, ಟಿ. ಕಾಟೂರು ಗ್ರಾಮ ಘಟಕದ ಅಧ್ಯಕ್ಷ ಪುಟ್ಟಸ್ವಾಮಿ, ಗೌರವಾಧ್ಯಕ್ಷ ಮಹಾದೇವನಾಯಕ, ಉಪಾಧ್ಯಕ್ಷ ನಾರಾಯಣಿ, ಗ್ರಾಮಸ್ಥರಾದ ಮಾದೇಶ್, ಮನೋಹರ್, ಮಂಜು, ಪುಟ್ಟರಾಜು, ದೊಡ್ಡದೇವನಾಯಕ, ಮಹೇಶ್, ಗೋವಿಂದರಾಜು, ಮಾರನಾಯಕ ಮೊದಲಾದವರು ಇದ್ದರು.