- ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಭಾನುವಳ್ಳಿ ಪರಮೇಶ್ವರಪ್ಪ ಮಾಹಿತಿ

- - -

ಹರಿಹರ: ದಾವಣಗೆರೆ ತಾಲೂಕಿನ ಆನಗೋಡಿನಲ್ಲಿ ಜು.21ರಂದು ನಡೆಯುವ ರೈತ ಹುತಾತ್ಮ ದಿನಾಚರಣೆಯನ್ನು ಈ ಬಾರಿ ರೈತ ಭೂಮಿ ಸಂರಕ್ಷಣಾ ದಿನವಾಗಿ ಆಚರಿಸಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಭಾನುವಳ್ಳಿ ಪರಮೇಶ್ವರಪ್ಪ ಹೇಳಿದರು.

ನಗರದ ಎಪಿಎಂಸಿ ಆವರಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ರೈತ ಸಂಘದ ಪದಾಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈತರ ಸಂಪೂರ್ಣ ಸಾಲ ಮನ್ನಾ, ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿಯಿಂದ ಪರಿಸರವಾದಿ ಸೋನಮ್ ವಾಂಗ್ಚುಕ್ ಅವರ ನಾಯಕತ್ವದಲ್ಲಿ ಕೈಗೊಂಡಿರುವ ಹೋರಾಟಕ್ಕೆ ಬೆಂಬಲ, ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿ, ದಾವಣಗೆರೆ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸುವುದು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಎಕರೆಗೆ ₹40 ಸಾವಿರ ಬರ ಪರಿಹಾರ ವಿತರಣೆ, ಜಾನುವಾರು ಮತ್ತು ಪಕ್ಷಿಗಳಿಗೆ ಸಮಗ್ರ ನೀರಿನ ಪೂರೈಕೆ, 1961ರ ಭೂ ಸುಧಾರಣೆ ಕಾಯ್ದೆಯನ್ನು ಮೂಲ ಸ್ವರೂಪದಲ್ಲಿ ಜಾರಿ, ಮದ್ಯಪಾನ ನಿಷೇಧ, ಪಂಪ್ ಸೆಟ್ ಗಳಿಗೆ 24 ಗಂಟೆ ವಿದ್ಯುತ್, ರೈತರ ಮಕ್ಕಳಿಗೆ ಶಿಕ್ಷಣ ಶುಲ್ಕದಲ್ಲಿ ಶೇ.50 ರಿಯಾಯಿತಿ ಘೋಷಿಸಲು ಇದೇ ಸಂದರ್ಭದಲ್ಲಿ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದರು.

ಅಂದು ಬೆಳಗ್ಗೆ 11 ಗಂಟೆಗೆ ಆನಗೋಡಿನ ಹುತಾತ್ಮ ರೈತರ ಸಮಾಧಿ ಸ್ಥಳದಲ್ಲಿ ಆಯೋಜಿಸಿರುವ ಹುತಾತ್ಮರಿಗೆ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗೆ ನಮ್ಮ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಲಾಗುವುದು, ಜಿಲ್ಲೆಯ ಎಲ್ಲಾ ತಾಲೂಕುಗಳ ರೈತರು ಭಾಗವಹಿಸಲು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂದೀಶ್ ನಂದಿತಾವರೆ ಕೋರಿದರು.


ಸಭೆಯಲ್ಲಿ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಹಲಸಬಾಳು ಬಸವರಾಜಪ್ಪ ಪದಾಧಿಕಾರಿಗಳಾದ ಕೆಂಚನಹಳ್ಳಿ ಶೇಖರಪ್ಪ, ಪರಮೇಶ್ವರಪ್ಪ, ಹನಗವಾಡಿ ರುದ್ರಮುನಿ, ನಂದಿತಾವರೆ ಶಂಬುಲಿಂಗಪ್ಪ ರಾಘವೇಂದ್ರ, ನಾಗಪ್ಪ ಕೆ.ಜಿ., ಜಿಗಳಿ ಸಿದ್ದನಗೌಡ, ಕೆ.ಮಾಲತೇಶ್, ಕೆ.ಎನ್.ಹಳ್ಳಿ ತಿಪ್ಪೇಸ್ವಾಮಿ ಹಾಗೂ ಇತರರಿದ್ದರು.

- - -

-19 HRR.03:

ಹರಿಹರದ ಎಪಿಎಂಸಿ ಆವರಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳ ಸಭೆ ನಡೆಸಲಾಯಿತು.