ಚಾಮರಾಜನಗರದಲ್ಲಿ ಬರದ ಛಾಯೆ ಆವರಿಸಿದ್ದು, ಮಳೆಗಾಗಿ ರೈತರು ಮಲೆ ಮಹದೇಶ್ವರನ ಮೊರೆ ಹೋಗಿದ್ದಾರೆ. ನೂರಾರು ಮಂದಿ ಮೈಸೂರು, ಚಾಮರಾಜನಗರ ಭಾಗದ ರೈತರು ಮಾದಪ್ಪನ ಬೆಟ್ಟಕ್ಕೆ ಯಾತ್ರೆ ಹೊರಟು ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.

ಮಳೆಗಾಗಿ ಮೈಸೂರು, ಚಾಮರಾಜನಗರ ಭಾಗದ ರೈತರಿಂದ ಮಲೆ ಮಹದೇಶ್ವರನಿಗೆ ವಿಶೇಷ ಪ್ರಾರ್ಥನೆ । ಎಸ್‌ಎಂ ಕೃಷ್ಣ ಅವಧಿಯಲ್ಲಿ ಫಲಕೊಟ್ಟಿದ್ದ ಪ್ರಾರ್ಥನೆ

ಕನ್ನಡಪ್ರಭ ವಾರ್ತೆ ಹನೂರುಚಾಮರಾಜನಗರದಲ್ಲಿ ಬರದ ಛಾಯೆ ಆವರಿಸಿದ್ದು, ಮಳೆಗಾಗಿ ರೈತರು ಮಲೆ ಮಹದೇಶ್ವರನ ಮೊರೆ ಹೋಗಿದ್ದಾರೆ. ನೂರಾರು ಮಂದಿ ಮೈಸೂರು, ಚಾಮರಾಜನಗರ ಭಾಗದ ರೈತರು ಮಾದಪ್ಪನ ಬೆಟ್ಟಕ್ಕೆ ಯಾತ್ರೆ ಹೊರಟು ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.ಕೆರೆಗಳು ಬತ್ತಿಹೋಗುತ್ತಿದ್ದು, ಜಲಾಶಯಗಳಲ್ಲಿ ಡೆಡ್ ಸ್ಟೋರೆಜ್ ಹಂತದಲ್ಲಿ ನೀರಿದೆ. ನೀರು ಹರಿಸಲಾಗದ ಸ್ಥಿತಿಯಲ್ಲಿ ಅಧಿಕಾರಿಗಳಿದ್ದಾರೆ. ಸರ್ಕಾರ, ಅಧಿಕಾರಿಗಳು, ಜನಪ್ರತಿನಿಧಿಗಳು ಕೈ ಬಿಟ್ಟರೂ ಆರಾಧ್ಯ ದೈವ ಮಲೆ ಮಹದೇಶ್ವರ ಕೈ ಬಿಡುವುದಿಲ್ಲ ಎಂಬ ಭರವಸೆಯಲ್ಲಿ ನೂರಾರು ಮಂದಿ ರೈತರು ಈಗ ಮಾದಪ್ಪನ ಮೊರೆ ಹೋಗಿದ್ದಾರೆ.ಈ ಹಿಂದೆ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಭೀಕರ ಬರಗಾಲ ಬಂದೆರಗಿತ್ತು. ಆ ವೇಳೆ ರೈತರು ಮಳೆಗಾಗಿ ಮಾದಪ್ಪನಿಗೆ ಹರಕೆ ಕಟ್ಟಿಕೊಂಡು ಪ್ರಾರ್ಥನೆ ಸಲ್ಲಿಸಿದಾಗ ಮಳೆ ಬಂದಿತ್ತು. ಸರ್ಕಾರಗಳು ಕೈ ಬಿಟ್ಟರೂ ಮಾಯಕಾರ ಮಹದೇಶ್ವರ ರೈತರ ಕೈ ಬಿಡುವುದಿಲ್ಲ ಎಂದು ಘೋಷಣೆಗಳನ್ನು ಕೂಗುತ್ತಾ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು, ರೈತರು ಖಾಸಗಿ ಬಸ್‌ಗಳಲ್ಲಿ ಮಹದೇಶ್ವರನಿಗೆ ಮೊರೆ ಇಟ್ಟಿದ್ದಾರೆ. ದಾರಿಯಲ್ಲಿ ಉರುಳುಸೇವೆ ಮಾಡುತ್ತಾ, ಮಹದೇಶ್ವರನ ಘೋಷಣೆ ಕೂಗುತ್ತಾ ವರುಣ ಬಂದೇ ಬರುತ್ತಾನೆ ಎಂಬ ಭರವಸೆಯಿಟ್ಟು ಮಾದಪ್ಪನಿಗೆ ನಮಿಸಿದ್ದಾರೆ.ಈ ಕುರಿತು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಸಿಎಂ ಡಿ.ಕೆ. ಶಿವಕುಮಾರ್‌ ಬರ ಬರಲಿದೆ ಬಿತ್ತನೆ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಎಸ್ಐಆರ್‌ ಆರೋಪ- ಪ್ರತ್ಯಾರೋಪದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತೊಡಗಿವೆ. ಬೆಳೆ ಬೆಳೆಯಬೇಡಿ ಎನ್ನುವ ಸಿಎಂ‌ ಮೊದಲು ಸಚಿವರನ್ನು ಪ್ರತಿ ಜಿಲ್ಲೆಗೆ ಕಳುಹಿಸಿ ಬರ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದರು.

ರಾಜಕೀಯ ಕಾರಣಕ್ಕಾಗಿ ಸರ್ಕಾರಗಳು, ಜನಪ್ರತಿನಿಧಿಗಳು ರೈತರ ಕೈ ಬಿಟ್ಟರೂ ಮಲೆಮಹದೇಶ್ವರ ಕೈ ಬಿಡುವುದಿಲ್ಲ ಎಂಬ‌ ನಂಬಿಕೆ ಮೇಲೆ ಪ್ರಾರ್ಥನೆ ಸಲ್ಲಿಸಿದ್ದೇವೆ. ನಮಗೆ ಮಹದೇಶ್ವರ ಅನುಕೂಲ ಮಾಡುತ್ತಾನೆ ಎಂದು ತಿಳಿಸಿದರು.ಚಾಮರಾಜನಗರ‌ ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆ ಉಂಟಾಗಿ ರೈತರಿಗೆ ಬಿತ್ತಿದ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಬೇಕಾದ ಸವಾಲು ಎದುರಾಗಿದೆ. ಮಳೆ ಕೊರತೆ ಮತ್ತೊಂದು ತಿಂಗಳು ಮಳೆ ಹೆಚ್ಚಳ ವ್ಯತ್ಯಾಸದಿಂದಾಗಿ ಬಿದ್ದ ಮಳೆ ಕೃಷಿಗೆ ಪೂರಕವಾಗಿಲ್ಲ. ಮಳೆಯನ್ನು ನಂಬಿಕೊಂಡು ಬಿತ್ತನೆ ಮಾಡಿದ ರೈತರು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ. ಈಗ ವರುಣನಿಗಾಗಿ ರೈತರು ಮಾದಪ್ಪನಿಗೆ ಪ್ರಾರ್ಥನೆ ಸಲ್ಲಿಸಿದ್ದು, ರೈತ ಭಕ್ತರ ಪ್ರಾರ್ಥನೆ ಮಹದೇಶ್ವರ ಈಡೇರಿಸಲಿ ಎಂಬುದೇ ಎಲ್ಲರ ಹಾರೈಕೆ.