ಸಾರಾಂಶ
ಕಳೆದ ಒಂದು ವಾರದಿಂದ ಖರೀದಿ ಕೇಂದ್ರದಲ್ಲಿ ರಾಗಿ ಖರೀದಿ ಮಾಡದೆ ಕುಂಟು ನೆಪ ಹೇಳುತ್ತಾ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ರಾಗಿ ಹೊತ್ತ ನೂರಾರು ಟ್ರ್ಯಾಕ್ಟರ್ಗಳು ನಿಂತಲ್ಲೇ ನಿಂತಿವೆ. ರೈತರು ದಿನಗಟ್ಟಲೆ ಕಾಯುತ್ತಾ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಕಳೆದ ಒಂದು ವಾರದಿಂದ ರಾಗಿ ಖರೀದಿ ಮಾಡದೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ರೈತರು ಅಧಿಕಾರಿಗಳ ವಿರುದ್ಧ ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿ ತೆರೆದಿರುವ ರಾಗಿ ಖರೀದಿ ಕೇಂದ್ರದ ಎದುರು ರೈತರು ಪ್ರತಿಭಟಿಸಿ ತಹಸೀಲ್ದಾರ್ ಹಾಗೂ ಅಧಿಕಾರಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಕಳೆದ ಒಂದು ವಾರದಿಂದ ಖರೀದಿ ಕೇಂದ್ರದಲ್ಲಿ ರಾಗಿ ಖರೀದಿ ಮಾಡದೆ ಕುಂಟು ನೆಪ ಹೇಳುತ್ತಾ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ರಾಗಿ ಹೊತ್ತ ನೂರಾರು ಟ್ರ್ಯಾಕ್ಟರ್ಗಳು ನಿಂತಲ್ಲೇ ನಿಂತಿವೆ. ರೈತರು ದಿನಗಟ್ಟಲೆ ಕಾಯುತ್ತಾ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿದಿನ ಒಂದು ಟ್ರ್ಯಾಕ್ಟರ್ ಗೆ ಮೂರರಿಂದ ನಾಲ್ಕು ಸಾವಿರ ರು.ಗಳನ್ನು ಬಾಡಿಗೆ ಕಟ್ಟಬೇಕು. ಖರೀದಿ ಮಾಡಿದ ರಾಗಿಯನ್ನು ತುಂಬಲು ಎಪಿಎಂಸಿ ಆವರಣದಲ್ಲಿ ಹತ್ತಾರು ಗೋದಾಮುಗಳಿದ್ದರೂ ಕೂಡ ಅಧಿಕಾರಿಗಳು ರೈತರಿಗೆ ತೊಂದರೆ ಕೊಡುವ ಉದ್ದೇಶದಿಂದ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ರೈತ ಸಂಘದ (ಮೂಲ ಸಂಘಟನೆ) ಅಧ್ಯಕ್ಷ ಸುರೇಶ್ ಮಾತನಾಡಿ, ಅಧಿಕಾರಿಗಳಿಗೆ ರೈತರ ಕಷ್ಟಗಳು ಅರ್ಥವಾಗುವುದಿಲ್ಲ. ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರವು ಸಾಕಷ್ಟು ಅವ್ಯವಸ್ಥೆಗಳಿಂದ ಕೂಡಿದೆ ಎಂದು ದೂರಿದರು.ಕಳೆದ ಒಂದು ವಾರದಿಂದ ನೂರಾರು ಟ್ರ್ಯಾಕರ್ಗಳು ಸ್ಥಳದಲ್ಲಿ ನಿಂತಿವೆ. ಕಿಂಚಿತ್ತು ರೈತರ ಬಗ್ಗೆ ಕನಿಕರ ತೋರದೆ ದುರಹಂಕಾರದ ವರ್ತಿಸುತ್ತಿದ್ದಾರೆ. ಗೋದಾಮುಗಳಲ್ಲಿ ಇರಬೇಕಾದ ರಾಗಿಯನ್ನು ಬಯಲು ಶೆಡ್ ಗಳಲ್ಲಿ ಇಟ್ಟಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ವಹಿಸಬೇಕು ಹಾಗೂ ಕೃಷಿ ಸಚಿವರು ರೈತರ ದನಿಯಾಗಿ ನಿಲ್ಲಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಲವು ರೈತರು ಭಾಗವಹಿಸಿದ್ದರು.