ಸಾರಾಂಶ
ನೂರಾರು ಎಕರೆ ಭೂಮಿ ಕಬಳಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಕ್ರಿಮಿನಲ್ ದೂರು ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಗುರುವಾರ ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸಾಸಲು ಹೋಬಳಿಯಲ್ಲಿನ ಭೂ ಅಕ್ರಮ ವಿರುದ್ಧ ಕಾನೂನು ಕ್ರಮಕ್ಕೆ ರೈತರ ಆಗ್ರಹ
ದೊಡ್ಡಬಳ್ಳಾಪುರ: ತಾಲೂಕಿನ ಸಾಸಲು ಹೋಬಳಿಯ ಬೈಯ್ಯಪ್ಪನ ಗ್ರಾಮದಲ್ಲಿ ನಕಲಿ ದಾಖಲೆ ಸೃಷ್ಠಿಸಿ ನೂರಾರು ಎಕರೆ ಭೂಮಿ ಕಬಳಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಕ್ರಿಮಿನಲ್ ದೂರು ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಗುರುವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ವಿಜಯಕುಮಾರ್, ಉಪಾಧ್ಯಕ್ಷ ಮುನಿರಾಜಪ್ಪ, ಗೌರವ ಅಧ್ಯಕ್ಷ ಶಿವಣ್ಣ, ಜಿಲ್ಲಾ ಮುಖಂಡ ಸಿ.ಎಚ್.ರಾಮಕೃಷ್ಣ ಮಾತನಾಡಿ, ಬೈಯ್ಯಪ್ಪನಹಳ್ಳಿ ಗ್ರಾಮದಲ್ಲಿ ರೈತರು ಐದಾರು ದಶಕಗಳಿಂದಲು ಉಳುಮೆ ಮಾಡಿಕೊಂಡು ಬರುತ್ತಿದ್ದ ಕೃಷಿ ಜಮೀನಿಗೆ ಭೂ ಮಾಫಿಯಾದವರು ನಕಲಿ ದಾಖಲೆಗಳನ್ನು ಸೃಷ್ಠಿಸಿ ಕಬಳಿಸಲು ಮುಂದಾಗಿದ್ದಾರೆ. ನಕಲಿ ದಾನಪತ್ರ ಮಾಡಿಕೊಟ್ಟಿರುವ ವ್ಯಕ್ತಿಯ ವಿಳಾಸ, ದಾನಪತ್ರ ಮಾಡಿಕೊಟ್ಟಿರುವ ವ್ಯಕ್ತಿಯ ಸಂಬಂಧಿಗಳು ಎಲ್ಲರೂ ನಕಲಿಯೇ ಆಗಿದ್ದಾರೆ. ದಾನ ಪತ್ರ ನೋಂದಣಿ ಮಾಡಿಕೊಟ್ಟಿರುವ ವ್ಯಕ್ತಿಯು ದಾನ ಪತ್ರ ಮಾಡಿಕೊಟ್ಟ ಮೂರೇ ದಿನದಲ್ಲಿ ಮೃತಪಟ್ಟಿದ್ದಾರೆ ಎನ್ನುವ ಸುಳ್ಳನ್ನು ಸಹ ಸೃಷ್ಠಿಸಲಾಗಿದೆ ಎಂದು ದೂರಿದರು.
ರೈತರ ಮನವಿ ಸ್ವೀಕರಿಸಿದ ತಹಶೀಲ್ದಾರ್ ವಿಭಾ ವಿದ್ಯಾರಾಥೋಡ್ ಶನಿವಾರ ಈ ವಿವಾದ ಕುರಿತಂತೆ ರೈತರ ಸಭೆ ನಡೆಸಲಾಗುವುದು. ಮನವಿ ಪತ್ರದೊಂದಿಗೆ ನೀಡಲಾಗಿರುವ ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಡೆಸಿ ನಕಲಿ ಮಾಡಿರುವುದು ಸಾಭೀತಾದರೆ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಲಾಗುವುದು ಎಂದರು.ಪತ್ರಿಭಟನೆಯಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ, ಬೆಳವಂಗಲ ಪ್ರಭಾ ಸೇರಿದಂತೆ ವಂಚನೆಗೆ ಒಳಗಾಗಿರುವ ರೈತರು ಇದ್ದರು.