ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಯ ಕೊನೆಯ ಹಂತದವರೆಗೆ ನೀರು ಹರಿಸಬೇಕು. ಇಂಡಿ ಸೈಟ್-೧, ಸೈಟ್-೨ ಕೆರೆಗಳನ್ನು ತುಂಬಿಸಬೇಕು. ಇಂಡಿ ತಾಲೂಕು ಬರಗಾಲ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ರೈತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಯ ಕೊನೆಯ ಹಂತದವರೆಗೆ ನೀರು ಹರಿಸಬೇಕು. ಇಂಡಿ ಸೈಟ್-೧, ಸೈಟ್-೨ ಕೆರೆಗಳನ್ನು ತುಂಬಿಸಬೇಕು. ಇಂಡಿ ತಾಲೂಕು ಬರಗಾಲ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ರೈತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಮೆರವಣಿಗೆ ನಗರದ ಅಗಸಿ ಹನುಮಾನ ದೇವಸ್ಥಾನದಿಂದ ಹೊರಟು, ಮಹಾವೀರ, ಅಂಬೇಡ್ಕರ್, ಬಸವೇಶ್ವರ ವೃತ್ತದ ಮೂಲಕ ತೆರಳಿ,ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು.ನಂತರ ಪ್ರತಿಭಟನೆ ಮಿನಿ ವಿಧಾನಸೌಧ ತಲುಪಿತು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಯುವ ಮುಖಂಡ ಪ್ರಶಾಂತ ಲಾಳಸಂಗಿ, ಅಶೋಕ ಅಕಲಾದಿ,ಅನೀಲಗೌಡ ಬಿರಾದಾರ, ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ಬಾಳು ಮುಳಜಿ, ದೇವೆಂದ್ರ ಕುಂಬಾರ, ಮಾಜಿ ಶಾಸಕ ರವಿಕಾಂತ ಪಾಟೀಲ, ಬಿ.ಡಿ.ಪಾಟೀಲ ಪ್ರತಿ ವರ್ಷ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿಸಲಾಗುತ್ತಿತ್ತು. ಈ ವರ್ಷ ಒಂದು ಸಲವೂ ಈ ಕಾಲುವೆಗೆ ನೀರು ಹರಿಸಿಲ್ಲ. ಇದರಿಂದ ರೈತರಿಗೆ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದೆ. ಎರಡು ದಿನದಲ್ಲಿ ಕಾಲುವೆಗೆ ನೀರು ಹರಿಸಬೇಕು. ಎಲ್ಲಾ ಕಾಲುವೆಗಳಿಗೆ ನೀರು ಹರಿಸಿ ಕೇವಲ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ತೆನ್ನಿಹಳ್ಳಿಯಿಂದ ಕಾಲುವೆಯ ಕೊನೆಯ ಹಂತದವರೆಗೆ ನೀರು ಹರಿಸದೇ ಇರುವುದು ಕೆಲ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ.

ಕೂಡಲೇ ಕಾಲುವೆಗೆ ನೀರು ಹರಿಸಬೇಕು. ಇಂಡಿ ತಾಲೂಕು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ರೈತರ ತಾಳ್ಮೆ ಪರಿಕ್ಷೀಸಬೇಡಿ . ಒಂದು ವೇಳೆ ರೈತರ ತಾಳ್ಮೆ ಪರೀಕ್ಷೀಸಿಲು ಮುಂದಾದರೆ ಸುಮ್ಮನೆ ಇರುವುದಿಲ್ಲ. ಒಂದು ವಾರದವಳಿಗೆ ಟೇಲ್ ಎಂಡ್ ವರಿಗೆ ನೀರು ಹರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಎಲ್ಲ ರೈತರೊಂದಿಗೆ ಸೇರಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಚ್ಚರಿಸಿದರು.

​ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಮಳೆ ಅಭಾವ ಉಂಟಾದಾಗ ಬೆಳೆಗಳು ಒಣಗುತ್ತಿದ್ದು, ತಕ್ಷಣ ಕಾಲುವೆಗೆ ನೀರು ಬಿಟ್ಟರೆ ಮಾತ್ರ ಕೈಗೆ ಬಂದ ಬೆಳೆ ಉಳಿಸಿಕೊಳ್ಳಲು ಸಾಧ್ಯ. ಕಾಲುವೆಗೆ ನೀರು ಹರಿಸುವುದರಿಂದ ಕೇವಲ ಕೃಷಿಗಷ್ಟೇ ಅಲ್ಲದೆ, ಗ್ರಾಮೀಣ ಭಾಗದ ಕುಡಿಯುವ ನೀರಿನ ಅಭಾವ ನೀಗುತ್ತದೆ ಮತ್ತು ಸುತ್ತಮುತ್ತಲಿನ ಬಾವಿ, ಕೊಳವೆಬಾವಿಗಳ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ.ಆದ್ದರಿಂದ ತಕ್ಷಣ ನೀರು ಹರಿಸಲೆಬೇಕು ಎಂದು ಆಗ್ರಹಿಸಿದರು.

ನಂತರ ಶಿರಸ್ತೇದಾರ ಎಸ್.ಆರ್.ಮುಜಗೊಂಡ ಅವರಿಗೆ ಮನವಿ ಸಲ್ಲಿಸಿದರು. ಸಂತೋಷಗೌಡ ಪಾಟೀಲ, ಮಹೇಶ ಹೂಗಾರ,ಸಾಗರ ಬಿರಾದಾರ,

ಮಂಜು ದೇವರ,ಪ್ರಶಾಂತ ಲಾಳಸಂಗಿ, ಶಂಕರ ಲಾಳಸಂಗಿ, ಸೈಯದ್ ಹುಸೇನಿ, ಸೈಯದ್, ಸದ್ದಾಮ್ ಸೈಯದ್, ಮಂಜು ನಾಟಿಕಾರ, ಸುಕ್ರು ಬೊರಾಮಣಿ,ರಾಜು ಚವಾಣ,ಮಲ್ಲು ಬಾಲರಿ ಇತರರು ಪ್ರತಿಭಟನೆಯಲ್ಲಿ ಇದ್ದರು.

ನೀರು ಹರಿಸುವ ಭರವೆ ಧರಣಿ ಸ್ಥಗಿತ: ಸುದ್ದಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಕೃಷ್ಣಾ ಮೇಲ್ದಂಡೆ ಯೋಜನೆಯ ಸಾಹಯಕ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಅತನೂರ,ಸಿಪಿಐ ಪ್ರದೀಪ ಭೀಸೆ ರೈತರನ್ನು ಸಮಾಧಾನ ಪಡಿಸಿದರು.

ಒಂದು ವಾರದೊಳಗೆ ನೀರು ಹರಿಸಲಾಗುತ್ತದೆ ಎಂದು ಅಧಿಕಾರಿಗಳು ಭರವಸೆ ನೀಡಿದ ಮೇಲೆ ರೈತರು ಹೋರಾಟವನ್ನು ತಾತ್ಕಾಲಿಕವಾಗಿ ವಾಪಸ್ ಪಡೆದರು.