ಜಾತ್ಯತೀತ ಮತ್ತು ಪಕ್ಷಾತೀತವಾಗಿ ಸಹಕಾರಿ ಸಂಘದಲ್ಲಿ ಎಲ್ಲರೂ ಸಂಘಟಿತರಾಗಬೇಕು. ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡುವ ಸಾಮರ್ಥ್ಯ ಸಂಘಕ್ಕೆ ಬಂದರೆ ಅದಕ್ಕಿಂತ ಶಕ್ತಿ ಇನ್ನೊಂದಿಲ್ಲ.
ಶಿರಹಟ್ಟಿ: ಬೆಳೆಗೆ ರೈತರೇ ಬೆಲೆ ನಿಗದಿ ಪಡೆಸುವಂಥ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ಕಾನೂನು ಹಾಗೂ ಸಂಸದಿಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾರಾಟ ಮಳಿಗೆ ಉದ್ಘಾಟಿಸಿ ನಂತರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಸಹಕಾರಿ ಸಂಸ್ಥೆಯಲ್ಲಿ ಎಲ್ಲರೂ ಕೂಡಿಕೊಂಡು ಕೆಲಸ ಮಾಬೇಕು. ಇಂದು ರೈತ ತಾನು ಮಾಡಿದ ಸಾಲಕ್ಕೆ ಅಂಜುತ್ತಿಲ್ಲ. ಆದರೆ ಅದಕ್ಕೆ ಕಟ್ಟವು ಬಡ್ಡಿಗಾಗಿ ಭಯಭೀತನಾಗಿದ್ದಾನೆ. ಬೆಳೆಗೆ ಉತ್ತಮ ಬೆಲೆ ಬಂದರೆ ರೈತರು ಯಾವುದಕ್ಕೂ ಹೆದರುವುದಿಲ್ಲ ಎಂದರು.ಜಾತ್ಯತೀತ ಮತ್ತು ಪಕ್ಷಾತೀತವಾಗಿ ಸಹಕಾರಿ ಸಂಘದಲ್ಲಿ ಎಲ್ಲರೂ ಸಂಘಟಿತರಾಗಬೇಕು. ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡುವ ಸಾಮರ್ಥ್ಯ ಸಂಘಕ್ಕೆ ಬಂದರೆ ಅದಕ್ಕಿಂತ ಶಕ್ತಿ ಇನ್ನೊಂದಿಲ್ಲ. ರೈತರಿಗೆ ಅತಿದೊಡ್ಡ ಹೊರೆ ಸಾಲದ ಮೇಲಿನ ಬಡ್ಡಿಯಾಗಿದೆ. ವಿಶೇಷವಾಗಿ ಸಿದ್ದರಾಮಯ್ಯನವರು ಶೂನ್ಯ ಬಡ್ಡಿಯ ಸಾಲದ ಬಗ್ಗೆ ಒತ್ತು ನೀಡುತ್ತಿದ್ದಾರೆ ಎಂದರು.
ಸಹಕಾರಿ ಸಂಘಗಳೇ ಸರ್ಕಾರದ ಅಪೇಕ್ಷೆಯ ಮಟ್ಟಕ್ಕೆ ಸಾಲವನ್ನು ಪಡೆಯುತ್ತಿಲ್ಲ ಎನ್ನುವುದು ವಿಷಾದಕರ. ನಬಾರ್ಡ್ದಿಂದ ಹಣ ಬರುತ್ತಿದೆ. ಸಂಘದ ಪದಾಧಿಕಾರಿಗಳೆಲ್ಲರೂ ಸದಸ್ಯರ ಮನೆಗಳಿಗೆ ಭೇಟಿ ನೀಡುವುದರೊಂದಿಗೆ ಶೂನ್ಯ ಸಾಲವನ್ನು ಪಡೆಯಲು ಅವರಿಂದ ಅರ್ಜಿ ಸ್ವಿಕರಿಸಬೇಕು. ಅದಕ್ಕಿರುವ ತಾಂತ್ರಿಕ ಸಮಸ್ಯಗಳನ್ನು ಬಗೆಹರಿಸಿಕೊಳ್ಳಿ. ಅಂದಾಗ ಮಾತ್ರ ಸಂಘ ಸಾರ್ಥಕತೆ ಹೊಂದುತ್ತದೆ ಎಂದರು.ಸಭಾಭವನ ಉದ್ಘಾಟಿಸಿದ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಸಹಕಾರಿ ಸಂಘ ಸಶಕ್ತಗೊಂಡಾಗ ಕೃಷಿ ಅಭಿವೃದ್ಧಿ ಆಗುತ್ತದೆ. ಒಂದು ಕೃಷಿ ಪತ್ತಿನ ಸಹಕಾರಿ ಸಂಘ ಆ ಗ್ರಾಮದ ಆರ್ಥಿಕ ಚಟುವಟಿಕೆಗಳಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮ ಪಂಚಾಯಿತಿ ಹಾಗೂ ಸಹಕಾರ ಸಂಘ ಸಶಕ್ತಗೊಂಡಾಗ ಕೃಷಿ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಆಗುತ್ತದೆ. ರೈತರ ಅಭಿವೃದ್ಧಿ ಗ್ರಾಮಾಭಿವೃದ್ಧಿ ಒಂದಕ್ಕೊಂದು ಬೇರೆ ಮಾಡಲು ಸಾಧ್ಯವಿಲ್ಲ. ಇದನ್ನು ಅರ್ಥ ಮಾಡಿಕೊಂಡು ಯೋಜನೆ ರೂಪಿಸಬೇಕಿದೆ ಎಂದರು.ಸಹಕಾರದಲ್ಲಿ ಬಹಳ ದೊಡ್ಡ ಶಕ್ತಿ ಇದೆ. ಮನುಷ್ಯ ಸಂಘ ಜೀವಿ ಪರಸ್ಪರ ಸಹಕಾರ ಬಹಳ ಅಗತ್ಯವಿದೆ. ಅದು ಒಂದು ಸಂಸ್ಥೆಯಾಗಿ ಬೆಳೆದಾಗ ಹೆಚ್ಚಿನ ಲಾಭ ಮತ್ತು ಹೆಚ್ಚಿನ ಬಡ್ಡಿ ಕೊಡಲು ಸಾಧ್ಯವಿದೆ. ಯಶಸ್ವಿ ಸಹಕಾರ ಸಂಘಗಳು ಕೂಡ ಇವೆ. ನಮ್ಮ ರಾಜ್ಯದಲ್ಲಿ ಹಾಲು ಉತ್ಪಾದಕರ ಸಂಘ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಇನ್ನೊಂದು ಕ್ಯಾಮ್ಕೊ ಸಹಕಾರಿ ಸಂಘ ಉತ್ತಮ ಕೆಲಸ ಮಾಡುತ್ತಿದೆ. ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಸಹಕಾರ ಬಹಳ ಪ್ರಬಲವಾಗಿ ಬೆಳೆದಿದೆ. ಅಲ್ಲಿ ಸಹಕಾರ ಸರ್ಕಾರವನ್ನು ಆಳುತ್ತದೆ. ಇಲ್ಲಿ ಸರ್ಕಾರ ಸಹಕಾರವನ್ನು ಆಳಲು ಬಿಡುತ್ತಿಲ್ಲ. ಸಣ್ಣ ವ್ಯಾಪಾರದಿಂದ ಹಿಡಿದು ರಫ್ತು ವ್ಯವಹಾರ ಮಾಡಿ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಗುಜರಾತ್ನ ಅಮೂಲ್ ಎನ್ನುವ ಸಂಘ ಕುರಿಯನ್ ಅವರ ದೂರದೃಷಿಯಿಂದ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ನಾವೆಲ್ಲರೂ ಅದರಿಂದ ಪಾಠ ಕಲಿತು ಒಳ್ಳೆಯ ನಾಯಕತ್ವ ಬೆಳೆಸಬೇಕು ಎಂದರು.ಬೆಳ್ಳಟ್ಟಿ ರಾಮಲಿಂಗೇಶ್ವರ ದಾಸೋಹ ಮಠದ ಬಸವರಾಜ ಶ್ರೀಗಳು, ಬನ್ನಿಕೊಪ್ಪದ ಸುಜ್ಞಾನದೇವ ಶಿವಾಚಾರ್ಯ ಸ್ವಾಮಿಗಳು, ಮಾಜಿ ಸಚಿವ ಎಸ್.ಎಸ್. ಪಾಟೀಲ, ಶಾಸಕ ಡಾ. ಚಂದ್ರು ಲಮಾಣಿ, ಸಹಕಾರಿ ಸಂಘದ ಅಧ್ಯಕ್ಷ ಶಿವಪ್ರಕಾಶ ಮಹಾಜನಶೆಟ್ಟರ, ಮಾಜಿ ಶಾಸಕ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಸುಜಾತಾ ದೊಡ್ಡಮನಿ, ಟಿ. ಈಶ್ವರ, ವಿ.ವಿ. ಕಪ್ಪತ್ತನವರ, ಹುಮಾಯೂನ್ ಮಾಗಡಿ, ಮಹೇಂದ್ರ ಮುಂಡವಾಡ, ಶಿವನಗೌಡ ಪಾಟೀಲ, ತಿಮ್ಮರಡ್ಡಿ ಮರಡ್ಡಿ, ತಿಮ್ಮರಡ್ಡಿ ಅಳವಂಡಿ, ಸಿದ್ರಾಮಪ್ಪ ಮೊರಬದ, ಡಿ.ಕೆ. ಹೊನ್ನಪ್ಪನವರ, ಭೀಮಸಿಂಗ್ ರಾಠೋಡ್, ರಮೇಶ ನಿರ್ವಾಣಶೆಟ್ಟರ, ಸಣ್ಣವೀರಪ್ಪ ಹಳ್ಳೆಪ್ಪನವರ, ಕೊಟ್ರೇಶ ಸಜ್ಜನ, ತಿಪ್ಪಣ್ಣ ಕೊಂಚಿಗೇರಿ, ವಿರುಪಾಕ್ಷ ನಂದೆಣ್ಣವರ, ಡಾ. ಸುನೀಲ ಬುರಬುರೆ, ಚಂದ್ರಕಾಂತ ನೂರಶೆಟ್ಟರ, ಎಂ.ಸಿ. ಹಿರೇಮಠ ಇದ್ದರು.