ಮಣ್ಣಿನ ಗುಣಧರ್ಮ ಆಧರಿಸಿ ರೈತರು ಬೆಳೆ ಆಯ್ಕೆ ಮಾಡಲಿ: ಮಾರುತಿ ಅಂಗರಗಟ್ಟಿ

| Published : May 28 2025, 12:14 AM IST

ಮಣ್ಣಿನ ಗುಣಧರ್ಮ ಆಧರಿಸಿ ರೈತರು ಬೆಳೆ ಆಯ್ಕೆ ಮಾಡಲಿ: ಮಾರುತಿ ಅಂಗರಗಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಬೆಳೆಗಳಿಗೆ ಸಮಗ್ರ ಪೋಷಕಾಂಶಗಳನ್ನು ಒದಗಿಸಿದರೆ ಉತ್ತಮ ಬೆಳೆ ಬರುತ್ತದೆ. ರೋಗಗಳಿಂದಲೂ ಮುಕ್ತಿ ಹೊಂದಲು ಸಾಧ್ಯವಿದೆ.

ಹಾನಗಲ್ಲ: ರೈತರಿಗೆ ಮುಂಗಾರು ಹಂಗಾಮಿಗಾಗಿ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣೆಗೆ ಎಪಿಎಂಸಿ ಪ್ರಾಂಗಣದಲ್ಲಿ ಸಹಾಯಕ ಕೃಷಿ ನಿರ್ದೇಶಕ ಮಾರುತಿ ಅಂಗರಗಟ್ಟಿ ಸೋಮವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿ, ಈಗಾಗಲೇ ತಾಲೂಕಿನಾದ್ಯಂತ ಉತ್ತಮ ಮಳೆ ಆರಂಭವಾಗಿದ್ದು, ಭೂಮಿಯನ್ನು ಹದಗೊಳಿಸಿಕೊಂಡು, ತೇವಾಂಶವನ್ನು ಅನುಸರಿಸಿ ರೈತರು ಬಿತ್ತನೆ ಕಾರ್ಯ ಕೈಗೊಳ್ಳಬೇಕು. ರಾಜ್ಯಾದ್ಯಂತ ಈ ಬಾರಿ ಡಿಎಪಿ ಗೊಬ್ಬರದ ಕೊರತೆ ಎದುರಾಗಿದ್ದು, ರೈತರು ಡಿಎಪಿಗೆ ಪರ್ಯಾಯವಾಗಿ ಸಂಯುಕ್ತ ಪೋಷಕಾಂಶ ಹೊಂದಿರುವ ಕಾಂಪ್ಲೆಕ್ಸ್ ಗೊಬ್ಬರಗಳನ್ನು ಬಳಸಿಕೊಳ್ಳಬೇಕು.

ಕೃಷಿ ಬೆಳೆಗಳಿಗೆ ಸಮಗ್ರ ಪೋಷಕಾಂಶಗಳನ್ನು ಒದಗಿಸಿದರೆ ಉತ್ತಮ ಬೆಳೆ ಬರುತ್ತದೆ. ರೋಗಗಳಿಂದಲೂ ಮುಕ್ತಿ ಹೊಂದಲು ಸಾಧ್ಯವಿದೆ. ರೈತರು ಖಾಸಗಿ ಮಾರುಕಟ್ಟೆಯಲ್ಲಿ ಪ್ರಮಾಣೀಕೃತವಲ್ಲದ ಬಿತ್ತನೆ ಬೀಜಗಳನ್ನು ಖರೀದಿಸಿ ಸಮಸ್ಯೆಗೆ ಬೀಳಬಾರದು. ಖರೀದಿಸಿದ ಬಿತ್ತನೆ ಬೀಜಗಳ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಮತ್ತು ಅವುಗಳ ರಸೀದಿ ಪಡೆಯಬೇಕು. ನೀರಾವರಿ ಮೂಲಗಳನ್ನು, ಮಣ್ಣಿನ ಗುಣಧರ್ಮಗಳನ್ನು ಆಧರಿಸಿ ಬೆಳೆಗಳನ್ನು ಆಯ್ಕೆ ಮಾಡಬೇಕು.

ಎಂಥದೇ ಸಂದರ್ಭದಲ್ಲಿ ಕಳೆನಾಶಕಗಳನ್ನು ಬಳಸುವಾಗಲೂ ತೀರಾ ಎಚ್ಚರಿಕೆ ವಹಿಸಬೇಕು. ಬಳಸುವ ಪ್ರಮಾಣದ ಬಗೆಗೂ ಗಮನಹರಿಸಬೇಕು. ಕೃಷಿ ಇಲಾಖೆ ಎಲ್ಲ ಸಂದರ್ಭದಲ್ಲೂ ರೈತರ ಸಹಾಯಕ್ಕೆ ಬರುತ್ತದೆ. ಕೃಷಿಗೆ ಸಂಬಂಧಿಸಿದ ಸಲಹೆ-ಮಾರ್ಗದರ್ಶನಗಳಿಗೆ ರೈತ ಸಂಪರ್ಕ ಕೇಂದ್ರಗಳಿಗೆ ಆಗಾಗ್ಗೆ ಭೇಟಿ ನೀಡಬೇಕು ಎಂದು ಅಂಗಾರಗಟ್ಟಿ ಮನವಿ ಮಾಡಿದರು.

ಹಾನಗಲ್ಲ, ಚಿಕ್ಕಾಂಶಿ ಹೊಸೂರ, ಅಕ್ಕಿಆಲೂರು, ಆಡೂರು, ತಿಳವಳ್ಳಿ, ಬೊಮ್ಮನಹಳ್ಳಿ, ಬೆಳಗಾಲಪೇಟೆ, ಮಾರನಬೀಡ ಸೇರಿದಂತೆ ಒಟ್ಟು ೮ ಕೇಂದ್ರಗಳಲ್ಲಿ ಸಹಾಯಧನದ ಬಿತ್ತನೆಬೀಜ ವಿತರಣೆ ಕೈಗೊಳ್ಳಲಾಗಿದೆ. ೨೫೫ ಕ್ವಿಂಟಲ್ ಸೋಯಾಅವರೆ, ೧೧೦೫ ಕ್ವಿಂ. ವಿವಿಧ ತಳಿಗಳ ಭತ್ತ, ೨೭೫ ಕ್ವಿಂ. ಗೋವಿನಜೋಳ, ೩೦ ಕ್ವಿಂ. ಶೇಂಗಾ ಬೀಜ ಸೇರಿದಂತೆ ಒಟ್ಟು ೧೬೬೬ ಕ್ವಿಂ. ಬಿತ್ತನೆ ಬೀಜಗಳ ದಾಸ್ತಾನಿದೆ. ಹಂತ- ಹಂತವಾಗಿ ಬಿತ್ತನೆ ಬೀಜಗಳನ್ನು ದಾಸ್ತಾನುಕರಿಸಿ ವಿತರಿಸಲಾಗುತ್ತದೆ. ಬಿತ್ತನೆ ಬೀಜಗಳ ಕೊರತೆಯಾಗುವುದಿಲ್ಲ ಎಂದರು.ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ಮಾತನಾಡಿ, ಸಸ್ಯಗಳ ಬೆಳವಣಿಗೆಗೆ ೧೭ ಪೋಷಕಾಂಶಗಳ ಅಗತ್ಯವಿರುತ್ತದೆ. ಇವುಗಳಲ್ಲಿ ಇಂಗಾಲ, ಜಲಜನಕ, ಮತ್ತು ಆಮ್ಲಜನಕ ನೈಸರ್ಗಿಕವಾಗಿ ದೊರೆಯುತ್ತವೆ. ಇನ್ನುಳಿದ ಸಾರಜನಕ, ರಂಜಕ, ಪೊಟ್ಯಾಷ್ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ.

ಕೇವಲ ಡಿಎಪಿಯನ್ನೇ ಬಿತ್ತನೆಗೆ ಬಳಸಬೇಕೆಂದು ತೀರ್ಮಾನಿಸುವ ಬದಲು ಇದಕ್ಕೆ ಸಮನಾದ ಪರ್ಯಾಯ ರಸಗೊಬ್ಬರಗಳನ್ನು ಬಳಸುವ ಮೂಲಕ ಡಿಎಪಿ ಕೊರತೆಯನ್ನು ಸವಾಲಾಗಿ ಸ್ವೀಕರಿಸಬೇಕು. ಡಿಎಪಿ ಬದಲಾಗಿ ೨೦-೨೦-೦-೧೩ ಹಾಗೂ ಪೊಟ್ಯಾಷ್‌ಯುಕ್ತ ೧೫-೧೫-೧೫, ೧೦-೨೬-೨೬, ೧೭-೧೭-೧೭, ೧೯-೧೯-೧೯, ೨೦-೧೦-೧೦ ಗೊಬ್ಬರಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಿಬ್ಬಂದಿಗಳಾದ ಶಾಮನಗೌಡ ಪಾಟೀಲ, ವಿಜಯ ಅಪ್ಪಾಜಿ, ವೀರೇಶ ಮಂತಗಿ, ಧರ್ಮೇಂದ್ರ ಮಡಿವಾಳರ, ಮೌನೇಶ ಚನ್ನಾಪುರ ಇತರರು ಉಪಸ್ಥಿತರಿದ್ದರು.