ರೈತರು ಉದ್ಯಮಿಗಳಾಗಿ ಬೆಳೆಯಬೇಕು: ಶೋಭಾ ಕರಂದ್ಲಾಜೆ

| Published : Mar 10 2024, 01:45 AM IST / Updated: Mar 10 2024, 01:59 PM IST

Shobha karandlaje

ಸಾರಾಂಶ

ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದಲ್ಲಿರುವ ಕೆಎಲ್‍ಇ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತ ಭವನ, ಸಿಬ್ಬಂದಿ ವಸತಿ ಗೃಹಗಳು ಮತ್ತು ಸ್ವಯಂ ಚಾಲಿತ ಹನಿ ನೀರಾವರಿ ಘಟಕವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶನಿವಾರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಬೆಳೆ ಒದಗಿಸಬೇಕಾದರೆ ಅದರ ಮಾನದಂಡದಡಿ ರೈತರು ಗುಣಮಟ್ಟದ ಬೆಳೆಗಳನ್ನು ಬೆಳೆಯಬೇಕು. ಜತೆಗೆ ದೇಶ ಇಂದು ಬೀಜೋತ್ಪಾದನೆಯಲ್ಲಿ ಸ್ವಾವಲಂಬಿಯಾಗಿ, ಉತ್ತಮ ಬೆಳೆಗಳನ್ನು ಬೆಳೆಯುವ ಮೂಲಕ ಉತ್ತಮ ಆದಾಯವನ್ನು ಗಳಿಸುವಂತಾಗಬೇಕು ಎಂದು ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರದ್ಲಾಂಜೆ ಹೇಳಿದರು.

ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದಲ್ಲಿರುವ ಕೆಎಲ್‍ಇ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತ ಭವನ, ಸಿಬ್ಬಂದಿ ವಸತಿ ಗೃಹಗಳು ಮತ್ತು ಸ್ವಯಂ ಚಾಲಿತ ಹನಿ ನೀರಾವರಿ ಘಟಕವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಾಂಪ್ರದಾಯಿಕ ಆಹಾರ ಸಿರಿಧಾನ್ಯ ಅದನ್ನು ಉಳಿಸುವುದು ಇಂದಿನ ಅಗತ್ಯತೆ ಇದೆ ಎಂದರು.

ಕೃಷಿ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಬೇಕಿದ್ದು, ಕೇಂದ್ರ ಸರ್ಕಾರ ಸಾಕಷ್ಟು ಹಣವನ್ನು ಅದಕ್ಕಾಗಿಯೇ ಮೀಸಟ್ಟಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ರೈತರು ಉದ್ಯಮಿಗಳಾಗಿ ಬೆಳೆಯಬೇಕಾಗಿದೆ. ಆದರೆ ಜಿಲ್ಲಾವಾರು ಅವಶ್ಯವಿರುವ ಯೋಜನೆಗಳ ಕುರಿತ ಮಾಹಿತಿಯನ್ನು ಕೇಂದ್ರಕ್ಕೆ ಕಳಿಸುತ್ತಿಲ್ಲ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ ಎಂದ ಅವರು, ಪ್ರಸ್ತುತ ಸಾಲಿನಲ್ಲಿ 2005 ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ರೈತರು ಇವುಗಳತ್ತ ಗಮನಹರಿಸಬೇಕು ಎಂದರು.

ಬೇರೆ ಬೇರೆ ದೇಶಗಳು ತಯಾರಾದ ಆಹಾರಗಳನ್ನು ಬೇಡುತ್ತಿವೆ. ಆದರೆ ಗುಣಮಟ್ಟದ ಆಹಾರವನ್ನು ಭಾರತವು ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ ಎಂದ ಅವರು, ರಾಸಾಯಿಕಗಳನ್ನು ಬಳಸದೆ ಸಾವಯವ ಕೃಷಿಯೆಡೆಗೆ ಗಮನಹರಿಸಬೇಕಾಗಿದೆ ಎಂದರು.

ದೇಶದ ಜನಸಂಖ್ಯೆಗೆ ಆಹಾರ ಪೂರೈಸಲು 1960ರ ದಶಕದಲ್ಲಿ ದೇಶವು ಗೋದಿಯನ್ನು ಆಮದು ಮಾಡಿಕೊಂಡು ಹೊಸ ತಳಿಗಳ ಉತ್ಪಾದನೆಯಿಂದ ಹಸಿರು ಕ್ರಾಂತಿಯನ್ನು ಸಾಧಿಸಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯಾಗಿತ್ತು. 

ಇದು ದೇಶದ ರೈತರ ಶ್ರಮದಿಂದ ಸಾಧ್ಯವಾಗಿದೆ. ಇಂದು ದೇಶದಲ್ಲಿ 140 ಕೋಟಿ ಜನಸಂಖ್ಯೆ ಇದ್ದು, ಪ್ರತಿವರ್ಷ 130 ಮಿಲಿಯನ್ ಟನ್ ಆಹಾರ ಧಾನ್ಯ ಹಾಗೂ 265 ಮಿಲಿಯನ್ ಟನ್ ತರಕಾರಿ ಹಾಗೂ ಹಣ್ಣು ಬೆಳೆಗಳ ಉತ್ಪಾದನೆಯಾಗುತ್ತಿದೆ. ಇದು 140 ಕೋಟಿ ಜನಸಂಖ್ಯೆಗೆ ಬೇಕಾದ ಆಹಾರ ಬೇಡಿಕೆಗಿಂತ ಅಧಿಕವಾಗಿದೆ ಎಂದರು.

ರೈತರು ಬೆಳೆಯುತ್ತಿರುವ ಕೃಷಿ ಉತ್ಪನ್ನಗಳಿಗೆ ಹೊರ ದೇಶದಲ್ಲಿ ಮಾರುಕಟ್ಟೆ ಮಾಡುವುದು ಅವಶ್ಯಕವಾಗಿದೆ. ರಫ್ತು ಮಾಡುವ ಗುಣಾತ್ಮಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿ ಹಾಗೂ ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಬೇಕಿದೆ ಎಂದು ಎಂದು ತಿಳಿಸಿದರು.

ಇಸ್ರೇಲ್ ಮಾದರಿಯ ತಂತ್ರಜ್ಞಾನವನ್ನು ರೈತರು ಅಳವಡಿಸಿಕೊಳ್ಳಬೇಕು. ಅದಕ್ಕೆ ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇಂದು ನಕಲಿ ಬೀಜಗಳ ಹಾವಳಿ ಹೆಚ್ಚಾಗಿದ್ದು ಅನೇಕ ಕಾನೂನಿನ ಕ್ರಮಗಳನ್ನು ಕೈಗೊಂಡಿದೆ. ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಈ ನಿಟ್ಟಿನಲ್ಲಿ ಅಳವಡಿಸಿಕೊಂಡರೆ ರೈತರು ಮೋಸ ಹೋಗುವ ಪ್ರಮೇಯವೇ ಬರುವುದಿಲ್ಲ. ಅದನ್ನು ಕೇಂದ್ರ ಸರ್ಕಾರ ಶೀಘ್ರವಾಗಿ ಜಾರಿಗೆ ತರಲಿದೆ ಎಂದರು.

ಡಾ.ಪ್ರಭಾಕರ ಕೋರೆಯವರ ಇಚ್ಛಾಶಕ್ತಿಯಿಂದ ಪ್ರಾರಂಭಗೊಂಡಿರುವ ಕೃಷಿ ವಿಜ್ಞಾನ ಕೇಂದ್ರ ಒಂದು ಮಾದರಿ ಕೇಂದ್ರವೆನಿಸಿದ್ದು, ಈ ಭಾಗದ ರೈತರಿಗೆ ವರದಾನವೆನಿಸಿದೆ ಎಂದು ಶ್ಲಾಘಿಸಿದರು.

ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ರೈತನಿಗೆ ಹೆಣ್ಣು ಮಕ್ಕಳನ್ನು ಕೊಡುತ್ತಿಲ್ಲ. ಇದು ದುರ್ದೈವದ ಸಂಗತಿ. ಎಲ್ಲರಿಗೂ ಉತ್ತಮ ಸಂಬಳ ಪಡೆಯುವವರೆ ಬೇಕಾಗಿದ್ದಾರೆ. 

ಇಂದು ಚಿಕ್ಕೋಡಿ ಭಾಗದಲ್ಲಿ ರೈತರು ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಪ್ರಗತಿಪರ ರೈತರೆನಿಸಿಕೊಂಡಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಬೆಳಗಾವಿ ಮತ್ತಿಕೊಪ್ಪದಲ್ಲಿ ಕೃಷಿ ವಿಜ್ಞಾನ ಕೇಂದ್ರವನ್ನು ಹುಟ್ಟುಹಾಕಿ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.

ಸರ್ಕಾರದಿಂದ ರೈತರು ಸಬ್ಸಿಡಿಗಳನ್ನು ಕೇಳುವುದಿಲ್ಲ. ನಮಗೆ ನೀರು ಕೊಡಿ. ನೀರಿದ್ದರೆ ಕೃಷಿ ಸಾಧ್ಯ. ಅದಕ್ಕಾಗಿ ಯೋಜನೆಗಳನ್ನು ಸರ್ಕಾರ ರೂಪಿಸಬೇಕಾಗಿದೆ. ಇಸ್ರೇಲ್ ದೇಶವು ಹನಿನೀರಾವರಿಗಾಗಿ ಸಾಕಷ್ಟು ಶ್ರಮಿಸಿ ಯಶಸ್ಸು ಸಾಧಿಸಿದೆ. 

ಅಂತೆಯೇ ಭಾರತವು ಹೆಜ್ಜೆ ಇಡುತ್ತಿದೆ. ನಾನು 20 ರೈತರನ್ನು ಇಸ್ರೇಲ್ ದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನೀರಾವರಿ ಉಪಯೋಗಗಳನ್ನು ಪ್ರಾತ್ಯಕ್ಷಿಯ ಮೂಲಕ ತೋರಿಸಿಕೊಟ್ಟಿದ್ದೇನೆ. ಎಲ್ಲ ರೈತರು ಹನಿ ನೀರಾವರಿಯೆಡೆಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಧಾರವಾಡ ಕೃಷಿ ವಿಜ್ಞಾನ ಕೇಂದ್ರದ ಕುಲಪತಿ ಡಾ.ಪಿ.ಎಲ್.ಪಾಟೀಲ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರವು ವಿವಿಧ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ರೈತರಿಗೆ ತರಬೇತಿ ನೀಡುತ್ತಿದೆ. ನಮ್ಮ ರೈತರು ಸ್ವಾವಲಂಬಿಯಾಗುವಲ್ಲಿ ಅಹರ್ನಿಶಿಯಾಗಿ ಪ್ರಯತ್ನಿಸುತ್ತಿದೆ. ಎಲ್ಲರೂ ಇದರ ಪ್ರಯೋಜನ ಪಡೆಯಬೇಕು ಎಂದರು.

ಇದೇ ಸಂದರ್ಭದಲ್ಲಿ ಕೆವಿಕೆ ವಿಡಿಯೋ, ಆರು ಗ್ರಂಥಗಳು, ಜೈವಿಕ ಪರಿಕರಗಳನ್ನು ಬಿಡುಗಡೆಗೊಳಿಸಲಾಯಿತು. ಪ್ರಗತಿಪರ ರೈತರಾದ ಮುದಕವಿಯ ಈರವ್ವ ಮಠಪತಿ, ಕುರುಗುಂದದ ಮಹಾದೇವಿ ಅಪ್ಪಯ್ಯನವರಮಠ, ವಸುಂಡಿಯ ಪ್ರಶಾಂತ ನೇಗೂರ, ಬೈಲಹೊಂಗಲದ ಓಂಪ್ರಕಾಶ ಪಾಟೀಲ, ಹಿರೇಕೊಪ್ಪದ ಅಣ್ಣೇಶಗೌಡ ಪಾಟೀಲ, ಸುನ್ನಾಳದ ಅಜ್ಜಪ್ಪ ಕುಲಗೋಡ ಅವರನ್ನು ಸಚಿವೆ ಕರಂದ್ಲಾಜೆ ಗೌರವಿಸಿದರು.

ಐಸಿಎಆರ್ ಅಟಾರಿಯ ನಿರ್ದೇಶಕ ಡಾ.ವಿ.ವೆಂಕಟಸುಬ್ರಮಣಿಯನ್ ಮಾತನಾಡಿದರು. ಕೆಎಲ್‍ಇ ಉಪಾಧ್ಯಕ್ಷ ಬಸವರಾಜ ತಟವಟಿ, ನಿರ್ದೇಶಕರಾದ ಡಾ.ವಿಶ್ವನಾಥ ಪಾಟೀಲ, ಡಾ.ವಿ.ಎಸ್.ಸಾಧುನವರ, ಬಾಬಣ್ಣ ಮೆಟಗುಡ್, ಪ್ರವೀಣ ಬಾಗೇವಾಡಿ ಉಪಸ್ಥಿತರಿದ್ದರು. ಕೇಂದ್ರ ಕಾರ್ಯಾಧ್ಯಕ್ಷರು ಹಾಗೂ ಕೆಎಲ್‍ಇ ಆಡಳಿತ ಮಂಡಳಿಯ ನಿರ್ದೇಶಕ ಬಸವರಾಜ ಪಾಟೀಲ ಸ್ವಾಗತಿಸಿದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು. ಕೆವಿಕೆ ಮುಖ್ಯಸ್ಥರಾದ ಶ್ರೀದೇವಿ ಅಂಗಡಿ ವಂದಿಸಿದರು. ಕೆಎಲ್‍ಇ ಸಂಗೀತ ಶಾಲೆಯ ಸಿಬ್ಬಂದಿ ಪ್ರಾರ್ಥಿಸಿದರು.