ಸಾರಾಂಶ
ಇ- ಪೌತಿ ಖಾತಾ ತಂತ್ರಾಂಶದಿಂದ ಅತ್ಯಂತ ಕಡಿಮೆ ದಾಖಲೆ ಮೂಲಕ ಶೀಘ್ರವಾಗಿ ವಾರಸುದಾರರಿಗೆ ಪೌತಿ ಖಾತೆ ವರ್ಗಾವಣೆಯಾಗಲಿದೆ. ಈಗಾಗಲೇ ಸರ್ಕಾರ ಕಂದಾಯ ಇಲಾಖೆಗೆ ಒಳಪಟ್ಟಿರುವ ಜಮೀನುಗಳ ಪಹಣಿಗಳಿಗೆ ಮಾಲೀಕರ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗುವುದು.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಸಾರ್ವಜನಿಕರು ಆಸ್ತಿಗಳ ಪೌತಿ ಖಾತೆಗಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಭೂಮಿ ಉಸ್ತುವಾರಿ ಕೋಶ, ಕಂದಾಯ ಆಯುಕ್ತಾಲಯ ಮೊಬೈಲ್ ಮತ್ತು ವೆಬ್ ಆಧಾರಿತ ತಂತ್ರಾಂಶದ ಮೂಲಕ ಇ- ಪೌತಿ ಖಾತಾ ಆಂದೋಲನ ಆರಂಭಿಸಿದೆ ಎಂದು ತಹಸೀಲ್ದಾರ್ ಅರವಿಂದ್ ಕೆ.ಎಂ. ತಿಳಿಸಿದ್ದಾರೆ.ತಾಲೂಕಿನ ಹೊಸೂರು ಹೋಬಳಿ ಮುದುಗೆರೆ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಇ-ಪೌತಿ ಖಾತಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಗ್ರಾಮಸ್ಥರಿಂದ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಇದೇ ರೀತಿ ಎಲ್ಲಾ ಗ್ರಾಮಗಳಲ್ಲಿ ಇ-ಪೌತಿ ಖಾತಾ ಆಂದೋಲನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಸುವರ್ಣಾವಕಾಶವನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.ಪೌತಿ ಖಾತೆ ವರ್ಗಾವಣೆ
ಇ- ಪೌತಿ ಖಾತಾ ತಂತ್ರಾಂಶದಿಂದ ಅತ್ಯಂತ ಕಡಿಮೆ ದಾಖಲೆ ಮೂಲಕ ಶೀಘ್ರವಾಗಿ ವಾರಸುದಾರರಿಗೆ ಪೌತಿ ಖಾತೆ ವರ್ಗಾವಣೆಯಾಗಲಿದೆ. ಈಗಾಗಲೇ ಸರ್ಕಾರ ಕಂದಾಯ ಇಲಾಖೆಗೆ ಒಳಪಟ್ಟಿರುವ ಜಮೀನುಗಳ ಪಹಣಿಗಳಿಗೆ ಮಾಲೀಕರ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗಿದೆ ಎಂದು ಅರಿವು ಮೂಡಿಸಿದರು.ಗ್ರಾಮೀಣ ಭಾಗದ ಜನರಿಗೆ ಸರಕಾರದ ಹಲವು ಸೇವೆಗಳು ಅವರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ನೂತನ ಯೋಜನೆಗಳಲ್ಲಿ ಪೌತಿ ಖಾತೆ ಅಂದೋಲನವು ಒಂದಾಗಿದೆ. ಪೌತಿ ಖಾತೆ ಆಂದೋಲನ ಎಂದರೆ ಪಿತ್ರಾರ್ಜಿತ ಆಸ್ತಿ ಹಕ್ಕನ್ನು ರೈತರ ಹೆಸರಿಗೆ ಮಾಡಿಕೊಡುವುದು. ಈ ಪೌತಿ ಖಾತೆ ಆಂದೋಲನದ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.ಪಹಣಿಗೆ ಆಧಾರ್ ಜೋಡಣೆಇ- ಪೌತಿ ಖಾತಾ ಆಂದೋಲನದಿಂದ ಆಸ್ತಿಯ ಎಲ್ಲ ವಾರಸುದಾರರ ಒಪ್ಪಿಗೆಯು ದಾಖಲಾಗುವುದರಿಂದ ಕಾನೂನು ಬದ್ಧರಲ್ಲದ ವಾರಸುದಾರರಿಗೆ ಖಾತೆಯಾಗುವುದು ತಪ್ಪಲಿದೆ. ತಂತ್ರಾಂಶದ ಮೂಲಕ ಆಧಾರ್ ಇಕೆವೈಸಿ ಪಡೆಯುವುದರಿಂದ ಮ್ಯುಟೇಷನ್ (ಎಂ.ಆರ್)ಪ್ರಕ್ರಿಯೆ ಮುಗಿದ ನಂತರ ಸ್ವಯಂ ಚಾಲಿತವಾಗಿ ಪಹಣಿಯೊಂದಿಗೆ ಆಧಾರ್ ಸಂಖ್ಯೆ ಜೋಡಣೆಯಾಗಲಿದೆ ಎಂದು ತಿಳಿಸಿದರು.ಖಾತೆಗಳು ಪೌತಿದಾರರ ಹೆಸರಿನಲ್ಲಿ ಮುಂದುವರಿದಲ್ಲಿ ಅವರ ವಾರಸುದಾರರು ಸರಕಾರದಿಂದ ಸಿಗಬಹುದಾದ ಹಲವಾರು ಪ್ರಯೋಜನೆಗಳಿಂದ ವಂಚಿತರಾಗುತ್ತಾರೆ. ಅಲ್ಲದೇ ಜಮೀನಿನ ಅಭಿವೃದ್ಧಿಗೆ ಸಂಬಂಧಿಸಿ ಬ್ಯಾಂಕ್ ಸಾಲಗಳು, ಬೆಳೆ ಹಾನಿ ಪರಿಹಾರ, ಬೆಳೆ ವಿಮೆಯಂತಹ ಅನೇಕ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ.
ಅಗತ್ಯ ದಾಖಲೆ ಸಲ್ಲಿಸಿಈ ಸಂಬಂಧ ತಾವುಗಳು ಪೌತಿ ಖಾತೆದಾರರ ಮರಣ ಪ್ರಮಾಣ ಪತ್ರ, ವಂಶವೃಕ್ಷ ದೃಢೀಕರಣ, ಎಲ್ಲ ವಾರಸುದಾರರ ಆಧಾರ್ ಕಾರ್ಡ್ ಹಾಗೂ ಇನ್ನಿತರ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪೌತಿ ಖಾತೆ ಬದಲಾವಣೆಗೆ ಕ್ರಮ ಕೈಗೊಳ್ಳಲು ಪೌತಿ ಖಾತೆ ಆಂದೋಲನದ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಆರ್.ಐ. ಅಬ್ದುಲ್ ಖಾದರ್, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು ಮತ್ತು ಗ್ರಾಮಸ್ಥರು ಹಾಜರಿದ್ದರು.