ನಿಡ್ಡೋಡಿಯಲ್ಲಿ ಸ್ಟೆಲೈಟ್ ಕಂಪೆನಿಯವರು 400 ಕೆವಿ ವಿದ್ಯುತ್ ಕಾಮಗಾರಿ ವೇಳೆ ಕೃಷಿ ನಾಶ ಮಾಡಿದ ಪ್ರಕರಣದ ಕುರಿತು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ತೀವ್ರ ಆಕ್ಷೇಪ ಕೇಳಿಬಂತು.
ಮಂಗಳೂರು: ನಿಡ್ಡೋಡಿಯಲ್ಲಿ ಸ್ಟೆಲೈಟ್ ಕಂಪೆನಿಯವರು 400 ಕೆವಿ ವಿದ್ಯುತ್ ಕಾಮಗಾರಿ ವೇಳೆ ಕೃಷಿ ನಾಶ ಮಾಡಿದ ಪ್ರಕರಣದ ಕುರಿತು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ತೀವ್ರ ಆಕ್ಷೇಪ ಕೇಳಿಬಂತು.
21 ಗ್ರಾಮಗಳಲ್ಲಿ 400 ಕೆವಿ ವಿದ್ಯುತ್ ಲೈನ್ ಹಾದು ಹೋಗುತ್ತಿದೆ. ಸಂತ್ರಸ್ತ ರೈತರ ಸಮಸ್ಯೆಗಳ ಬಗ್ಗೆ ಕಂಪೆನಿ ಜತೆ ಮಾತುಕತೆ ನಡೆಸುವ ಸೌಜನ್ಯ ತೋರಿಸಬೇಕು ಎಂದು ರೈತ ಮುಖಂಡರು ಜಿಲ್ಲಾಡಳಿತವನ್ನು ಆಗ್ರಹಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪರಿಹಾರ ಹೊರತುಪಡಿಸಿ ಬೇರೆ ಸಮಸ್ಯೆಗಳಿದ್ದರೆ ಪರಿಹರಿಸಲು ಜಿಲ್ಲಾಡಳಿತ ಸಿದ್ಧವಿದೆ. ಕೃಷಿ ನಾಶಕ್ಕೂ ಪರಿಹಾರ ನೀಡಲಾಗುತ್ತಿದೆ. ಇನ್ನೂ ಹೆಚ್ಚಿನ ಪರಿಹಾರ ಬೇಕು ಎಂದು ರೈತರು ಕೇಳಿದ್ದರಿಂದ ಜಾಸ್ತಿ ನೀಡುವುದಕ್ಕೂ ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
ಈ ವಿದ್ಯುತ್ ಲೈನ್ನ್ನು ಕೃಷಿ ಭೂಮಿ ಬಿಟ್ಟು ಹೆದ್ದಾರಿ, ರೈಲು ಮಾರ್ಗದಲ್ಲಿ ಹಾಕಬೇಕು ಎಂದು ರೈತರು ಒತ್ತಾಯಿಸಿದರು. ಕಾಮಗಾರಿ ಶೇ. 90ರಷ್ಟು ಆಗಿದೆ. ಈಗ ಮಾರ್ಗ ಬದಲಾವಣೆ ಮಾಡಬೇಕೆಂದರೆ ಜಿಲ್ಲಾಡಳಿತದ ಹಂತದಲ್ಲಿ ಆಗದು ಎಂದು ಜಲ್ಲಾಧಿಕಾರಿ ಸ್ಪಷ್ಟಪಡಿಸಿದರು.ಆನ್ಲೈನ್ ಮೂಲಕ ಕೋವಿ ಪರವಾನಿಗೆ: ರೈತರಿಗೆ ಕೋವಿ ಪರವಾನಗಿ ನೀಡಲು ವಿಳಂಬ ಆಗುತ್ತಿರುವ ಕುರಿತು ರೈತರು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಕ್ರಿಯಿಸಿದ ಜಲ್ಲಾಧಿಕಾರಿ, ಕಳೆದ ಆರು ತಿಂಗಳಿನಿಂದ ಕೋವಿ ಪರವಾನಗಿಯಲ್ಲಿ ಕಾರಣಾಂತರಗಳಿಂದ ವಿಳಂಬ ಆಗಿದೆ. ಅದಕ್ಕಾಗಿ ಆನ್ಲೈನ್ ವ್ಯವಸ್ಥೆ ಮಾಡಲಾಗುತ್ತಿದ್ದು, ಎರಡು ವಾರಗಳಲ್ಲಿ ಸರಿಯಾಗಲಿದೆ. ಇದು ಹೊಸ ಪರವಾನಗಿ, ನವೀಕರಣಕ್ಕೆ ಮಾತ್ರವೇ ಅನ್ವಯಿಸಲಿದೆ. ಒಂದು ವರ್ಷದ ಹಳೆಯ ಪ್ರಕರಣಗಳು ಹಿಂದಿನ ರೀತಿಯಲ್ಲೇ ಮುಂದುವರಿಯಲಿವೆ ಎಂದರು.ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಮಾತನಾಡಿ, ಪರವಾನಗಿ ಹೊಂದಿದ ಸಶಾಸ್ತ್ರಗಳ ಮೂಲಕ ಬೆದರಿಕೆ ಹಾಕುವುವುದು, ಕಡಬದಲ್ಲಿ ಕಾಡುಕೋಣ ಕೊಲ್ಲುವ ಪ್ರಕರಣವೂ ನಡೆದಿದೆ. ಈ ಕಾರಣಗಳಿಂದ ಪರವಾನಗಿ ನೀಡುವಲ್ಲಿ ಸ್ವಲ್ಪ ವಿಳಂಬವಾಗಿದೆ ಎಂದು ಹೇಳಿದರು.ಆನೆ ಕ್ರಿಯಾಪಡೆ ಆಗಿಲ್ಲ: ಸುಳ್ಯ, ಕಡಬ, ಬೆಳ್ತಂಗಡಿ ಸೇರಿದಂತೆ ಕಾಡಿನಂಚಿನಲ್ಲಿ ಆನೆ ಕ್ರಿಯಾಪಡೆ ರಚಿಸುವುದಾಗಿ ಕಳೆದ ವರ್ಷ ಘೋಷಣೆ ಆಗಿದ್ದರೂ ಇನ್ನೂ ಆಗಿಲ್ಲ ಎಂದು ರೈತರು ಗಮನ ಸೆಳೆದರು. ಇದಕ್ಕೆ ಸಿದ್ಧತೆ ಆಗಿದ್ದು, ಹಣಕಾಸು ಇಲಾಖೆಯಿಂದ ಅನುಮೋದನೆ ಆಗಬೇಕಿದೆ ಎಂದು ಅರಣ್ಯ ಅಧಿಕಾರಿ ತಿಳಿಸಿದರು.ನೆಟ್ಟಣಿಗೆ ಮುಡ್ನೂರು ಗ್ರಾಮದಲ್ಲಿ ಅಕ್ರಮವಾಗಿ ರೈತರ ಭೂಮಿ ಅಕ್ರಮ ಸಕ್ರಮ ಆಗಿರುವ ಬಗ್ಗೆ ದೂರು ಕೇಳಿಬಂತು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.ಅಪರ ಜಿಲ್ಲಾಧಿಕಾರಿ ರಾಜು ಇದ್ದರು. ರೈತ ಮುಖಂಡರಾದ ಬಿ.ಶ್ರೀಧರ ಶೆಟ್ಟಿ, ರೂಪೇಶ್ ರೈ, ಯಾದವ ಶೆಟ್ಟಿ, ಆಲ್ವಿನ್ ಮಿನೇಜಸ್, ವಿಜಯ ಕುಮಾರ್ ರೈ, ಸುಬ್ರಹ್ಮಣ್ಯ ಭಟ್ ಹಾಗೂ ಇನ್ನಿತರರು ಸಭೆಯಲ್ಲಿ ಭಾಗವಹಿಸಿದ್ದರು.