ರೈತ ಹೋರಾಟ ತಡೆ ಪ್ರಜಾಪ್ರಭುತ್ವದ ಸೋಲು: ಪಂಡಿತಾರಾಧ್ಯ ಶ್ರೀ

| Published : Feb 15 2024, 01:16 AM IST

ರೈತ ಹೋರಾಟ ತಡೆ ಪ್ರಜಾಪ್ರಭುತ್ವದ ಸೋಲು: ಪಂಡಿತಾರಾಧ್ಯ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಬಹುತೇಕ ಜನಪ್ರತಿನಿಧಿಗಳಿಗೆ ಸಂವಿಧಾನದ ಪರಿಚಯವೇ ಇಲ್ಲ. ಇಡೀ ಸಂವಿಧಾನವನ್ನು ಓದಿಕೊಂಡ ಜನಪ್ರತಿನಿಧಿಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಜನಪ್ರತಿನಿಧಿಗಳು ಸಂವಿಧಾನದ ಆಶಯ ಅರ್ಥ ಮಾಡಿಕೊಂಡಿದ್ದರೆ ನಮ್ಮ ದೇಶ ಕಲ್ಯಾಣ ನಾಡಾಗುತ್ತಿತ್ತು. ನಮ್ಮ ಜನರ ಸಂಕಷ್ಟಗಳನ್ನು ಬಗೆಹರಿಸಬಹುದಾಗಿತ್ತು. ಆದರೆ ಸಂವಿಧಾನ ರಚನೆ ಆಗಿ ೭೫ ವರ್ಷಗಳಾದರೂ ಇನ್ನೂ ನಮ್ಮ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಾಗದೇ ಇರುವುದು ವಿಷಾದದ ಸಂಗತಿ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಂವಿಧಾನ ಜಾರಿಗೆ ಬಂದ ೭೫ ವರ್ಷಗಳ ಸಿಂಹಾವಲೋಕನ ಮಾಡಿ ನಮ್ಮ ಸಂವಿಧಾನಕ್ಕೆ ಅನುಗುಣವಾಗಿ ರಾಜಕೀಯ ನೇತಾರರು ನಡೆದುಕೊಳ್ಳುತ್ತಿದ್ದಾರೆಯೇ ಎಂದು ಪ್ರಶ್ನೆ ಹಾಕಿದರೆ ಉತ್ತರ ಹೇಳೋದು ತುಂಬಾ ಕಷ್ಟ. ನಮ್ಮ ಬಹುತೇಕ ಜನಪ್ರತಿನಿಧಿಗಳಿಗೆ ಸಂವಿಧಾನದ ಪರಿಚಯವೇ ಇಲ್ಲ. ಇಡೀ ಸಂವಿಧಾನವನ್ನು ಓದಿಕೊಂಡ ಜನಪ್ರತಿನಿಧಿಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ. ಜನಪ್ರನಿಧಿಯಾಗಲಿಕ್ಕೆ ಅರ್ಹತೆ ಇರಬೇಕು. ಅದರ ಬದಲಾಗಿ ಈಗ ಪ್ರಧಾನವಾಗಿರುವುದು ಜಾತಿ, ಹಣ, ಅಧಿಕಾರ. ಹಾಗಾಗಿ ಅವಿದ್ಯಾವಂತರು ಕೂಡ ನಮ್ಮ ಜನಪ್ರತಿನಿಧಿಗಳಾಗಿರುವ ನಿದರ್ಶನಗಳು ಬೇಕಾದಷ್ಟಿವೆ. ಅವಿದ್ಯಾವಂತರು ಜನಪ್ರನಿಧಿಗಳಾದಾಗ ಹೇಗೆ ನಮ್ಮ ಸಂವಿಧಾನವನ್ನು ಅಧ್ಯಯನ ಮಾಡಲಿಕ್ಕೆ ಸಾಧ್ಯ. ನಮ್ಮ ಹಕ್ಕು, ಕರ್ತವ್ಯ, ಜವಾಬ್ದಾರಿಗಳೇನು, ಆಡಳಿತ ನಿರ್ವಹಿಸುವಾಗ ಹೇಗೆ ನಾವು ವರ್ತನೆ ಮಾಡಬೇಕು ಎನ್ನುವ ಅಂಶಗಳ ಪರಿಚಯವಿರದೇ ಮನಸ್ಸಿಗೆ ಬಂದ ಹಾಗೆ ನಡೆದುಕೊಳ್ಳುತ್ತಿದ್ದಾರೆ ಎಂದರು.

ರೈತರ ಬೇಡಿಕೆಗಳು ಈಡೇರಿಲ್ಲ. ಹರಿಯಾಣ, ಪಂಜಾಬ್ ರಾಜ್ಯದ ರೈತರು ನಮಗೆ ಬೆಂಬಲ ಬೆಲೆಯನ್ನು ಕೊಡಿ. ನಮ್ಮ ಆಶಯಗಳನ್ನು ಈಡೇರಿಸಿ ಎಂದು ಬಹುದೊಡ್ಡ ಹೋರಾಟಕ್ಕೆ ಸನ್ನದ್ಧರಾಗಿ ಬಂದರೆ ಆ ಹೋರಾಟವನ್ನು ತಡೆಗಟ್ಟಲಿಕ್ಕೆ ಏನು ಬೇಕೋ ಆ ವ್ಯವಸ್ಥೆಯನ್ನು ಸರಕಾರ ಮಾಡಿತು. ಇದು ಪ್ರಜಾಪ್ರಭುತ್ವದ ಸೋಲು. ಹಾಗಾಗಿ ಪ್ರಜೆಗಳು ಯೋಗ್ಯ ಜನಪ್ರತಿನಿಧಿಯನ್ನು ಆಯ್ಕೆ ಮಾಡಿದರೆ ಒಳ್ಳೆಯ ಆಡಳಿತವನ್ನು ಕೊಡಲಿಕ್ಕೆ ಸಾಧ್ಯ. ಆದರ್ಶ ಜನಪ್ರತಿನಿಧಿ ಇಲ್ಲದಿದ್ದರೆ ಆದರ್ಶ ರಾಜ್ಯವೂ ಇಲ್ಲ ಎಂದರು.ಸಂವಿಧಾನ ಜಾಗೃತಿ ಅಭಿಯಾನ ಎಲ್ಲ ಅಭಿಯಾನದಂತೆ ಆಗಬಾರದು. ಈ ಅಭಿಯಾನದ ಮೂಲಕ ಗ್ರಾಮ ಪಂಚಾತಿಯವರು, ವಿದ್ಯಾರ್ಥಿಗಳು, ಸಾರ್ವಜನಿಕರು ಸ್ವಲ್ಪಮಟ್ಟಿಗಾದರೂ ಸಂವಿಧಾನದ ಆಶಯ ಅರ್ಥಮಾಡಿಕೊಂಡರೆ ಚುನಾವಣೆಗಳಲ್ಲಿ ಯೋಗ್ಯರನ್ನು ಆಯ್ಕೆ ಮಾಡಲಿಕ್ಕೆ ಅವಕಾಶವಾಗುವುದು. ಸಂವಿಧಾನದ ಆಶಯಗಳಿಗೆ ಧಕ್ಕೆ ಬಾರದ ಹಾಗೆ ನಡೆದುಕೊಳ್ಳಬೇಕು ಎಂದರು.

ಸಂವಿಧಾನದ ಆಶಯಗಳನ್ನು ೧೨ನೆಯ ಶತಮಾನದಲ್ಲೇ ಜಾರಿಗೆ ತಂದಿದ್ದರು. ಕರ್ನಾಟಕ ಸರಕಾರ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಅಂತ ಒಂದು ನಿರ್ಣಯ ಮಾಡಿದೆ. ಸಾಂಸ್ಕೃತಿಕ ನಾಯಕನ ಭಾವಚಿತ್ರವನ್ನು ಎಲ್ಲ ಶಾಲಾ, ಕಾಲೇಜು, ಸರಕಾರಿ ಆಡಳಿತ ಕಚೇರಿ, ಮಠ ಮಂದಿರಗಳಲಿ ಹಾಕಬೇಕು ಎನ್ನುವ ನಿರ್ಣಯ ಸರ್ಕಾರ ಮಾಡಿದ್ದು ಅಭಿನಂದನಾರ್ಹ. ಬಸವಣ್ಣ ಅಂದಾಕ್ಷಣ ಕಿರೀಟ ಬಸವಣ್ಣ ಎಂದು ಹಲವರು ಹೇಳುವರು. ಆದರೆ ಬಸವಣ್ಣನವರಿಗೆ ಕಿರೀಟದ ಬಗ್ಗೆ ವ್ಯಾಮೋಹ ಇರಲಿಲ್ಲ. ಸರ್ಕಾರ ತುಂಬಾ ಯೋಚನೆ ಮಾಡಿ ತಾಳೆಗರಿಯಲ್ಲಿ ಬರೆಯುವಂಥ ಬಸವಣ್ಣನ ಭಾವಚಿತ್ರವನ್ನು ಹಾಕಬೇಕೆಂದು ಜಾರಿಯಲ್ಲಿ ತಂದಿದೆ. ಹಾಗಾಗಿ ಫೆ. ೧೭ನೇ ತಾರೀಖು ಸಂಭ್ರಮದ ದಿನಾಚರಣೆ ಆಗಬೇಕು. ಅವತ್ತು ಬಸವಣ್ಣನವರ ವಚನ ಓದುವುದು, ಚರ್ಚೆ ಮಾಡುವುದು, ಬಸವತತ್ವವನ್ನು ತಿಳಿದುಕೊಳ್ಳುವ ಕೆಲಸ ಆಗಬೇಕು. ಸಾಣೇಹಳ್ಳಿಯ ಮಠದಲ್ಲೂ ೧೭ರಂದು ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕನ ಭಾವಚಿತ್ರವಿಟ್ಟು ಅದಕ್ಕೆ ಪುಷ್ಟವನ್ನು ಅರ್ಪಿಸಿ ವಚನಗಳನ್ನು ಓದಿ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶಶಿಧರ ಪ್ರಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಕಾಂತರಾಜ್ ಸಂವಿಧಾನದ ಬಗ್ಗೆ ಮತನಾಡಿದರು. ವೇದಿಕೆಯ ಮೇಲೆ ತಾಲೂಕು ನೌಕರರ ಸಂಘದ ಅಧ್ಯಕ್ಷ ಗಂಗಾಧರ, ಗ್ರಾಮ ಪಂಚಾತಿ ಅಧ್ಯಕ್ಷೆ ಪ್ರೇಮಾ ಬಸವರಾಜ್, ಪಿಡಿಒ ಸ್ವಾಮಿ ಮತ್ತಿತರರಿದ್ದರು. ನಿವೃತ್ತ ಶಿಕ್ಷಕ ವೀರಭದ್ರಪ್ಪ ಸ್ವಾಗತಿಸಿದರೆ ಮಲ್ಲಿಕಾರ್ಜುನ್ ನಿರೂಪಿಸಿ ವಂದಿಸಿದರು.