ಇಂದು ಕಪ್ಪು ನೀರಿನ ವೀರ ನಾಟಕ ಪ್ರದರ್ಶನ

| Published : Feb 15 2024, 01:16 AM IST

ಸಾರಾಂಶ

ಜನಕಲ್ಯಾಣ ಟ್ರಸ್ಟ್ ವತಿಯಿಂದ ರಂಗಭೂಮಿ ಟ್ರಸ್ಟ್ ಕೊಡಗು ಅವರ ಸಹಯೋಗದಲ್ಲಿ ಮೈಸೂರು ರಂಗಾಯಣದ ಮಾಜಿ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಅವರ ನಿರ್ದೇಶನದಲ್ಲಿ ವೀರಸಾರ್ವಕರ್‌ ಅವರ ಜೀವನ ಕುರಿತ ‘ಕಪ್ಪು ನೀರಿನ ವೀರ’ ನಾಟಕ ಪ್ರದರ್ಶನವನ್ನು ಫೆಬ್ರವರಿ 15ರ ಸಂಜೆ 6 ಗಂಟೆಗೆ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗನಿರ್ದೇಶಕ ಅಡ್ಡಂಡ ಕಾರ್ಯಪ್ಪ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಜನಕಲ್ಯಾಣ ಟ್ರಸ್ಟ್ ವತಿಯಿಂದ ರಂಗಭೂಮಿ ಟ್ರಸ್ಟ್ ಕೊಡಗು ಅವರ ಸಹಯೋಗದಲ್ಲಿ ಮೈಸೂರು ರಂಗಾಯಣದ ಮಾಜಿ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಅವರ ನಿರ್ದೇಶನದಲ್ಲಿ ವೀರಸಾರ್ವಕರ್‌ ಅವರ ಜೀವನ ಕುರಿತ ‘ಕಪ್ಪು ನೀರಿನ ವೀರ’ ನಾಟಕ ಪ್ರದರ್ಶನವನ್ನು ಫೆಬ್ರವರಿ 15ರ ಸಂಜೆ 6 ಗಂಟೆಗೆ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗನಿರ್ದೇಶಕ ಅಡ್ಡಂಡ ಕಾರ್ಯಪ್ಪ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರಕ್ಕಾಗಿ ಹೋರಾಡಿ ಮಡಿದವರು ಅನೇಕರು. ಅವರಲ್ಲಿ ವೀರ ಸಾರ್ವಕರ್ ಕೂಡ ಒಬ್ಬರು. ಆದರೆ ಅವರ ಬಗ್ಗೆ ರಾಜಕೀಯ ಕಾರಣಕ್ಕಾಗಿ ಕೆಲವರು ಕೆಸರು ಎರಚುವ ಕೆಲಸ ಮಾಡುತ್ತಿ ದ್ದಾರೆ. ಸಾಹಿತಿಗಳು, ಕವಿಗಳು, ನಾಟಕಕಾರರು ಆಗಿರುವ ವೀರಸಾರ್ವಕರ್‌ ಅವರ ಜೀವನ ಚರಿತ್ರೆಯನ್ನು ಅವಲೋಕನ ಮಾಡಿ, ನಾಟಕವನ್ನು ರಚಿಸಿ, ನಿರ್ದೇಶಿಸಿದ್ದು, ನಾಟಕಕ್ಕೆ ಪ್ರದರ್ಶನಕ್ಕೆ 100 ರು. ಟಿಕೆಟ್ ಇಡಲಾಗಿದೆ ಎಂದರು.

ವೀರ ಸಾರ್ವಕರ್‌ ಅವರ ಬಗ್ಗೆ ಕೆಲವರು ಅದರಲ್ಲಿಯೂ ಸಚಿವರಾಗಿರುವ ಪ್ರಿಯಾಂಕ ಖರ್ಗೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಹಳ ಹಗುರವಾಗಿ ಮಾತನಾಡಿದ್ದಾರೆ. ಅಲ್ಲದೆ ಅವರ ಪಠ್ಯವನ್ನು ಕಿತ್ತೆಸೆಯುವುದಾಗಿ ಹೇಳಿದ್ದಾರೆ. ಆದರೆ ಅವರು ಪಠ್ಯದಿಂದ ಕಿತ್ತೆಸೆದರೆ ನಾವು, ನಮ್ಮ ಮಾಧ್ಯಮವಾದ ನಾಟಕದ ಮೂಲಕ ಜನಮಾನಸದಲ್ಲಿ ತುಂಬುವ ಕೆಲಸವನ್ನು ಮಾಡುತ್ತಿದ್ದೇವೆ. ಇಡೀ ರಾಜ್ಯಾದ್ಯಂತ ಕಪ್ಪು ನೀರಿನ ವೀರ ನಾಟಕ ಪ್ರದರ್ಶನಕ್ಕೆ ಯೋಚಿಸಿದ್ದು, ಇದುವರೆಗೂ 29 ಪ್ರದರ್ಶನ ನಡೆದಿವೆ. 30ನೇ ಪ್ರದರ್ಶನ ತುಮಕೂರಿನಲ್ಲಿ ಆಯೋಜಿಸಲಾಗಿದೆ. ನಾಟಕ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ನೋಡಿ ಪ್ರೋತ್ಸಾಹಿಸುವಂತೆ ಅಡ್ಡಂಡ ಕಾರ್ಯಪ್ಪ ಮನವಿ ಮಾಡಿದರು.

ಶಾಸಕ ಜಿ.ಬಿ. ಜೋತಿಗಣೇಶ್ ಮಾತನಾಡಿ, ರಂಗಭೂಮಿಯಲ್ಲಿ ಸುಮಾರು 40 ವರ್ಷಗಳಿಂದ ಕೆಲಸ ಮಾಡಿದ ಅಡ್ಡಂಡ ಕಾರ್ಯಪ್ಪ ಅವರ ನಿರ್ದೇಶನದಲ್ಲಿ ದಾಮೋದರ್‌ ವೀರ ಸಾರ್ವಕರ್‌ ಅವರ ಜೀವನ ಆಧಾರಿತ ಕಪ್ಪು ನೀರಿನ ವೀರ ನಾಟಕ ಆಯೋಜಿಸಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ವೀಕ್ಷಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜನಕಲ್ಯಾಣ ಟ್ರಸ್ಟ್‌ನ ಗೋವಿಂದರಾವ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪಗೌಡ, ಅನಿತಾ ಕಾರ್ಯಪ್ಪ ಉಪಸ್ಥಿತರಿದ್ದರು.ಫೊಟೊ

ಸುದ್ದಿಗೋಷ್ಠಿಯಲ್ಲಿ ಅಡ್ಡಂಡ ಕಾರ್ಯಪ್ಪ ಮಾತನಾಡಿದರು.