ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸಿ.ಬಿ ಸುರೇಶ್ ಬಾಬುರವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ನಂಜಾವಧೂತ ಶ್ರೀಗಳು, ಪ್ರತಿಷ್ಠೆ ಮತ್ತು ವೈಯಕ್ತಿಕ ಕಾರಣಗಳಿಂದ ದೊಡ್ಡ ಅಗ್ರಹಾರ ಮತ್ತು ಗೋಪಾಲದೇವರಹಳ್ಳಿ ಕೆರೆಗಳನ್ನು ನೀರಾವರಿ ಯೋಜನೆಗಳಿಂದ ಕೈ ಬಿಡಲಾಗಿದೆ. ಈ ಬಗ್ಗೆ ತಾವು ತಕ್ಷಣ ಗಮನಹರಿಸಿ ಈ ಭಾಗದ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಶಾಸಕರಿಗೆ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ
ದೊಡ್ಡ ಅಗ್ರಹಾರ, ಗೋಪಾಲ ದೇವರಹಳ್ಳಿ ಕೆರೆಗಳು ಎತ್ತಿನಹೊಳೆ, ಹೇಮಾವತಿ, ಅಪ್ಪರ ಭದ್ರ ನೀರಾವರಿ ಯೋಜನೆಗಳಿಂದ ವಂಚಿತರಾಗಿದ್ದು, ಬರದ ಬೇಗೆಯಿಂದ ಬಳಲುತ್ತಿರುವ ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ತಕ್ಷಣ ಎತ್ತಿನಹೊಳೆ, ಹೇಮಾವತಿ ನೀರಾವರಿ ಯೋಜನೆಯಲ್ಲಿ ನೀರು ಬಿಡಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಶಿರಾ ತಾಲೂಕಿನ ದೊಡ್ಡ ಅಗ್ರಹಾರ, ಗೋಪಾಲದೇವರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವಾರು ಗ್ರಾಮಗಳ ನೂರಾರು ರೈತರು ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿಗಳನ್ನು ಭೇಟಿ ಮಾಡಿ ಮನವಿ ಮಾಡಿದರು.ರೈತರ ಮನವಿಗೆ ಸ್ಪಂದಿಸಿದ ನಂಜಾವಧೂತ ಶ್ರೀಗಳು, ಕೇಂದ್ರ ರೈಲ್ವೆ ಸಚಿವ, ತುಮಕೂರು ಸಂಸದ ವಿ. ಸೋಮಣ್ಣರವರನ್ನು ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿ, ದೊಡ್ಡ ಅಗ್ರಹಾರ ಗೋಪಾಲದೇವರಹಳ್ಳಿ ಗ್ರಾಮ ಪಂಚಾಯಿತಿಯ ಹಲವಾರು ಕೆರೆಗಳು ತಾರತಮ್ಯ ನೀತಿಯಿಂದ ನೀರಾವರಿ ಯೋಜನೆಯಲ್ಲಿ ವಂಚಿತವಾಗಿದ್ದು, ಕುಡಿಯುವ ನೀರಿಗೂ ಹಾಹಾಕಾರ ಪಡುವಂಥ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ತಕ್ಷಣ ರಾಜ್ಯ ಸರ್ಕಾರದ ಗಮನ ಸೆಳೆದು ಈ ಕೆರೆಗಳನ್ನು ನೀರಾವರಿ ಯೋಜನೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ವಿ. ಸೋಮಣ್ಣ ತಕ್ಷಣ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿರವರ ಗಮನಕ್ಕೆ ತಂದು ಎತ್ತಿನಹೊಳೆ, ಹೇಮಾವತಿ ನೀರಾವರಿ ಯೋಜನೆಯಲ್ಲಿ ಕೈ
ಬಿಟ್ಟು ಹೋಗಿರುವ ದೊಡ್ಡ ಅಗ್ರಹಾರ ಮತ್ತು ಗೋಪಾಲದೇವರಹಳ್ಳಿ ಕೆರೆಗಳನ್ನು ಸೇರ್ಪಡೆಗೊಳಿಸಿ ಜನರಿಗೆ ಅನುಕೂಲ ಕಲ್ಪಿಸುವುದಾಗಿ ಭರವಸೆ ನೀಡಿದರು.ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸಿ.ಬಿ ಸುರೇಶ್ ಬಾಬುರವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ನಂಜಾವಧೂತ ಶ್ರೀಗಳು, ಪ್ರತಿಷ್ಠೆ ಮತ್ತು ವೈಯಕ್ತಿಕ ಕಾರಣಗಳಿಂದ ದೊಡ್ಡ ಅಗ್ರಹಾರ ಮತ್ತು ಗೋಪಾಲದೇವರಹಳ್ಳಿ ಕೆರೆಗಳನ್ನು ನೀರಾವರಿ ಯೋಜನೆಗಳಿಂದ ಕೈ ಬಿಡಲಾಗಿದೆ. ಈ ಬಗ್ಗೆ ತಾವು ತಕ್ಷಣ ಗಮನಹರಿಸಿ ಈ ಭಾಗದ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಶಾಸಕರಿಗೆ ಹೇಳಿದರು.
ಶ್ರೀಗಳ ಮಾತಿಗೆ ಸ್ಪಂದಿಸಿ ಮಾತನಾಡಿದ ಶಾಸಕ ಸಿ. ಬಿ.ಸುರೇಶ್ ಬಾಬು ರವರು, ಈ ಬಗ್ಗೆ ಈಗಾಗಲೇ ಇಂಜಿನಿಯರ್ ಗಳನ್ನು ಕರೆಸಿಕೊಂಡು ಕೆರೆಗಳಿಗೆ ನೀರು ಹರಿಸುವ ಬಗ್ಗೆ ಸರ್ವೇ ಮಾಡಿಸುತ್ತಿದ್ದೇನೆ. ರೈತರ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸುವುದು ನನ್ನ ಜವಾಬ್ದಾರಿಯಾಗಿದ್ದು ದೊಡ್ಡ ಅಗ್ರಹಾರ ಮತ್ತು ಗೋಪಾಲದೇವರ ಹಳ್ಳಿ ಕೆರೆಗಳಿಗೆ ನೀರು ಹರಿಸುವುದು ನಮ್ಮ ಹೊಣೆಗಾರಿಕೆಯಾಗಿದ್ದು, ಶ್ರೀಗಳ ರೈತ ಮತ್ತು ಜನಪರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ರಾಮಕೃಷ್ಣಪ್ಪ, ಪುಟ್ಟರಾಜು, ಯರಮಾದನಹಳ್ಳಿ ಟಿ. ಜಗದೀಶ್, ಆಡಿಟರ್ ನಾಗರಾಜ್ ,ಕೆಂಚಗಾ ನಹಳ್ಳಿ ಹನುಮಂತರಾಯಪ್ಪ, ದೊಡ್ಡ ಅಗ್ರಹಾರ ರಮೇಶ್, ಚನ್ನೇಗೌಡ, ಕುಮಾರ್, ಬಸವರಾಜು, ಕಂಬಯ್ಯ ಸೇರಿದಂತೆ ಹಲವರು ಹಾಜರಿದ್ದರು.
.