ಕನ್ನಡಪ್ರಭ ವಾರ್ತೆ ಬೇಲೂರು

ರೈತರು ಉತ್ತಮ ಬೆಳೆ ಬೆಳೆಯಲಿ ಎಂಬ ಉದ್ದೇಶದಿಂದ ಸರ್ಕಾರ ಕೇಂದ್ರ ಪುರಸ್ಕೃತ ಯೋಜನೆಯಡಿ ಅಲಸಂದೆ ಬೆಳೆ ಪ್ರಾತ್ಯಕ್ಷಿಕೆ ಹಾಗೂ ಬಿತ್ತನೆ ಬೀಜವನ್ನು ಕೃಷಿ ಇಲಾಖೆಯಿಂದ ವಿತರಿಸುತಿದ್ದು, ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕೆ ಎಚ್. ಕೆ. ಸುರೇಶ್ ಹೇಳಿದರು.

ತಾಲೂಕಿನ ದೊಡ್ಡಕೋಡಿಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೆಂದ್ರದಲ್ಲಿ ಅಲಸಂದೆ ಬೆಳೆ ಪ್ರಾತ್ಯಕ್ಷಿಕೆ ಹಾಗೂ ಬಿತ್ತನೆ ಬೀಜ ವಿತರಣೆ, ಮುಸುಕಿನ ಜೋಳದ ಬಿಳಿಸುಳಿ ತೋಗ ತಡೆಗೆ ಅನುಸರಿಸಬೇಕಾದ ಹತೋಟಿ ಕ್ರಮ ಹಾಗೂ ಯೂರಿಯಾ ಗೊಬ್ಬರ ಬಳಕೆ ದುಷ್ಪರಿಣಾಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆಲ ರೈತರು ೩ ತಿಂಗಳ ಬೆಳೆಯನ್ನು ಕೇವಲ ೧ ತಿಂಗಳಲ್ಲಿ ಬೆಳೆಯಲು ಮುಂದಾಗುತ್ತಿದ್ದು ಆಹಾರ ಬೆಳೆಗಳು ವಿಷವಾಗಿ ಮಾರ್ಪಡುತ್ತಿವೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಇಲ್ಲ. ಆದ್ದರಿಂದ ರೈತರು ಸರ್ಕಾರ ವಿತರಿಸುವ ಗುಣಮಟ್ಟದ ಬಿತ್ತನೆ ಬೀಜಗಳನ್ನು ಹಾಗೂ ಗೊಬ್ಬರವನ್ನು ಬಳಸಿ ಬೆಳೆ ಬೆಳೆಯಲು ಮುಂದಾಗಬೇಕು ಎಂದರು.

ನಮ್ಮ ತಾಲೂಕಿನಲ್ಲಿ ಶೇಕಡ ೮೦ರಷ್ಟು ರೈತರು ಬೆಳೆದ ಬೆಳೆಗೆ ನಿಖರವಾದ ಬೆಲೆ ಇಲ್ಲ. ಆದ್ದರಿಂದ ರೈತರು ಬೇರೆ ಬೇರೆ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬೇಕು. ಇತ್ತೀಚೆಗೆ ಅಡಗೂರು-ತಿರುಮನಹಳ್ಳಿ ಭಾಗದಲ್ಲಿ ಆಲಿಕಲ್ಲು ಮಳೆಗೆ ರೈತರು ಬೆಳೆದ ಸಿಹಿ ಕುಂಬಳ ಹಾಳಾಗಿದೆ. ಪುರಸ್ಕೃತ ಯೋಜನೆಯಡಿ ಅಲಸಂದೆ ಬೆಳೆ ಪ್ರಾತ್ಯಕ್ಷಿಕೆ ಹಾಗೂ ಬಿತ್ತನೆ ಬೀಜವನ್ನು ಪಡೆದ ರೈತರು ಬಿತ್ತು ಉತ್ತಮ ಬೆಳೆ ಬೆಳೆಯಲು ಮುಂದಾಗಬೇಕು ಎಂದರು.


ಉಪ ಕೃಷಿ ನಿರ್ದೇಶಕ ಪ್ರಭಾಕರ್‌ ಬಿ. ಎನ್ ಮಾತನಾಡಿ, ನಾವು ಇಂದು ವಿದೇಶದಿಂದ ಬಿತ್ತನೆ ಬೀಜಗಳನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ದೇಶಕ್ಕೆ ಹೆಚ್ಚು ಹಣ ನಷ್ಟವಾಗುತ್ತಿದೆ. ಆದ್ದರಿಂದ ನಾವೇ ಬಿತ್ತನೆ ಬೀಜ ಉತ್ಪಾದನೆ ಮಾಡಿದರೆ ಅನುಕೂಲವಾಗುತ್ತದೆ ಎಂಬ ನಿಟ್ಟಿನಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು ಎಂಬ ಉದ್ದೇಶದಿಂದ ಈ ಪ್ರದೇಶಕ್ಕೆ ಅನುಗುಣವಾಗಿ ೧೨೫ ಜನರಿಗೆ ದ್ವಿದಳ ಧಾನ್ಯಗಳನ್ನು ವಿತರಿಸುತಿದ್ದೇವೆ. ಜತೆಗೆ ಇಂದು ರೈತರು ಹೆಚ್ಚು ರಸಾಯನಿಕ ಗೊಬ್ಬರ ಬಳಸುತ್ತಿರುವುದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದೆ. ಈ ಬಗ್ಗೆ ಚಿಂತಿಸಿ ಗೊಬ್ಬರ ಬಳಸಬೇಕು ಎಂದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹುಲ್ಲಣ್ಣ ಗೌಡ, ಸಹಾಯಕ ಕೃಷಿ ನಿರ್ದೇಶಕ ಕಾಂತರಾಜು, ತಾಂತ್ರಿಕ ಅಧಿಕಾರಿ ಕಾರ್ತಿಕ್, ಕೃಷಿ ಅಧಿಕಾರಿ ಹೇಮಂತ್ ಕುಮಾರ್‌, ತಾಂತ್ರಿಕ ವ್ಯವಸ್ಥಾಪಕರಾದ ಲತಾ, ಅನುಷಾ, ಬಸವರಾಜು ಪ್ರಕಾಶ್, ಮಂಜುನಾಥ್, ಧರ್ಮಪ್ಪ ಲಕ್ಷ್ಮೀಶ ಇತರರಿದ್ದರು.