ಒಂದು ಟನ್ ಮಾವು ಬೆಳೆಯಲು ಹತ್ತರಿಂದ ಹದಿನೈದು ಸಾವಿರ ಖರ್ಚಾಗುತ್ತಿದೆ ನಂತರದಲ್ಲಿ ಅದನ್ನು ಕೊಯ್ಲು ಮಾಡಿ ತಂದು ಮಂಡಿಗೆ ಹಾಕಿದರೆ ಖರ್ಚು, ಕಮೀಷನ್ ಎಲ್ಲಾ ಹೋಗಿ ಒಂದು ಟನ್ನಿಗೆ ಕೇವಲ ಇನ್ನೂರು ರು. ಮಾತ್ರ ಉಳಿಯುತ್ತದೆ. ಮಾವನ್ನು ಈ ಭಾಗದಲ್ಲಿ ಜೀವನಾಡಿ ಬೆಳೆಯಾಗಿ ಸಾವಿರ ಸಾವಿರ ಕುಟುಂಬಗಳು ನಂಬಿದ್ದು ಇವತ್ತು ಅಸಹಾಯಕತೆಯಿಂದ ನರಳುತ್ತಿದ್ದಾರೆ ಎಂದು ಮಾವು ಬೆಳೆಗಾರರ ಸಮಸ್ಯೆಗಳ ಸರಮಾಲೆಯನ್ನು ಬಿಡಿಸಿಟ್ಟರು.
ಶ್ರೀನಿವಾಸಪುರ: ವಾರಂತ್ಯದ ಒಳಗಾಗಿ ಮಾವಿಗೆ ಬೆಂಬಲ ಬೆಲೆ ಘೋಷಿಸದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ರೈತ ಮುಖಂಡರು ಎಚ್ಚರಿಸಿದರು.ಮಂಗಳವಾರ ಕಾರ್ಮಿಕ ಸಂಘಟನೆ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನಿಲಟೂರು ಚಿನ್ನಪ್ಪರೆಡ್ಡಿ ಮಾತನಾಡಿ ಒಂದು ಟನ್ ಮಾವು ಬೆಳೆಯಲು ಹತ್ತರಿಂದ ಹದಿನೈದು ಸಾವಿರ ಖರ್ಚಾಗುತ್ತಿದೆ ನಂತರದಲ್ಲಿ ಅದನ್ನು ಕೊಯ್ಲು ಮಾಡಿ ತಂದು ಮಂಡಿಗೆ ಹಾಕಿದರೆ ಖರ್ಚು, ಕಮೀಷನ್ ಎಲ್ಲಾ ಹೋಗಿ ಒಂದು ಟನ್ನಿಗೆ ಕೇವಲ ಇನ್ನೂರು ರು. ಮಾತ್ರ ಉಳಿಯುತ್ತದೆ. ಮಾವನ್ನು ಈ ಭಾಗದಲ್ಲಿ ಜೀವನಾಡಿ ಬೆಳೆಯಾಗಿ ಸಾವಿರ ಸಾವಿರ ಕುಟುಂಬಗಳು ನಂಬಿದ್ದು ಇವತ್ತು ಅಸಹಾಯಕತೆಯಿಂದ ನರಳುತ್ತಿದ್ದಾರೆ ಎಂದು ಮಾವು ಬೆಳೆಗಾರರ ಸಮಸ್ಯೆಗಳ ಸರಮಾಲೆಯನ್ನು ಬಿಡಿಸಿಟ್ಟರು.ಇಂತಹ ಸಂದರ್ಭದಲ್ಲಿ ಸರ್ಕಾರಗಳು ಬೆಳೆಗಾರನ ಕೈಹಿಡಿಯುವ ಅವಶ್ಯಕತೆ ಇದೆ. ಇದಕ್ಕಾಗಿ ಪ್ರತಿ ಟನ್ ಮಾವಿನಕಾಯಿಗೆ ಕನಿಷ್ಠ ಹತ್ತು ಸಾವಿರ ಬೆಂಬಲ ಬೆಲೆ ನೀಡಬೇಕಿದೆ. ಮಾವು ಕೊಯ್ಲು ಅರ್ದ ಭಾಗ ಮುಗಿದಿದೆ. ಸಣ್ಣ-ಪುಟ್ಟ ಮಾವು ಬೆಳೆಗಾರರು ಕೊಯ್ಲು ಮಾಡಲು ಆರ್ಥಿಕ ಸಾಮರ್ಥ್ಯ ಇಲ್ಲದೆ ಮರದಲ್ಲೆ ಮಾವನ್ನು ಬಿಡುತ್ತಿದ್ದಾರೆ. ಈ ಎಲ್ಲಾ ವಿದ್ಯಮಾನ್ಯಗಳ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದೆ. ಆದರೂ ಸರ್ಕಾರ ಈ ಕುರಿತಾಗಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬೆಂಬಲ ಬೆಲೆ ಘೋಷಣೆ ಮಾಡಿಲ್ಲ ಎಂದು ಆರೋಪಿಸಿದರು.ಮಾವು ಬೆಳೆಗಾರರ ಸಂಘದ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್ ಮಾತನಾಡಿ ಮಾವು ಬೆಳೆಗಾರರ ಸಮಸ್ಯೆ ಕುರಿತಂತೆ ಸರ್ಕಾರ ಈ ತಕ್ಷಣ ನಿಲವು ಪ್ರಕಟಿಸಬೇಕು. ಬೆಂಬಲ ಬೆಲೆ ವಿಚಾರವಾಗಿ ಆದ್ಯತೆ ಮೇರೆಗೆ ನಿರ್ಧಾರ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಈ ತಿಂಗಳ 19 ನಂತರ ಜಿಲ್ಲೆಯ ಎಲ್ಲಾ ರೈತ ಸಂಘಟನೆಗಳು ಒಗ್ಗೂಡಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ಸುದ್ಧಿಗೋಷ್ಠಿಯಲ್ಲಿ ಪ್ರಾಂತ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸೂರ್ಯನಾರಾಯಣ್, ಪಾರೂಖ್, ರೈತ ಸಂಘದ ಈರಪ್ಪರೆಡ್ಡಿ, ಬೈರೆಡ್ಡಿ ಮುಂತಾದವರು ಇದ್ದರು.