2ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ

| Published : Nov 21 2025, 01:15 AM IST

2ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲಾ ಭಾಗ್ಯಗಳ ಜೊತೆಗೆ ವೇತನಾನುದಾನ ಭಾಗ್ಯ ನೀಡುವಂತೆ ಒತ್ತಾಯಿಸಿ ಬುಧವಾರದಿಂದ ರಾಜ್ಯ ಅನುದಾನರಹಿತ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟದಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ 2ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಾಣತ್ಯಾಗಕ್ಕೂ ಸಿದ್ಧ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ: ಎಲ್ಲಾ ಭಾಗ್ಯಗಳ ಜೊತೆಗೆ ವೇತನಾನುದಾನ ಭಾಗ್ಯ ನೀಡುವಂತೆ ಒತ್ತಾಯಿಸಿ ಬುಧವಾರದಿಂದ ರಾಜ್ಯ ಅನುದಾನರಹಿತ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟದಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ 2ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಾಣತ್ಯಾಗಕ್ಕೂ ಸಿದ್ಧ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಹೋರಾಟ ತಾರಕಕ್ಕೇರಿದ್ದು, ಮೂವರು ಶಿಕ್ಷಕರು, ಓರ್ವ ಶಿಕ್ಷಕಿ ಅಸ್ವಸ್ಥರಾಗಿ ಕುಸಿದುಬಿದ್ದ ಘಟನೆ ನಡೆದಿದ್ದು, ಸ್ಥಳಕ್ಕೆ ಶಾಸಕ ಎಸ್.ಎನ್.ಚನ್ನಬಸಪ್ಪ, ಡಾ.ಧನಂಜಯ ಸರ್ಜಿ ಭೇಟಿನೀಡಿ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಬಿ.ಸಿ.ಶಿವಪ್ಪ, 1995ರಿಂದ 2005ರ ವರೆಗೆ ಅನುದಾನರಹಿತ ಕನ್ನಡ ಮಾಧ್ಯಮ ಎಲ್ಲಾ ಶಾಲಾ-ಕಾಲೇಜುಗಳಿಗೆ ಎಲ್ಲಾ ಭಾಗ್ಯಗಳ ಜೊತೆ ವೇತನಾನುದಾನ ನೀಡುವಂತೆ ಕೋರಿ ಕಳೆದ 30 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಹಲವು ಬಾರಿ ಮನವಿ ನೀಡಿದ್ದೇವೆ. ಸಚಿವ ಮಧುಬಂಗಾರಪ್ಪ ಕೂಡ ರಾಜ್ಯೋತ್ಸವಕ್ಕೆ ಕನ್ನಡ ಶಾಲೆಯ ಉಳಿವಿಗಾಗಿ ನಮಗೆಲ್ಲರಿಗೂ ಶುಭ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದರು. ಆದರ ಆ ಭರವಸೆ ವಿಫಲವಾಗಿದೆ. ನಮಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಒಂದೇ ದಾರಿ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

10 ದಿನಗಳ ಹಿಂದೆಯೇ ಪತ್ರಿಕಾಗೋಷ್ಠಿ ಮೂಲಕ ಶಿಕ್ಷಣ ಸಚಿವರ ತವರೂರಿನಲ್ಲಿ ಮಾಡು ಇಲ್ಲವೇ ಮಡಿ ರಾಜ್ಯಮಟ್ಟದ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದೆವು. ಸೌಜನ್ಯಕ್ಕಾಗಿ ಆದರೂ ಶಿಕ್ಷಣ ಸಚಿವರು ಸ್ಥಳಕ್ಕೆ ಬಂದಿಲ್ಲ. ದೂರವಾಣಿ ಮೂಲಕವೂ ಮಾತನಾಡಿಲ್ಲ. ನಿನ್ನೆಯಿಂದ ರಾತ್ರಿಯಿಡಿ ಸೊಳ್ಳೆಯಿಂದ ಕಚ್ಚಿಸಿಕೊಂಡು ಚಳಿಯಲ್ಲಿ ನಡುಗುತ್ತಾ ಹೋರಾಟ ಮಾಡಿದರೂ ಕನಿಷ್ಠಪಕ್ಷ ಇಲ್ಲಿ ಒಂದು ದೀಪದ ವ್ಯವಸ್ಥೆ ಮಾಡಿಲ್ಲ. ಮಹಿಳಾ ಹೋರಾಟಗಾರರಿಗೆ ಶೌಚಾಲಯ ವ್ಯವಸ್ಥೆಯಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಶಿಕ್ಷಕರಿಗೆ ಈ ರೀತಿಯ ವ್ಯವಸ್ಥೆಯಾದರೆ ನಮ್ಮ ಸಮಸ್ಯೆ ಬಗೆಹರಿಯುವುದು ಸಾಧ್ಯವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.ಶಿಕ್ಷಕಿಯೋರ್ವರು ತಾನು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೆ ಕೊಟ್ಟರು. ಇನ್ನೂ ಕೆಲವರು ನೀವು ಬೇಡಿಕೆ ಈಡೇರಿಸದಿದ್ದರೆ ನಮಗೆ ವಿಷಕೊಟ್ಟು ಸಾಯಿಸಿ ಎಂದರು. ಒಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹೈಡ್ರಾಮಾ ನಡೆಯಿತು. ಪೊಲೀಸರು ನಿನ್ನೆಯಿಂದಲೇ ಭದ್ರತೆ ಒದಗಿಸಿ ಸುಸ್ತಾಗಿದ್ದರು. ಎಷ್ಟು ಮನವಿ ಮಾಡಿದರೂ ಶಾಸಕರಾದಿಯಾಗಿ ಎಲ್ಲರೂ ಮನವಿ ಮಾಡಿದರೂ ಬಿಸಿಲಿನಲ್ಲೇ ತಮ್ಮ ಹೋರಾಟ ಮುಂದುವರಿಸಿದರು.ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ತಮ್ಮೆಲ್ಲಾ ಸಮಸ್ಯೆಯ ಅರಿವಿದೆ. ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಸಚಿವರು ಸ್ಪಂದಿಸಿದ್ದಾರೆ. ದಯವಿಟ್ಟು ನಿರಸನ ವಾಪಾಸ್ ಪಡೆಯಿರಿ ಎಂದು ವಿನಂತಿಸಿದರು.ಬೆಳಗಾವಿ ಅಧಿವೇಶನದಲ್ಲಿ ನಿಮ್ಮ ಸಮಸ್ಯೆಗೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದರು. ಆ ಸಂದರ್ಭದಲ್ಲಿ ಮಹಿಳಾ ಶಿಕ್ಷಕಿಯೊಬ್ಬರು ಕುಸಿದು ಬಿದ್ದರು. ಅವರನ್ನು ಶಾಸಕರೇ ಆಂಬ್ಯುಲೆನ್ಸ್‌ನಲ್ಲಿ ಚಿಕಿತ್ಸೆಗೆ ಕಳುಹಿಸಿಕೊಟ್ಟ ಘಟನೆಯೂ ನಡೆಯಿತು.ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ ಶಾಸಕರು ತಮ್ಮ ಪಕ್ಷದ ನಾಯಕರು ಹಾಗೂ ಶಾಸಕರ ಗಮನಕ್ಕೂ ತಂದರು. ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ನಂತರ ಬಂದ ವಿಧಾನ ಪರಿಷತ್‌ ಸದಸ್ಯ ಡಾ.ಧನಂಜಯ ಸರ್ಜಿ ಕೂಡ ಸಾಂತ್ವಾನ ಹೇಳಿ, ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದರು. ಖುದ್ಧಾಗಿ ಸಚಿವರ ಜೊತೆಗೆ ಮಾತನಾಡಿ, ಸಮಸ್ಯೆಯ ಬಗ್ಗೆ ವಿವರಿಸಿದರು.ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳು ಮತ್ತು ವಿವಿಧ ಜಿಲ್ಲೆಗಳಿಂದ ಬಂದ ಶಿಕ್ಷಕ ಪ್ರಮುಖರು ಉಪಸ್ಥಿತರಿದ್ದರು. ನವ ಕರ್ನಾಟಕ ನಿರ್ಮಾಣ ವೇದಿಕೆಯ ಗೋ.ರಮೇಶ್‌ಗೌಡ ಮತ್ತಿತರರು ಬೆಂಬಲ ವ್ಯಕ್ತಪಡಿಸಿದರು. ನನಗೆ ಸಮಸ್ಯೆಯ ಆಳದ ಅರಿವಿದೆಹೋರಾಟಗಾರರಿಂದ ಮನವಿ ಪಡೆದು ಮಾತನಾಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ನಾನು ಈಗಾಗಲೇ ಸಚಿವರ ಗಮನಕ್ಕೆ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ನನ್ನ ತಾಯಿ ಕೂಡ ಓರ್ವ ಶಿಕ್ಷಕಿಯಾಗಿದ್ದಾಳೆ. ನನಗೆ ಸಮಸ್ಯೆಯ ಆಳದ ಅರಿವಿದೆ ಎಂದು ಹೇಳಿದರು.

ಶೌಚಾಲಯ ಮತ್ತು ವಿದ್ಯುತ್ ಅವ್ಯವಸ್ಥೆ ಬಗ್ಗೆ ನನ್ನ ಗಮನಕ್ಕೆ ಬಂದಿರಲಿಲ್ಲ. ಇಲ್ಲಿ ರಾತ್ರಿ ಹೋರಾಟಗಳಿಗೆ ಅವಕಾಶವಿಲ್ಲ. ಆದರೂ ಮಹಿಳೆಯರು ಇರುವುದರಿಂದ ಸೂಕ್ತ ವ್ಯವಸ್ಥೆ ಮಾಡಲಾಗುವುದು. ನಮ್ಮಿಂದ ಎಲ್ಲಾ ಸಹಕಾರ ನೀಡುತ್ತೇವೆ. ದಯವಿಟ್ಟು ಹೋರಾಟ ವಾಪಾಸ್ಸು ಪಡೆಯಿರಿ. ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ಪಟ್ಟು ಸಡಿಲಿಸದ ಪ್ರತಿಭಟನಾಕಾರರುಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಅಧಿಕಾರಿಗಳು ಪ್ರತಿಭಟನಾಕಾರರನ್ನು ಮನವೊಲಿಸಲು ಎಷ್ಟೇ ಪ್ರಯತ್ನ ಮಾಡಿದರೂ ಬಗ್ಗದ ಕನ್ನಡ ಶಿಕ್ಷಕರ ಒಕ್ಕೂಟದ ಪದಾಧಿಕಾರಿಗಳು, ಶಿಕ್ಷಣ ಸಚಿವರೇ ಇಲ್ಲಿಗೆ ಬರಬೇಕು. ನಮಗೆ ಲಿಖಿತ ಭರವಸೆ ನೀಡಬೇಕು. ನಾವು ಸತ್ತರೂ ಪರವಾಗಿಲ್ಲ ನಮಗೆ ಆಶ್ವಾಸನೆಗಳನ್ನು ಕೇಳಿ ಕೇಳಿ ಸಾಕಾಗಿದೆ. ಕನಿಷ್ಠ ನೇರವಾಗಿ ಹೋರಾಟಗಾರರೊಂದಿಗೆ ಖುದ್ದು ಸಚಿವರೇ ಮಾತನಾಡುವತನಕ ನಾವು ಹೋರಾಟ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದು ಕೂತು ಹೋರಾಟ ಮುಂದುವರಿಸಿದ್ದಾರೆ.