ಸಾರಾಂಶ
ಯುವ ಜನತೆ ಫಾಸ್ಟ್ ಫುಡ್, ಜಂಕ್ ಪುಡ್, ಶೇಖರಿಸಿದ ಪಾನೀಯ ಕುಡಿದು ಅಪ್ರಾಪ್ತ ವಯಸ್ಸಿನಲ್ಲಿಯೇ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಶೋಚನೀಯ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ ಹೇಳಿದರು.
ಮುಂಡರಗಿ: ಯುವ ಜನತೆ ಫಾಸ್ಟ್ ಫುಡ್, ಜಂಕ್ ಪುಡ್, ಶೇಖರಿಸಿದ ಪಾನೀಯ ಕುಡಿದು ಅಪ್ರಾಪ್ತ ವಯಸ್ಸಿನಲ್ಲಿಯೇ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಶೋಚನೀಯ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ ಹೇಳಿದರು.
ಅವರು ಬುಧವಾರ ಪಟ್ಟಣದ ಜಗದ್ಗುರು ತೋಂಟದಾರ್ಯ ಸಿಬಿಎಸ್ಇ ಶಾಲೆಯಲ್ಲಿ ಮಲೇರಿಯಾ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಆರೋಗ್ಯಯುತ ಸಮಾಜಕ್ಕೆ ಶುದ್ಧ ಗಾಳಿ, ನೀರು, ಪೌಷ್ಟಿಕ ಆಹಾರ ಒಳ್ಳೆಯ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಆದ್ದರಿಂದ ಇಂದಿನ ಯುವ ಜನತೆ ಜಂಕ್ ಫುಡ್, ಫಾಸ್ಟ್ ಪುಡ್ ಗಳಿಂದ ದೂರ ಇರುವ ಮೂಲಕ ಉತ್ತಮ ಆರೋಗ್ಯ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಡಾ.ನಿತಿನ್ ಸ್ವರೂಪ್ ಮಾತನಾಡಿ, ಕೊರೋನಾ ವೈರಸ್ ಮಹಾಮಾರಿಗೆ ಚಿಕಿತ್ಸೆ ಕಂಡು ಹಿಡಿದು ಸಾಮಾಜಿಕ ಅಂತರ ಕಾಯ್ದುಕೊಂಡು ಆರೋಗ್ಯವಾಗಿದ್ದೇವೆ. ನಿಂತ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಆ ಸೊಳ್ಳೆಗಳು ಕಚ್ಚುವುದರಿಂದ ಡೆಂಘೀ, ಮಲೇರಿಯಾ, ಚಿಕೂನ್ ಗುನ್ಯಾ ಸೇರಿದಂತೆ ಆರು ಮಾರಕ ರೋಗಗಳು ಬರುತ್ತವೆ. ಆದ್ದರಿಂದ ನಿತ್ಯ ಒಳ್ಳೆಯ ಆರೋಗ್ಯದಿಂದಿರಬೇಕಾದರೆ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛ ಹಾಗೂ ಶುದ್ಧವಾಗಿಟ್ಟುಕೊಳ್ಳಬೇಕು.ನಾವು ಬಳಕೆ ಮಾಡಲು ಶೇಖರಿಸುವ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು ಎಂದರು.ಶಾಲಾ ಪ್ರಾಚಾರ್ಯ ಶರಣಕುಮಾರ ಬುಗಟಿ ಅಧ್ಯಕ್ಷತೆವಹಿಸಿ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಪ್ರತಿ ನಿತ್ಯ ಬೇಗ ಎದ್ದು ಯೋಗ, ವ್ಯಾಯಾಮ, ಪ್ರಾಣಾಯಾಮ ಮಾಡಿ ಸತ್ವಯುತ ಆಹಾರ, ತರಕಾರಿ, ಹಣ್ಣುಗಳ ಸೇವನೆ ಹಾಗೂ ಒಳ್ಳೆಯ ಹವ್ಯಾಸ ರೂಢಿಸಿಕೊಂಡು ಉತ್ತಮ ಆರೋಗ್ಯವಂತರಾಗಿ ಸ್ವಸ್ಥ ಸಮಾಜ ನಿರ್ಮಾಣ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಸಹಾಯಕ ಹರ್ಷವರ್ಧನ ದೊಡ್ಡಮನಿ, ಶೋಭಾ ಮದ್ದಿನ, ಪ್ರತಿಭಾ ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ, ಮಕ್ಕಳು ಉಪಸ್ಥಿತರಿದ್ದರು, ವಿಶಾಲಾಕ್ಷಿ ವಾಲಿ ನಿರೂಪಿಸಿ, ವಂದಿಸಿದರು.