ಉಪ್ಪಿನಂಗಡಿ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ತಂದೆ ಚೂರಿ ಇರಿತಕ್ಕೆ ಒಳಗಾದ ಸ್ಥಿತಿಯಲ್ಲಿ ಹಾಗೂ 17 ರ ಹರೆಯದ ಮಗ ಕೋವಿಯ ಗುಂಡೇಟಿಗೆ ಸಿಲುಕಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶನಿವಾರ ಸಂಜೆ ಸಂಭವಿಸಿದೆ.
ಉಪ್ಪಿನಂಗಡಿ: ಉಪ್ಪಿನಂಗಡಿ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ತಂದೆ ಚೂರಿ ಇರಿತಕ್ಕೆ ಒಳಗಾದ ಸ್ಥಿತಿಯಲ್ಲಿ ಹಾಗೂ 17 ರ ಹರೆಯದ ಮಗ ಕೋವಿಯ ಗುಂಡೇಟಿಗೆ ಸಿಲುಕಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶನಿವಾರ ಸಂಜೆ ಸಂಭವಿಸಿದೆ.ಮೂಲತಃ ಕಾಸರಗೋಡು ಪರಿಸರದ ನಿವಾಸಿಯಾಗಿರುವ ವಸಂತ ಅಮೀನ್ (50) ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಕೃಷಿ ಭೂಮಿ ಖರೀದಿಸಿ ಅದರಲ್ಲಿದ್ದ ಹಳೇಯದಾದ ಮನೆಯಲ್ಲಿ ವಾಸವಾಗಿದ್ದರು. ಮನೆಯಲ್ಲಿ ಶನಿವಾರ ಸಂಜೆ ವಸಂತ ಅಮೀನ್ ಅವರು ಪರಿಚಯಸ್ಥರಿಗೆ ಪೋನಾಯಿಸಿ ತನ್ನ ಮಗ ಮೋಕ್ಷ್ (17) ತನಗೆ ಚೂರಿಯಿಂದ ಇರಿದಿದ್ದಾನೆ . ಹಾಗೂ ಮಗ ಗುಂಡು ಹಾರಿಸಿಕೊಂಡಿದ್ದಾನೆಂದು ತಿಳಿಸಿದ ಹಿನ್ನೆಲೆಯಲ್ಲಿ ಪರಿಚಯಸ್ಥರು ಮನೆಗೆ ಭೇಟಿ ನೀಡಿದಾಗ ವಸಂತ ಅಮೀನ್ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿದ್ದರೆಂದೂ, ಮಗ ಮೋಕ್ಷ್ ಗುಂಡೇಟಿನಿಂದ ಸಾವನ್ನಪ್ಪಿದ ಸ್ಥಿತಿಯಲ್ಲಿದ್ದನೆಂದೂ ತಿಳಿಸಲಾಗಿದೆ. ಹಾಗೂ ಗಾಯಾಳು ವಸಂತ ಅಮೀನ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಆಗಮಿಸಿದ ಮೋಕ್ಷಿತ್ ತಾಯಿ ಜಯಶ್ರೀ ಪೊಲೀಸರಿಗೆ ದೂರು ನೀಡಿದ್ದು, ತನ್ನ ಗಂಡನೇ ತನ್ನ ಮಗನನ್ನು ಕೊಂದಿರುವುದಾಗಿ ಆರೋಪಿಸಿದ್ದಾರೆ. ರಾಮಕುಂಜದ ಆಸ್ತಿಯು ತನ್ನ ಹೆಸರಿನಲ್ಲಿದ್ದು, ಅದನ್ನು ನಾನು ಗಂಡನ ಹೆಸರಿಗೆ ಬರೆದುಕೊಡಬೇಕೆಂದೂ ಗಂಡ ತಾಕೀತು ಮಾಡುತ್ತಿದ್ದನೆಂದೂ, ಅದಕ್ಕೆ ಮಗ ವಿರೋಧ ವ್ಯಕ್ತಪಡಿಸುತ್ತಿದ್ದನೆಂದೂ ಆರೋಪಿಸಿರುವ ಆಕೆ ತನ್ನೊಂದಿಗೆ ಪೆರ್ಲದಲ್ಲಿ ವಾಸವಾಗಿದ್ದ ಮಗನನ್ನು ಕಳೆದ ಒಂದು ತಿಂಗಳ ಹಿಂದೆ ರಾಮಕುಂಜಕ್ಕೆ ಕರೆದು ತಂದಿದ್ದು, ಶನಿವಾರ ವಿನಾ ಕಾರಣ ಚಿಕಿತ್ಸೆಯ ನೆಪದಲ್ಲಿ ಮಂಗಳೂರಿಗೆ ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ ಮಗ ತನಗೆ ಏನಾದರೂ ಸಮಸ್ಯೆಯಾದರೆ ತಂದೆಯೇ ಕಾರಣವೆಂದು ನನಗೆ ಪೋನಾಯಿಸಿ ತಿಳಿಸಿದ್ದನ್ನು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆಸ್ತಿಯ ವಿಚಾರದಲ್ಲಿ ವೈಮನಸ್ಸು ಮೂಡಿ ಪತ್ನಿ ಜಯಶ್ರೀ ಕಾಸರಗೊಡು ಜಿಲ್ಲೆಯ ಪೆರ್ಲದಲ್ಲಿನ ತನ್ನ ತವರು ಮನೆಯಲ್ಲಿ ವಾಸ್ತವ್ಯ ಇದ್ದು, ತನ್ನ ಏಕೈಕ ಮಗನನ್ನು ತನ್ನೊಂದಿಗೆ ಕರೆದೊಯ್ದಿದ್ದರು. ಆದರೆ ತಿಂಗಳ ಹಿಂದೆ ತಂದೆಯ ಕರೆಗೆ ಓಗೊಟ್ಟು ರಾಮಕುಂಜದ ಮನೆಗೆ ಬಂದಿದ್ದ ಮಗ ಈ ರೀತಿ ಸಾವನ್ನಪ್ಪಿರುವುದು ವಿಧಿ ಲೀಲೆ ಎನಿಸಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್ ಭೂಮರೆಡ್ಡಿ ಮಾತನಾಡಿ, ಗಾಯಾಳು ವಸಂತ ಅಮೀನ್ ನೀಡಿದ ಹೇಳಿಕೆಗೂ, ಮೃತ ಬಾಲಕನ ತಾಯಿ ನೀಡಿದ ಹೇಳಿಕೆಗೂ ಭಾರೀ ವ್ಯತ್ಯಾಸವಿದ್ದು, ಕೂಲಂಕ ತನಿಖೆಯ ಬಳಿಕವೇ ಸತ್ಯ ತಿಳಿಯಬೇಕಾಗಿದೆ ಎಂದರು. ಘಟನಾ ಸ್ಥಳಕ್ಕೆ ಗ್ರಾಮಾಂತರ ವೃತ್ತ ನಿರೀಕ್ಷಕ ನಾಗರಾಜ್ , ಕಡಬ ಎಸೈ ಭೇಟಿ ನೀಡಿದ್ದು, ತನಿಖೆ ಮುಂದುವರೆದಿದೆ.