ವಿಶ್ವದ 2ನೇ ಅತೀ ಎತ್ತರದ ಖರ್ದುಂಗ್ಲಾ ಮುಟ್ಟಿ ಬಂದ ಅಪ್ಪ ಮಗ!

| Published : Jun 28 2024, 12:54 AM IST

ಸಾರಾಂಶ

ರಾಜೇಂದ್ರ ಶೆಣೈ ಮತ್ತು ಪ್ರಜ್ವಲ್ ಶೆಣೈ ಅವರು ಈ ಸಾಹಸವನ್ನು ಮಾಡಿರುವುದು ತಮ್ಮ ನಿತ್ಯಸಂಚಾರದ 100 ಸಿಸಿಯ ಹೀರೋ ಹೊಂಡಾ ಸ್ಲ್ಪೆಂಡರ್‌ ಬೈಕ್‌ನಲ್ಲಿ ಎಂಬುದು ವಿಶೇಷವಾಗಿದೆ.

ಸ್ಲ್ಪೆಂಡರ್‌ ಬೈಕ್‌ನಲ್ಲಿ ಸಾಹಸ । ಯೋಧರಿಗೆ ನಮನ, ಕನ್ನಡ ಬಾವುಟ ಹಾರಾಟ

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಶಿರ್ವದ ರಾಜೇಂದ್ರ ಶೆಣೈ ಮತ್ತು ಮಗ ಪ್ರಜ್ವಲ್ ಶೆಣೈ ಅವರು ವಿಶ್ವದ 2ನೇ ಅತೀ ಎತ್ತರ ಪ್ರದೇಶವಾದ ಜಮ್ಮು ಕಾಶ್ಮೀರದ ಖರ್ದುಂಗ್ಲಾದಲ್ಲಿ ಕನ್ನಡ ಬಾವುಟ ಹಾರಿಸಿದ್ದಾರೆ.

ಸಾಕಷ್ಟು ಮಂದಿ ಇಂತಹ ಸಾಹಸಗಳಿಗಾಗಿಯೇ 300 ಸಿಸಿ, 400 ಸಿಸಿ ಇರುವ ಬೈಕುಗಳ ಮೂಲಕ ತೆರಳಿ ಈ ಸಾಹಸವನ್ನು ಮಾಡುತ್ತಾರೆ. ಆದರೆ ರಾಜೇಂದ್ರ ಶೆಣೈ ಮತ್ತು ಪ್ರಜ್ವಲ್ ಶೆಣೈ ಅವರು ಈ ಸಾಹಸವನ್ನು ಮಾಡಿರುವುದು ತಮ್ಮ ನಿತ್ಯಸಂಚಾರದ 100 ಸಿಸಿಯ ಹೀರೋ ಹೊಂಡಾ ಸ್ಲ್ಪೆಂಡರ್‌ ಬೈಕ್‌ನಲ್ಲಿ ಎಂಬುದು ವಿಶೇಷವಾಗಿದೆ.

ಅವರು ಜೂನ್ ಮೊದಲ ವಾರದಲ್ಲಿ ಉಡುಪಿಯಿಂದ ರೈಲಿನಲ್ಲಿ ಹೊರಟು ದೆಹಲಿ ತಲುಪಿದ್ದಾರೆ. ಅಲ್ಲಿಂದ ತಮ್ಮ ಬೈಕಿನಲ್ಲಿ ಹರ್ಯಾಣ, ಪಂಜಾಬ್, ಹಿಮಾಚಲ ಪ್ರದೇಶಗಳನ್ನು ಸುತ್ತಿ ಜಮ್ಮು ಕಾಶ್ಮೀರ ತಲುಪಿದರು. ಅಲ್ಲಿ ಲೇಹ್ ಲಡಾಖ್‌, ಕಾರ್ಗಿಲ್‌, ಮನಾಲಿ ಮೂಲಕ ಸಮುದ್ರ ಮಟ್ಟದಿಂದ ಸರಿಸುಮಾರು 17,982 ಅಡಿ ಎತ್ತರವಿರುವ ವಿಶ್ವದ 2ನೇ ಅತೀ ಎತ್ತರದ ಪ್ರದೇಶ ಖರ್ದುಂಗ್ಲಾ ತಲುಪಿದ್ದಾರೆ.

ಅವರು ಈ ಬೈಕಿನಲ್ಲಿ 10 ದಿನಗಳ ಅವಧಿಯಲ್ಲಿ ಸುಮಾರು 2,100 ಕಿ.ಮೀ. ಪ್ರಯಾಣ ಬೆಳೆಸಿದ್ದಾರೆ. ಕಾರ್ಗಿಲ್‌ಗೆ ತೆರಳಿದ್ದ ಸಂದರ್ಭದಲ್ಲಿ ಯುದ್ಧದಲ್ಲಿ ವೀರ ಮರಣ ಹೊಂದಿದ ಕ್ಯಾ.ವಿಕ್ರಮ್ ಬಾತ್ರಾ ಮತ್ತು ಇತರ ಸೈನಿಕರ ಸಮಾಧಿ ಸ್ಥಳಕ್ಕೆ ತೆರಳಿ ಶ್ರದ್ಧಾಂಜಲಿಯನ್ನೂ ಸಮರ್ಪಿಸಿದ್ದಾರೆ.

ರಾಜಸ್ಥಾನದಲ್ಲಿ 45 ಡಿಗ್ರಿ ಸೆ. ಮೈ ಸುಡುವ ಬಿಸಿಗಾಳಿಯನ್ನು ತಾಳಿಕೊಂಡು, ಜಮ್ಮುವನ್ನು -5 ಡಿಗ್ರಿ ಮೈಕೊರೆಯುವ ಚಳಿಯನ್ನು ಸಹಿಸಿಕೊಂಡ, ಜೀವಮಾನದಲ್ಲಿಯೇ ಮರೆಯಲಾಗದ ಅನುಭೂತಿಯನ್ನು ಅವರು ಪಡೆದಿದ್ದಾರೆ.

ಕಾಶ್ಮೀರದ ಗುಡ್ಡ ಪ್ರದೇಶದಲ್ಲಿ ರಸ್ತೆ ಅಗಲಕಿರಿದಾಗಿದ್ದು, ಎರಡೂ ಬದಿಯಿಂದ ಕಲ್ಲುಗಳು ಉದುರುತ್ತಿದ್ದವು. ಯಾವುದೇ ಕ್ಷಣದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತಗೊಳ್ಳುವ ಸಂಭವವಿತ್ತು. ರಸ್ತೆಯ ಎರಡೂ ಬದಿ ಆಳವಾದ ಪ್ರಪಾತವಿದ್ದು, ಸ್ವಲ್ಪ ಮೈಮರೆತರೂ ಕೆಳಕ್ಕೆ ಉರುಳಿ ಅಲ್ಲೇ ಸಮಾಧಿಯಾಗಬಹುದಾದ ಪರಿಸ್ಥಿತಿ ಭಯಾನಕವಾಗಿತ್ತು. ಜನ, ವಾಹನ ಸಂಚಾರ ಕಡಿಮೆ ಇರುವ ಬಹುತೇಕ ನಿರ್ಜನ ಪ್ರದೇಶ, ಕಲ್ಲುಹೊಂಡಗಳ ನಡುವೆ ನೀರು ಕೆಸರುಮಯ ರಸ್ತೆಯಲ್ಲಿ ಸಂಚರಿಸಿದ್ದನ್ನು, ಕಾಲಲ್ಲಿ ಗಮ್ ಬೂಟ್ ಇಲ್ಲದೆ, ಸಾಧಾರಣ ಶೂಸ್‌ಗಳನ್ನು ಧರಿಸಿದ್ದರಿಂದ ಸ್ನೋ ಬೈಟ್, ಪಾದ ಮರಗಟ್ಟಿ ಕಷ್ಟಪಟ್ಟಿದ್ದನ್ನು ರೋಮಾಂಚನದಿಂದ ಅಪ್ಪ, ಮಗ ನೆನಪಿಸಿಕೊಳ್ಳುತ್ತಾರೆ.

ಪದವಿ ಮುಗಿಸಿ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಸಿದ್ಧರಾಗುತ್ತಿರುವ ಪ್ರಜ್ವಲ್ ಮತ್ತು ಶಿರ್ವದಲ್ಲಿ ದಿನಸಿ ಅಂಗಡಿ ನಡೆಸುತ್ತಿರುವ ರಾಜೇಂದ್ರ ಅವರು ಈ ಹಿಂದೆ ಇದೇ ಬೈಕಿನಲ್ಲಿ ಕನ್ಯಾಕುಮಾರಿ, ರಾಮೇಶ್ವರಕ್ಕೆ ಹೋಗಿ ಬಂದಿದ್ದಾರೆ.---------------

ಇದೇ ಸಂದರ್ಭ ಸಮುದ್ರ ಮಟ್ಟದಿಂದ ಸುಮಾರು 19,024 ಅಡಿ ಎತ್ತರದ ವಿಶ್ವದ ಅತೀ ಎತ್ತರದ ಸ್ಥಳ ಉಮ್ಮಿಂಗ್ಲಾ ತಲುಪಲು ಆಸೆಯಿತ್ತು. ಆದರೆ ಪ್ರತಿಕೂಲ ಹವಾಮಾನ ಮತ್ತು ಆಮ್ಲಜನಕದ ಕೊರತೆ ಇದ್ದುದರಿಂದ ಪ್ರವಾಸವನ್ನು ಅರ್ಧಕ್ಕೆ ಮುಗಿಸಿ ಉಡುಪಿಗೆ ಹಿಂತಿರುಗಬೇಕಾಯಿತು.

। ಪ್ರಜ್ವಲ್ ಶೆಣೈ