ರಂಗಿನೋಕುಳಿಯಲ್ಲಿ ಮಿಂದೆದ್ದ ಫೇಡಾನಗರಿ

| Published : Mar 27 2024, 01:02 AM IST

ರಂಗಿನೋಕುಳಿಯಲ್ಲಿ ಮಿಂದೆದ್ದ ಫೇಡಾನಗರಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಖಕ್ಕೆ ತರಹೇವಾರಿ ಬಣ್ಣ ಬಳಿದುಕೊಂಡು, ಕೈಯಲ್ಲೊಂದು ಪಿಚಕಾರಿ, ಬಾಯಲ್ಲೊಂದು ತುತ್ತೂರಿ. ಕೊರಳಿಗೊಂಡು ತಮಟೆ. ಹ್ಯಾಪಿ ಹೋಳಿ ಎನ್ನುತ್ತಾ ಒಂದೇ ಬೈಕಿನಲ್ಲಿ ಮೂರ್ನಾಲ್ಕು ಜನ ಯುವಕರ ದಂಡು.

ಧಾರವಾಡ:

ಮುಖಕ್ಕೆ ತರಹೇವಾರಿ ಬಣ್ಣ ಬಳಿದುಕೊಂಡು, ಕೈಯಲ್ಲೊಂದು ಪಿಚಕಾರಿ, ಬಾಯಲ್ಲೊಂದು ತುತ್ತೂರಿ. ಕೊರಳಿಗೊಂಡು ತಮಟೆ. ಹ್ಯಾಪಿ ಹೋಳಿ ಎನ್ನುತ್ತಾ ಒಂದೇ ಬೈಕಿನಲ್ಲಿ ಮೂರ್ನಾಲ್ಕು ಜನ ಯುವಕರ ದಂಡು. ಕರ್ಕಶ ಶಬ್ದ ಮಾಡಿಕೊಂಡು ಬಿರು ಬಿಸಿಲು ಲೆಕ್ಕಿಸದೇ ಊರೆಲ್ಲಾ ತಿರುಗಾಡಿ ಬಾಯಿ ಬಾಯಿ ಬಡಿದುಕೊಂಡು ಹೋಳಿ ಹಬ್ಬ ಆಚರಿಸಿದ್ದೇ ಬಂತು..!

ಧಾರವಾಡ ಮಂಗಳವಾರ ಕಲರ್‌ ಫುಲ್‌ ಆಗಿತ್ತು. ಎಲ್ಲಿ ನೋಡಿದರಲ್ಲಿ ಬಣ್ಣದ ಸಂಭ್ರಮ. ಸೋಮವಾರ ರಾತ್ರಿ ಕಾಮಣ್ಣನಿಗೆ ಪೂಜೆ ನೆರವೇರಿಸಿ ಬೆಳಗ್ಗೆ ದಹನ ಮಾಡಿದ್ದೇ ತಡ ಬಣ್ಣದಾಟಕ್ಕೆ ಧಾರವಾಡದ ಮಂದಿ ಸಜ್ಜಾಗಿದ್ದರು. ಚಿಕ್ಕ ಮಕ್ಕಳು, ಯುವಕರು, ಮಹಿಳೆಯರು ಸೇರಿದಂತೆ ವಯಸ್ಸಿನ ಭೇದವಿಲ್ಲದೇ ಹೋಳಿ ಹುಣ್ಣಿಮೆಯ ಆಚರಣೆ ಅವರವರ ಮನಸ್ಸಿನಲ್ಲಿ ಅದೆಷ್ಟು ದಿನಗಳ ಕಾಲ ಇದ್ದ ಒತ್ತಡವನ್ನು ತುಸು ಇಳಿದಂತಾಯಿತು.

ಯುವಕರ ದಂಡಂತೂ ಲಬೋ... ಲಬೋ...ಎಂದು ಬಾಯಿ ಬಡಿದುಕೊಳ್ಳುತ್ತಾ ಇಡೀ ಊರು ತಿರುಗಾಡಿ ತಮ್ಮ ತಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ಬಣ್ಣ ಎಚರಿಸಿ ಸಂಭ್ರಮಿಸಿದರು. ಯುವಕರಿಗೆ ಕಡಿಮೆ ಇಲ್ಲದಂತೆ ಯುವತಿಯರ ತಂಡಗಳು ಬಣ್ಣದಾಟದಲ್ಲಿ ಸಕ್ರಿಯರಾಗಿದ್ದರು. ತಮ್ಮ ತಮ್ಮ ಗೆಳತಿಯರೊಂದಿಗೆ ಧಾರವಾಡದ ಹಲವು ಕಡೆಗಳಲ್ಲಿ ತಿರುಗಿ ಪರಸ್ಪರ ಬಣ್ಣ ಎರಚಾಟದಲ್ಲಿ ತೊಡಗಿದ್ದರು. ಮಧ್ಯಾಹ್ನ ಕಳೆದರೂ ಬಣ್ಣದಾಟದ ರಂಗು ಕಡಿಮೆ ಆಗಿರಲಿಲ್ಲ. ಕಲರ್‌ ಕಲರ್‌ ಬಣ್ಣ ಹಿಡಿದುಕೊಂಡ ಮಕ್ಕಳಿಂದ ಶುರುವಾದ ರಂಗಿನಾಟವು ಬೆಳಗ್ಗೆಯಿಂದ ಸಂಜೆವರೆಗೂ ಇತ್ತು. ನಗರದ ಕರ್ನಾಟಕ ಕಾಲೇಜು, ಸುಭಾಸ ರಸ್ತೆ ಸೇರಿದಂತೆ ಪ್ರಮುಖ ಕಡೆಗಳಲ್ಲಿ ರೇನ್‌ ಡ್ಯಾನ್ಸ್‌, ಡಿಜೆ ಅಬ್ಬರ, ಗಡಿಗೆ ಒಡೆಯುವ ಸ್ಪರ್ಧೆ ಹೋಳಿ ಸಂಭ್ರಮಕ್ಕೆ ಮತ್ತಷ್ಟು ರಂಗೇರುವಂತೆ

ಮಾಡಿದವು.

ಶಾಂತಿಯುತ ಹೋಳಿ..

ಧಾರವಾಡದಲ್ಲಿ ಯಾವುದೇ ಕಾರಣಕ್ಕೂ ಹೋಳಿ ಹಬ್ಬದ ಸಮಯದಲ್ಲಿ ಗದ್ದಲ-ಗಲಾಟೆ ಆಗದಂತೆ ಪೊಲೀಸ್‌ ಇಲಾಖೆ ಕಟ್ಟೆಚ್ಚರ ವಹಿಸಿತ್ತು. ಪೊಲೀಸರೊಂದಿಗೆ ಹೋಂ ಗಾರ್ಡ್‌ ಸಹ ಕೈ ಜೋಡಿಸಿದರು. ಪ್ರಮುಖ ವೃತ್ತಗಳಲ್ಲಿ ಪೊಲೀಸರು ಲಾಠಿ ಹಿಡಿದು ಪಡ್ಡೆ ಹುಡುಗರ ಸೊಕ್ಕು ಇಳಿಸುವಲ್ಲಿ ನಿರತರಾಗಿದ್ದರು. ತೀವ್ರ ಗಲಾಟೆ ಮಾಡುತ್ತಿದ್ದ, ಕರ್ಕಶ ಶಬ್ದ ಮಾಡುತ್ತಿದ್ದ ಬೈಕ್‌ಗಳನ್ನು ಟ್ರಾಫಿಕ್‌ ಪೊಲೀಸರು ವಶಪಡಿಸಿಕೊಂಡಿದ್ದು ಆಯ್ತು. ಬರೀ ನಗರ ಮಾತ್ರವಲ್ಲದೇ ಗ್ರಾಮೀಣ ಪ್ರದೇಶದಲ್ಲೂ ಸಂಭ್ರಮದ ಹೋಳಿ ಹಬ್ಬದಾಚರಣೆ ನಡೆಯಿತು.

ಬಣ್ಣಾಟವಾಡಿದ ಜೋಶಿ..

ಧಾರವಾಡದ ಕರ್ನಾಟಕ ಕಾಲೇಜು ವೃತ್ತದಲ್ಲಿ ಧಾರವಾಡ ಬಣ್ಣದ ಉತ್ಸವ ಸಮಿತಿ ವತಿಯಿಂದ ಏರ್ಪಡಿಸಿದ್ದ ಬಣ್ಣದ ಉತ್ಸವದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಅಭಿಮಾನಿಗಳು ಅವರಿಗೆ ಬಣ್ಣ ಹಚ್ಚಿ ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು. ಅದೇ ರೀತಿ ಸಚಿವರು ಸಹ ಯುವಕರೊಂದಿಗೆ ಬೆರತು ತಾವು ಸಹ ಬಣ್ಣಾಟವಾಡಿ ಸಂಭ್ರಮಿಸಿದರು. ನಂತರ ಗಡಿಗೆ ಒಡೆಯುವ ಸ್ಪರ್ಧೆಗೆ ಚಾಲನೆ ನೀಡಿದ ಅವರು, ಹಿಂದೂ ಸಂಸ್ಕೃತಿಯ ಪ್ರತೀಕವಾದ ಹೋಳಿ ಎಲ್ಲರ ಬಾಳಿನಲ್ಲಿ ಶಾಂತಿ, ಸೌಹಾರ್ದತೆ ತರಲಿ ಎಂದರು. ಮಾಜಿ ಮೇಯರ್‌ ಈರೇಶ ಅಂಚಟಗೇರಿ, ಮುಖಂಡರಾದ ಮೋಹನ ರಾಮದುರ್ಗ, ವಿಷ್ಣುತೀರ್ಥ ಕೊರ್ಲಹಳ್ಳಿ, ಬಸವರಾಜ ಗರಗ, ಅಮಿತ ಪಾಟಿಲ, ಪವನ ಥಿಟೆ, ಶ್ರೀನಿವಾಸ ಕೋಟ್ಯಾನ ಇದ್ದರು.