ಸಾರಾಂಶ
ಹಬ್ಬಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸಬೇಕು. ಶಾಂತಿಯುತವಾಗಿ ಗೌರಿ-ಗಣೇಶ ಹಬ್ಬವನ್ನು ಆಚರಿಸಿ. ಸರ್ಕಾರದ ನಿರ್ದೇಶನದಂತೆ ಹಬ್ಬಗಳು ಪ್ರತಿಯೊಂದು ಧಾರ್ಮಿಕ ಭಾವನೆ ಗೌರವಿಸುವಂತಿರಬೇಕು ಎಂದು ಪಿಎಸ್ಐ ಆಶಾ ರಾಥೋಡ ಹೇಳಿದರು.
ಕನ್ನಡಪ್ರಭ ವಾರ್ತೆ ಕಮಲನಗರ
ಹಬ್ಬಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸಬೇಕು. ಶಾಂತಿಯುತವಾಗಿ ಗೌರಿ-ಗಣೇಶ ಹಬ್ಬವನ್ನು ಆಚರಿಸಿ. ಸರ್ಕಾರದ ನಿರ್ದೇಶನದಂತೆ ಹಬ್ಬಗಳು ಪ್ರತಿಯೊಂದು ಧಾರ್ಮಿಕ ಭಾವನೆ ಗೌರವಿಸುವಂತಿರಬೇಕು ಎಂದು ಪಿಎಸ್ಐ ಆಶಾ ರಾಥೋಡ ಹೇಳಿದರು.ಕಮಲನಗರ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಗುರುವಾರ ಗಣೇಶ ಹಬ್ಬದ ನಿಮಿತ್ತ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಜಾತಿ, ಧರ್ಮಕ್ಕೆ ಧಕ್ಕೆ ತರುವ ರೀತಿಯಲ್ಲಿ ಯಾರೂ ನಡೆದುಕೊಳ್ಳಬಾರದು. ಹಬ್ಬ ಆಚರಣೆ ನೆಪದಲ್ಲಿ ಸಮಾಜದ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಮ ಪಂಚಾಯತ್ ಪಿಡಿಓ ಶೇಷಪ್ಪ ದಶಗೊಂಡ ಮಾತನಾಡಿ, ರಾಷ್ಟ್ರದ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಗಣೇಶ ಹಬ್ಬವನ್ನು ನಾಗರಿಕರೆಲ್ಲರೂ ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು. ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯ ಸಂದರ್ಭದಲ್ಲಿ ಸಾರ್ವಜ ನಿಕರಿಗೆ ಯಾವುದೇ ರೀತಿಯಿಂದ ತೊಂದರೆಯಾಗದಂತೆ ಗಮನ ಹರಿಸಬೇಕು ಎಂದರು.ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪಿಸಿ, ಪರಿಸರದ ಆರೋಗ್ಯ ಕಾಪಾಡಬೇಕು. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೊದಲು ಸಂಬಂಧಪಟ್ಟ ಗ್ರಾಮ ಪಂಚಾಯತಿ, ಪೊಲೀಸ್ ಇಲಾಖೆ, ಜೆಸ್ಕಾಂ ಮುಂತಾದ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪತ್ರ ಪಡೆ ಯಬೇಕು ಎಂದು ತಿಳಿಸಿದರು.
ಗ್ರಾಮದ ಮುಖಂಡರಾದ ಶಿವಾನಂದ ವಡ್ಡೆ, ಗ್ರಾ.ಪಂ.ಸದಸ್ಯ ರಾಜಕುಮಾರ್ ಗಾಯಕ್ವಾಡ, ಮಾಜಿ ಸೈನಿಕ ಗುಂಡಪ್ಪ ದಾನಾ, ಗ್ರಾಪಂ ಮಾಜಿ ಅಧ್ಯಕ್ಷ ಶಿವರಾಜ್ ಜುಲ್ಫೆ, ಸಾಯಿನಾಥ್ ಕಾಂಬಳೆ, ಸುನಿಲ್, ರೋಹಿತ್, ಮಹೇಶ್ ಸಜ್ಜನ್, ಪ್ರಶಾಂತ್ ಮುಂತಾದವರು ಉಪಸಿತರಿದ್ದರು.