ಸಂಭ್ರಮದ ಉರೂಸ್: ಶಾಸಕ ಎಆರ್‌ಕೆ ಭಾಗಿ

| Published : Apr 12 2025, 12:47 AM IST

ಸಾರಾಂಶ

ಯಳಂದೂರು ತಾಲೂಕಿನ ಮದ್ದೂರು ಗ್ರಾಮದಲ್ಲಿ ಗುರುವಾರ ರಾತ್ರಿ ಹಜರತ್ ಖ್ವಾಜ ದಿಲ್‌ಬರ್ ಷಾ ವಲಿ ಉರೂಸ್‌ಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ಎಚ್.ವಿ. ಚಂದ್ರು, ಜೆ.ಶಕೀಲ್ ಅಹಮ್ಮದ್, ಅನ್ಸರ್ ಬೇಗ್ ಸೇರಿದಂತೆ ಅನೇಕರು ಇದ್ದರು.

ಕನ್ನಡಪ್ರಭ ವಾರ್ತೆ ಯಳಂದೂರು

ತಾಲೂಕಿನ ಮದ್ದೂರು ಗ್ರಾಮದ ಸುವರ್ಣಾವತಿ ನದಿ ದಡದಲ್ಲಿರುವ ಐತಿಹಾಸಿಕ ಹಜರತ್ ಖ್ವಾಜ ದಿಲ್‌ಬರ್ ಷಾ ವಲಿ ಉರೂಸ್ (ಗಂಧೋತ್ಸವ) ಗುರುವಾರ ರಾತ್ರಿ ಶಾಸಕ ಎ.ಆರ್.ಕೃಷ್ಣಮೂರ್ತಿ ಸೇರಿದಂತೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು.

ಮಧ್ಯಾಹ್ನ ತಾಲೂಕಿನ ಮಾಂಬಳ್ಳಿ ಗ್ರಾಮದ ತಾಪಂ ಮಾಜಿ ಅಧ್ಯಕ್ಷ ಜೆ.ಶಕೀಲ್ ಅಹಮ್ಮದ್‌ ಮನೆಯಿಂದ ಗಂಧದ ಬಿಂದಿಗೆಯನ್ನು ಅಲಂಕೃತ ಸಾರೋಟಿನಲ್ಲಿ, ವಿವಿಧ ಕಲಾತಂಡಗಳೊಡನೆ ಮಾಂಬಳ್ಳಿ, ಅಗರ ಹಾಗೂ ಮದ್ದೂರು ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಮದ್ದೂರು ಗ್ರಾಮದ ಸುವರ್ಣಾವತಿ ನದಿ ದಡದಲ್ಲಿರುವ ಹಜರತ್ ದಿಲ್‌ಬರ್ ಷಾ ವಲಿ ದರ್ಗಾಕ್ಕೆ ತರಲಾಯಿತು. ಶಾಸಕರಿಂದ ಚಾದರ್ ಅರ್ಪಣೆ:

ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಕೂಡ ಈ ಉತ್ಸವದಲ್ಲಿ ಭಾಗವಹಿಸಿ ದರ್ಗಾಕ್ಕೆ ಹೂವಿನ ಚಾದರ್ (ಹೂದಿಕೆ) ಅರ್ಪಿಸುವ ಮೂಲಕ ಸೌಹಾರ್ದತೆ ಮೆರೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದೊಂದು ಐತಿಹಾಸಿಕ ಸ್ಥಳವಾಗಿದೆ. ನಾನು ಕೂಡ ಈ ರಸ್ತೆಯಲ್ಲಿ ತಿರುಗಾಡುವಾಗ, ನನ್ನ ಚುನಾವಣೆಯ ಸಂದರ್ಭದಲ್ಲಿ ಗೆಲುವಿಗಾಗಿ ಪ್ರಾರ್ಥಿಸಿದ್ದೆ. ನನಗೆ ಒಳಿತಾಗಿದೆ. ಇದೊಂದು ಹಿಂದೂ ಮುಸ್ಲಿಮರ ಭಾವೈಕ್ಯತೆಯ ಕೇಂದ್ರವಾಗಿದೆ. ಎಲ್ಲರೂ ಬಂದು ಇಲ್ಲಿಗೆ ಪೂಜೆ ಮಾಡುವ ವಾಡಿಕೆ ಇದೆ. ಇಂತಹ ಕ್ಷೇತ್ರದಲ್ಲಿ ಪ್ರತಿ ವರ್ಷವೂ ರಂಜಾನ್ ಆದ ಬಳಿಕೆ ಉರೂಸ್ ನಡೆಯುತ್ತದೆ. ನಾನು ಇಲ್ಲಿ ಭಾಗವಹಿಸಿರುವುದು ಅತೀವ ಸಂತಸ ತಂದಿದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಕೊಳ್ಳೇಗಾಲದ ಶಾದಿಮಹಲ್‌ಗೆ ೧ ಕೋಟಿ ರು. ಅನುದಾನ ನೀಡಿದ್ದೇನೆ. ಯಳಂದೂರು ಪಟ್ಟಣದಲ್ಲೂ ಇದರ ನಿರ್ಮಾಣಕ್ಕಾಗಿ ೫೦ ಲಕ್ಷ ರು. ಅನುದಾನ ನೀಡಿದ್ದೇನೆ. ಇದರ ಅಭಿವೃದ್ಧಿಗೂ ಕೂಡ ಮುಂದಿನ ದಿನಗಳಲ್ಲಿ ಕ್ರಮ ವಹಿಸುತ್ತೇನೆ ಎಂದರು.ಗ್ಯಾರಂಟಿ ಯೋಜನೆ ಪ್ರತಿಷ್ಠಾನದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಕೊಳ್ಳೇಗಾಲ ನಗರಸಭಾ ನಾಮನಿರ್ದೇಶತ ಸದಸ್ಯ ಅನ್ಸರ್‌ಬೇಗ್ ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ, ಗೌಡಹಳ್ಳಿ ರಾಜೇಶ್, ತಾಪಂ ಮಾಜಿ ಅಧ್ಯಕ್ಷ ಜೆ. ಶಕೀಲ್ ಅಹಮ್ಮದ್ ಸೇರಿದಂತೆ ಸಾವಿರಾರು ಮಂದಿ ಈ ಉತ್ಸವದಲ್ಲಿ ಭಾಗವಹಿಸಿದ್ದರು.