ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು. ಎಫ್ಐಡಿ ಮುಖಾಂತರ ರೈತರು ಗೊಬ್ಬರ ಖರೀದಿ ಮಾಡಿ ಬೆಳೆ ಬೆಳೆಯುವುದು ಕಷ್ಟ. ಆದ್ದರಿಂದ ಮುಂದಿನ ವರ್ಷದಿಂದ ಹಂತ ಹಂತವಾಗಿ ಈ ಆದೇಶವನ್ನು ಜಾರಿಗೆ ತರಬೇಕೆಂದು ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಒತ್ತಾಯಿಸಿದ್ದಾರೆ.
ಹಾವೇರಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು. ಎಫ್ಐಡಿ ಮುಖಾಂತರ ರೈತರು ಗೊಬ್ಬರ ಖರೀದಿ ಮಾಡಿ ಬೆಳೆ ಬೆಳೆಯುವುದು ಕಷ್ಟ. ಆದ್ದರಿಂದ ಮುಂದಿನ ವರ್ಷದಿಂದ ಹಂತ ಹಂತವಾಗಿ ಈ ಆದೇಶವನ್ನು ಜಾರಿಗೆ ತರಬೇಕೆಂದು ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಧ್ಯಪ್ರಾಚ್ಯದ ಯುದ್ಧದ ಬಿಕ್ಕಟ್ಟಿನಿಂದ ಯೂರಿಯಾ ಮತ್ತು ಡಿಎಪಿ ಸೇರಿದಂತೆ ರಸಗೊಬ್ಬರ ಬೆಲೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಗೊಬ್ಬರದ ಕಚ್ಚಾ ವಸ್ತುಗಳ ಕೊರತೆಯಿಂದ ಉತ್ಪಾದನೆ ಕಡಿತವಾಗಿದೆ. ಆದಕಾರಣ ಜಿಲ್ಲಾಧಿಕಾರಿಗಳು ಹಾಗೂ ಕೃಷಿ ಜಂಟಿ ನಿರ್ದೇಶಕರು ಜಿಲ್ಲೆಗೆ ಸಮರ್ಪಕವಾಗಿ ಗೊಬ್ಬರ ಕೊಡಿಸಲು ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.ಈ ವರ್ಷ ಮುಂಗಾರು ಚುರುಕುಗೊಂಡಿದ್ದು ರೈತರಿಗೆ ಬಿತ್ತನೆಗೆ ಗೊಬ್ಬರ ಸಿಗದಿದ್ದರೆ ಹೋರಾಟದ ಹಾದಿ ಅನಿವಾರ್ಯ, 2008ರ ಗೋಲಿಬಾರ್ ಇನ್ನೂ ಮಾಸಿಲ್ಲ, ಸರ್ಕಾರಗಳು ಅಗತ್ಯವಾದ ಕ್ರಮ ಕೈಗೊಳ್ಳಬೇಕು. ಬಗರ್ ಹುಕುಂ ರೈತರಿಗೆ ರಸಗೊಬ್ಬರ ಸಿಗುವಂತಾಗಲಿ. ಇಲ್ಲದೇ ಹೋದಲ್ಲಿ ಆಹಾರ ಉತ್ಪಾದನೆ ಕುಸಿತವಾಗುವ ಸಾಧ್ಯತೆ ಇದೆ.ಪ್ರಧಾನಿ ನರೇಂದ್ರ ಮೋದಿ ಅವರು ಸಾವಯವ ಕೃಷಿಗೆ ಕರೆ ನೀಡಿದ್ದು ಅದು ತಕ್ಷಣಕ್ಕೆ ಸಾಧ್ಯವಿಲ್ಲ. ಮೊದಲು ಸಾವಯವ ಕೃಷಿಗೆ ಸರ್ಕಾರಗಳು ಪ್ರೋತ್ಸಾಹ ನೀಡಲಿ. ಇದಕ್ಕೆ ಬೇಕಾಗುವ ಹಸು ಖರೀದಿಗೆ ಮತ್ತು ಕೊಟ್ಟಿಗೆಗೆ ಇತರ ಸಾಮಗ್ರಿಗೆ ಶೇ.50ರಷ್ಟು ಸಬ್ಸಿಡಿ ನೀಡಬೇಕೆಂದರು.ರಾಜ್ಯಾದ್ಯಂತ ಪರವಾನಗಿ ಭೂ ಮಾಪಕರು ಮುಷ್ಕರ ಮಾಡುತ್ತಿದ್ದು, ಇದರಿಂದ ರೈತರಿಗೆ ಬಹಳಷ್ಟು ಅನಾನುಕೂಲವಾಗುತ್ತಿದೆ. ಸರ್ವೆ ಹದ್ದು ಬಂದೋಬಸ್ತ್ ಪೊಡಿ ಮುಕ್ತಾ ಅಭಿಯಾನ ನ್ಯಾಯಾಲಯದ ಪ್ರಕರಣಗಳಿಗೆ ತೊಂದರೆಯಾಗಿದೆ. ರಾಜ್ಯ ಸರ್ಕಾರ ಕೂಡಲೇ ಗಮನಹರಿಸಿ ಮುಷ್ಕರನಿರತ ಭೂ ಮಾಪಕರ ಸಮಸ್ಯೆಗಳನ್ನು ಬಗೆಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.