ಕನ್ನಡಪ್ರಭ ವಾರ್ತೆ ಹೊಸದುರ್ಗ
ಅನಗತ್ಯ ಯೂರಿಯಾ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಧರ್ತಿ ಮಾತಾ ಬಚಾವೋ’ ಅಭಿಯಾನದಡಿ ನಿಗ್ರಾಣಿ ಸಮಿತಿಗಳನ್ನು ರಚಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್.ಈಶ ತಿಳಿಸಿದರು.ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷಿ ಪರಿಕರ ಮಾರಾಟಗಾರರಿಗೆ ಕೆ-ಕಿಸಾನ್ ತಂತ್ರಾಂಶದಲ್ಲಿ ಯೂರಿಯಾ ರಸಗೊಬ್ಬರ ವಿತರಣೆ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದರು.
ಭೂಮಿಗೆ ಯೂರಿಯಾ ರಸಗೊಬ್ಬರವನ್ನು ಹೆಚ್ಚಾಗಿ ಹಾಕುವುದನ್ನು ಕಡಿಮೆ ಮಾಡಬೇಕು ಹರಳು ರೂಪದ ಯೂರಿಯಾ ಬದಲಿಗೆ ದ್ರವ ರೂಪದ ನ್ಯಾನೋ ಯೂರಿಯಾ ಬಳಸಬೇಕು. ಕಾಂಪ್ಲೆಕ್ಸ್ ಗೊಬ್ಬರಗಳನ್ನು ಹಾಗೂ ಸಾವಯವ ಗೊಬ್ಬರಗಳನ್ನು ಹೆಚ್ಚಾಗಿ ಬಳಸಬೇಕು ಎಂದರು.ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಜಾಗೃತ ಕೋಶದ ಸಹಾಯಕ ಕೃಷಿ ನಿರ್ದೇಶಕ ಸಂಕಾಳ ಮಲ್ಲನಗೌಡ ಮಾತನಾಡಿ, 2026-27ನೇ ಸಾಲಿನ ಮುಂಗಾರು ಹಂಗಾಮಿನಿಂದ ಯೂರಿಯ ರಸಗೊಬ್ಬರವನ್ನು ಕೃಷಿ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ತಂತ್ರಾಂಶದ ಮೂಲಕ ರೈತರ ಎಫ್ಐಡಿ ಸಂಖ್ಯೆಯನ್ನು ಬಳಸಿಕೊಂಡು ಒಂದು ಎಕರೆಗೆ ಒಂದು ಚೀಲ ಯೂರಿಯ ರಸಗೊಬ್ಬರವನ್ನು ಮಾತ್ರ ನೀಡಬೇಕು ಎಂದರು.
ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿಸಿ ಕಾಳಸಂತೆಯಲ್ಲಿ ದಂಧೆ ಮಾಡುತ್ತಿರುವುದಕ್ಕೆ ಕಡಿವಾಣ ಹಾಕುವುದು, ರೈತರು ಸಹ ಮಿತವ್ಯಯವಾಗಿ ರಸಗೊಬ್ಬರ ಬಳಕೆ ಮಾಡುವಂತಾಗಲೂ ಹಾಗೂ ಮಾರಾಟದ ಮೇಲೆಯೂ ನಿಯಂತ್ರಣ ಮಾಡುವ ಉದ್ದೇಶದಿಂದ ಕೆ-ಕಿಸಾನ್ ತಂತ್ರಾಂಶದ ಮೂಲಕ ರಸಗೊಬ್ಬರ ವಿತರಣೆ ಮಾಡಲಾಗುತ್ತದೆ ಎಂದರು.
ಸಹಕಾರ ಅಭಿವೃದ್ಧಿ ಅಧಿಕಾರಿ ರಾಮು ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಎಲ್ಲಾ ಕಾರ್ಯನಿರ್ವಹಣಾಧಿಕಾರಿಗಳಿಗೆ ರಸಗೊಬ್ಬರ ದಾಸ್ತಾನು ಮಾಡಿಕೊಂಡು ಮಾರಾಟ ಮಾಡಬೇಕು ರಸಗೊಬ್ಬರ ಪರವಾನಗಿ ಪಡೆಯದೇ ಇರುವ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ರಸಗೊಬ್ಬರ ಪರವಾನಗಿಯನ್ನು ಪಡೆದುಕೊಳ್ಳಲು ಸೂಚನೆ ನೀಡಿದರು.
ಈ ವೇಳೆ ಕಂದಾಯ ಇಲಾಖೆಯ ಶಿರಸ್ತೇದಾರ ಶಿವಾನಂದ, ರಸಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷ ತ್ಯಾಗರಾಜ್, ಕೃಷಿ ಅಧಿಕಾರಿಗಳಾದ ವಿನಯ್ ಕುಮಾರ್ ಬಿ.ಕೆ, ಮಂಜುಳ ಮಳಗಿ, ಆತ್ಮ ಸಿಬ್ಬಂದಿಗಳು ಹಾಗೂ ತಾಲೂಕಿನ ಎಲ್ಲಾ ಖಾಸಗಿ ರಸಗೊಬ್ಬರ ಮಾರಾಟಗಾರರು ಮತ್ತು ಕೃಷಿ ಪತ್ತಿನ ಸಹಕಾರ ಸಂಘ, ಟಿಎಪಿಸಿಎಂಎಸ್ ಮತ್ತು ರೈತ ಉತ್ಪಾದಕ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು. ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಕ್ರಮ: ಮಲ್ಲನಗೌಡಜಾಗೃತ ಕೋಶದ ಸಹಾಯಕ ಕೃಷಿ ನಿರ್ದೇಶಕರಾದ ಸಂಕಾಳ ಮಲ್ಲನಗೌಡ ಮಾತನಾಡಿ, ಕೆ-ಕಿಸಾನ್ ತಂತ್ರಾಂಶದ ಮೂಲಕ ರೈತರ ಎಫ್ಐಡಿ ನಮೂದಿಸಿ ಅಧಿಕೃತ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಯೂರಿಯ ರಸಗೊಬ್ಬರವನ್ನು ಮಾರಾಟ ಮಾಡಬೇಕು ಚಿಲ್ಲರೆ ರಸಗೊಬ್ಬರ ಮಾರಾಟಗಾರರು ತಮ್ಮ ಎಲ್ಲ ಓ ಫಾರಂ ನವೀಕರಣಗೊಳಿಸಿಕೊಳ್ಳಬೇಕು. ಒಂದು ವೇಳೆ ಮಾರಾಟಗಾರರು ಓ ಫಾರಂಗಳ ನೋಂದಣಿ ಇಲ್ಲದೇ ಮಾರಾಟ ಮಾಡಿದಲ್ಲಿ ಹಾಗೂ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಥವಾ ಕೃಷಿಯೇತರ ಬಳಕೆಗೆ ಯೂರಿಯಾ ರಸಗೊಬ್ಬರವನ್ನು ಮಾರಾಟ ಮಾಡಿದಲ್ಲಿ ರಸಗೊಬ್ಬರ ನಿಯಂತ್ರಣ ಕಾಯ್ದೆ 1985 ಮತ್ತು ಅತಗ್ಯ ವಸ್ತುಗಳ ಕಾಯ್ದೆ 1955 ಗಳನ್ವಯ ಮಾರಾಟಗಾಗರರ ಮೇಲೆ ನಿರ್ದಾಕ್ಷಣೆ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.