ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಸಂತೆಯಲ್ಲಿ ವ್ಯಾಪಾರ ಮಾಡುವ ಜಾಗದ ವಿಚಾರಕ್ಕೆ ಒಂದೇ ಕೋಮಿನ ಎರಡು ಕುಟುಂಬಗಳ ಮಧ್ಯದ ಜಗಳವು ಮನೆ, ಅಂಗಡಿಗೆ ನುಗ್ಗಿ ಮಾರಕಾಸ್ತ್ರಗಳಿಂದ ಪರಸ್ಪರರ ಹೊಡೆದಾಡಿಕೊಂಡು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಚನ್ನಗಿರಿ ತಾಲೂಕು ಹೊನ್ನೆಬಾಗಿ ಗ್ರಾಮದಲ್ಲಿ ನಡೆದಿದೆ.ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಸಂತೆಗೆಂದು ಸಾಗಿಸಿದ್ದ ಸರಕು ವಾಹನ ನಿಲ್ಲಿಸಿದ್ದ ಜಾಗದ ವಿಚಾರಕ್ಕೆ ಚನ್ನಗಿರಿ ತಾಲೂಕು ಹೊನ್ನೆಬಾಗಿ ಗ್ರಾಮದ ಚೌಕತ್ ಅಲಿ ಮತ್ತು ಸೈಯದ್ ಘನಿ ಎಂಬವರ ಕುಟುಂಬಗಳ ಮಧ್ಯೆ ಸಣ್ಣದಾಗಿ ಶುರುವಾದ ಜಗಳ ಮಾರಣಾಂತಿಕ ಹಲ್ಲೆ ಮಟ್ಟಕ್ಕೆ ತಲುಪಿದೆ. ಈ ಬಗ್ಗೆ ಉಭಯ ಕುಟುಂಬದ ಮಹಿಳೆಯರು ದೂರು, ಪ್ರತಿ ದೂರು ದಾಖಲಿಸಿದ್ದಾರೆ.
ಆಗಿದ್ದೇನು?:ತರೀಕೆರೆ ಸಂತೆಗೆ ಜೂ.19ರ ರಾತ್ರಿ 11.30ರ ವೇಳೆ ಹೊನ್ನೆಬಾಗಿಯ ಎರಡೂ ಕುಟುಂಬದವರ ಮಧ್ಯೆ ವ್ಯಾಪಾರ ಮಾಡುವ ಜಾಗದ ವಿಚಾರದಕ್ಕೆ ಜಗಳ ಶುರುವಾಗಿದೆ. ಮಾರನೆಯ ದಿನ ಬೆಳಗ್ಗೆ 11ರ ವೇಳೆ ಹೊನ್ನೆಬಾಗಿಯಲ್ಲಿ ಎಲ್ಲರೂ ತಮ್ಮ ಮನೆಗೆ ಏಕಾಏಕಿ ನುಗ್ಗಿ, ಮನೆಯಲ್ಲಿದ್ದ ಹೆಣ್ಣುಮಕ್ಕಳು, ಚಿಕ್ಕ ಮಕ್ಕಳ ಮೇಲೆ ಕೈ-ಕಾಲಿನಿಂದ ಹೊಡೆದು, ತೀವ್ರ ನೋವುಂಟು ಮಾಡಿದ್ದಾರೆ. ಏನೇ ದೂರು ನೀಡಿದರೂ ಹೆದರುವುದಿಲ್ಲ ಎಂದು ಮಾರಕಾಸ್ತ್ರಗಳ ಪ್ರದರ್ಶಿಸಿ, ಬೆದರಿಕೆ ಹಾಕಿದ್ದಾರೆ. ದೌರ್ಜನ್ಯ ಎಸಗಿದ ಹೊನ್ನೆಬಾಗಿ ಸೈಯದ್ ಘನಿ ಹಾಗೂ ಕುಟುಂಬದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ತಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಎಂದು ಬಷೀರ್ ಜಾನ್ ಎಂಬ ಮಹಿಳೆ ದೂರು ನೀಡಿದ್ದಾರೆ.
ಅದೇ ರೀತಿ ಮತ್ತೊಂದು ಕುಟುಂಬದ ಮುಬೀನಾ ಬಾನು ಸಹ ದೂರು ನೀಡಿದ್ದು, ತಮ್ಮ ಹಾಗೂ ತಮ್ಮ ಪತಿ ಸೈಯದ್ ಘನಿ ಸಾಬ್, ಕುಟುಂಬದ ಸೈಯದ್ ತನ್ವೀರ್, ಸೈಯದ್ ಅಬ್ರಾರ್, ಸೈಯದ್ ನ್ಯಾಮತ್ ಮೇಲೆ ತಮ್ಮದೇ ಗ್ರಾಮದ ಮಲಕ್ ಬಿನ್ ಶೌಕತ್ ಅಲಿ, ಇಮ್ರಾನ್ ಅಲಿ, ಶರೀಫ್, ಶೌಕತ್ ಅಲಿ, ನೌಶಾದ್, ಬೈಫ್ ಎಂಬುವರು ಹಲ್ಲೆ ಮಾಡಿದ್ದಾರೆ. ತರೀಕೆರೆ ಸಂತೆಗೆ ಹೋಗಿದ್ದ ವೇಳೆ ಜಾಗದ ವಿಚಾರಕ್ಕೆ ಹಳೇ ದ್ವೇಷದಿಂದ ಮಲಕ್ ಇತರೆ 6 ಜನ ಜಗಳ ಮಾಡಿದ್ದರು ಎಂದು ತಿಳಿಸಿದ್ದಾರೆ. ಪ್ರಕರಣಗಳ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.- - -
(ಫೋಟೋಗಳಿವೆ).