ಲಿಂಗಾಯತ ಧರ್ಮ ಮಾನ್ಯತೆಗಾಗಿ ಹೋರಾಟ: ಮಾತೆ ಗಂಗಾದೇವಿ

| Published : Nov 03 2025, 01:15 AM IST

ಲಿಂಗಾಯತ ಧರ್ಮ ಮಾನ್ಯತೆಗಾಗಿ ಹೋರಾಟ: ಮಾತೆ ಗಂಗಾದೇವಿ
Share this Article
  • FB
  • TW
  • Linkdin
  • Email

ಸಾರಾಂಶ

ಲಿಂಗಾಯತ ಧರ್ಮಕ್ಕೆ ಮಾನ್ಯತೆಯನ್ನು ಪಡೆದೇ ಪಡೆಯುತ್ತೇವೆ. ಅದಕ್ಕಾಗಿ ನಿರಂತರ ಹೋರಾಡುತ್ತೇವೆ ಎಂದು ಕೂಡಲ ಸಂಗಮದ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಲಿಂಗಾಯತ ಧರ್ಮಕ್ಕೆ ಮಾನ್ಯತೆಯನ್ನು ಪಡೆದೇ ಪಡೆಯುತ್ತೇವೆ. ಅದಕ್ಕಾಗಿ ನಿರಂತರ ಹೋರಾಡುತ್ತೇವೆ ಎಂದು ಕೂಡಲ ಸಂಗಮದ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.

ನಗರದ ಬಸವ ಬಳಗದಲ್ಲಿ ಭಾನುವಾರ ಮಾಧ್ಯಗೋಷ್ಠಿಯಲ್ಲಿ ಮಾತನಾಡಿ, ನಾವೆಲ್ಲಾ ಸಾಂಸ್ಕೃತಿಕವಾಗಿ ನಾವೆಲ್ಲರೂ ಹಿಂದೂಗಳು. ಆದರೆ, ಧಾರ್ಮಿಕವಾಗಿ ಅಲ್ಲ ಎಂದರು.

ಹಿಂದೂ ಎನ್ನುವುದು ಧರ್ಮವಲ್ಲ, ಅದೊಂದು ಜೀವನ ಪದ್ಧತಿ. ನಮಗೆ ಧರ್ಮ ಕೊಟ್ಟಿರುವ ಧರ್ಮಗುರು ಬಸವಣ್ಣನವರು. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವನ್ನು ನಾವು ಮುಂದುವರಿಸುತ್ತೇವೆ ಎಂದು ತಿಳಿಸಿದರು.

ಕೂಡಲ ಸಂಗಮದಲ್ಲಿ ನ.11ರಂದು ಮತ್ತೊಂದು ಸಮಾವೇಶ ಮಾಡುತ್ತೇವೆ. ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟವು ಇಲ್ಲಿಗೆ ನಿಲ್ಲುವುದಿಲ್ಲ. ಮುಂದೆ ಇಟ್ಟಿರುವ ಹೆಜ್ಜೆಯನ್ನು ಯಾವುದೇ ಕಾರಣಕ್ಕೂ ಹಿಂದೆ ತೆಗೆಯಬಾರದೆಂಬ ನಿರ್ಣಯ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಬಸವಧರ್ಮದ ಅನುಯಾಯಿಗಳಿಗೆ ಕೂಡಲ ಸಂಗಮವೇ ಧರ್ಮಕ್ಷೇತ್ರವಾಗಿದೆ. ವೀರಶೈವ ಲಿಂಗಾಯತವೆಂದುಕೊಂಡು ಹೋದರೆ ಇನ್ನೂ ಒಂದು ಶತಮಾನ ಕಳೆದರೂ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವುದಿಲ್ಲ. ಲಿಂಗಾಯತ ಧರ್ಮವೆಂದು ಹೋದರೆ ಮಾತ್ರವೇ ನಮಗೆ ಪ್ರತ್ಯೇಕ ಧರ್ಮದ ಮಾನತೆ ಸಿಗುತ್ತದೆ ಎಂದು ಹೇಳಿದರು.

ಮಾತೆ ಮಹಾದೇವಿಯವರೆ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗಿಗೆ ಮುನ್ನುಡಿ ಬರೆದಿದ್ದರು. ದಶಕಗಳಿಂದಲೂ ಈ ಹೋರಾಟ ನಡೆಯುತ್ತಲೇ ಇದೆ. ವೀರಶೈವ ಲಿಂಗಾಯತವೆಂದಾದರೆ ನಮಗೆ ಪ್ರತ್ಯೇಕ ಧರ್ಮದ ಮಾನ್ಯತೆಯೆಂಬುದು ಮರೀಚಿಕೆಯಾಗುತ್ತದೆ. ಹಾಗಾಗಿಯೇ ಲಿಂಗಾಯತ ಧರ್ಮದ ಮಾನ್ಯತೆಗಾಗಿಯೇ ನಾವೆಲ್ಲರೂ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಲಿಂಗಾಯತ ಧರ್ಮಕ್ಕೆ ಮಾನ್ಯತೆ ಪಡೆಯುವ ಛಲದಿಂದಲೇ ಮುನ್ನುಗ್ಗಿದ್ದೇವೆ. ಇದು ಇಂದು ನಿನ್ನೆಯದಲ್ಲ, ದಶಕಗಳ ಹಿಂದಿನ ಕನಸಾಗಿದೆ. ಈಗ ನನಸಾಗುವ ಕಾಲವು ಸಮೀಪಿಸುತ್ತಿದೆ. ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಸ್ವಾಮೀಜಿ ಎಲ್ಲರೂ ಒಂದಾಗೋಣವೆಂದು ಕರೆ ನೀಡಿದ್ದಾರೆ. ಬಸವಣ್ಣನವರ ವಚನಗಳೇ ಧರ್ಮಗ್ರಂಥ, ಕೂಡಲ ಸಂಗಮವೇ ಧರ್ಮಕ್ಷೇತ್ರವೆಂದು ರಂಭಾಪುರಿ ಶ್ರೀಗಳು ನಂಬಿದಾಗ ನಾವು ಶ್ರೀಗಳ ಹೇಳಿಕೆ ಬಗ್ಗೆ ಯೋಚಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಸವಾದಿ ಶರಣರು ಬೀದರ್‌ನಿಂದ ಹಿಂದೂ ಸಮಾವೇಶ‍ವನ್ನು ಮಾಡುತ್ತೇವೆಂದಿದ್ದಾರೆ. ಶರಣರೆಲ್ಲರೂ ಬರಲಿ ಎಂಬ ಉದ್ದೇಶದಿಂದ ಅಂತಹವರೆಲ್ಲಾ ಮುಖವಾಡವನ್ನು ಹಾಕಿಕೊಂಡಿದ್ದಾರೆ. ಆದರೆ, ಈಚೆಗೆ ಎಲ್ಲಾ ಶರಣರೂ ಎಚ್ಚೆತ್ತಿದ್ದಾರೆ. ಗುರು-ವಿರಕ್ತರು, ಶರಣರು ಲಿಂಗಾಯತದ ಪರಂಪರೆ ಒಂದಾಗಲು ಬಸವಣ್ಣನವರನ್ನು ಧರ್ಮಗುರುವೆಂದು ಒಪ್ಪಿಕೊಂಡಾಗ ಮಾತ್ರ ಒಂದಾಗುತ್ತೇವೆಂದು ಪುನರುಚ್ಛರಿಸಿದರು.

ಪಾಂಡೋಮಟ್ಟಿ ಗುರುಬಸವ ಸ್ವಾಮೀಜಿ, ಸದ್ಗುರು ಬಸವ ಯೋಗಿ ಸ್ವಾಮೀಜಿ, ಹುಚ್ಚಪ್ಪ ಮಾಸ್ತರ್, ರಾಷ್ಟ್ರೀಯ ಬಸವದಳ ಜಿಲ್ಲಾ ಸಮಿತಿ ಅಧ್ಯಕ್ಷ ವೈ.ನರೇಶಪ್ಪ, ಕೆ.ವೀರಣ್ಣ, ಪ್ರಧಾನ ಕಾರ್ಯದರ್ಶಿ ಎನ್.ಚಂದ್ರಮೌಳಿ, ಕೆ.ವಿವೇಕ್, ಕೆ.ಬಿ ಪರಮೇಶಪ್ಪ, ಮಮತಾ ನಾಗರಾಜ, ಕುಸುಮ ಲೋಕೇಶ. ಎ.ಚಂದ್ರಶೇಖರ, ರವೀಂದ್ರನಾಥ, ಷಣ್ಮುಖಯ್ಯ, ವೀಣಾ ಮಂಜುನಾಥ, ವನಜ ಮಹಾಲಿಂಗಪ್ಪ, ಪಲ್ಲವಿ, ಮಂಜುನಾಥ ಮೇಟಿ ಇತರರು ಇದ್ದರು. ನಂತರ ರಾಷ್ಟ್ರೀಯ ಬಸವ ದಳದ ಜಿಲ್ಲಾ ಸಮಾವೇಶ ನಡೆಯಿತು.

ಕನೇರಿ ಶ್ರೀಗಳ ಹೇಳಿಕೆಗೆ ಮಾತೆ ಗಂಗಾದೇವಿ ಆಕ್ಷೇಪ

ಕಾವಿ ಧರಿಸಿದ ನಂತರ ನಾವು ಅಶ್ಲೀಲ ಪದಗಳು, ಶಬ್ಧಗಳನ್ನು ಬಳಸಬಾರದು. ವೈಚಾರಿಕ ಭಿನ್ನಾಭಿಪ್ರಾಯವಿದ್ದರೆ ಮಾತನಾಡೋಣ. ಅದನ್ನು ಬಿಟ್ಟು ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ ಎಂದು ಕೂಡಲ ಸಂಗಮದ ಬಸವಧರ್ಮ ಪೀಠದ ಮಾತೆ ಗಂಗಾದೇವಿ ಸಲಹೆ ನೀಡಿದರು.

ಬಸವ ಸಂಸ್ಕೃತಿ ಅಭಿಯಾನದ ಕುರಿತಂತೆ ಕನೇರಿ ಮಠದ ಶ್ರೀಗಳು ವೈಯಕ್ತಿಕವಾಗಿ ಮಾತನಾಡಿದ್ದು ಸರಿಯಲ್ಲ. ಅಭಿಯಾನದ ಯಶಸ್ಸಿನ ಬಗ್ಗೆ ಕನೇರಿ ಶ್ರೀಗಳು ಸಂತೋಷಪಡಬೇಕಿತ್ತು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ಧರ್ಮ ಒಡೆಯುತ್ತಿದ್ದಾರೆಂಬ ಆರೋಪ ಮಾಡಲಾಗುತ್ತಿದೆ. ಧರ್ಮ ಎನ್ನುವುದು ಮಡಿಕೆಯಲ್ಲ. ಯಾರೋ ಒಡೆದು ಹಾಕುವುದಕ್ಕೆ. ಬಸವಣ್ಣನವರ ಬಗ್ಗೆ ಸಿದ್ದರಾಮಯ್ಯಗೆ ಅಭಿಮಾನವಿದೆ. ಹಾಗಾಗಿಯೇ ಅಭಿಮಾನದಿಂದ ಮಾತನಾಡುತ್ತಾರೆ ಎಂದು ಹೇಳಿದರು.